ಉಪ್ಪಿನಂಗಡಿಯಲ್ಲಿ ಮರ ಕಡಿತ, ವಲಸೆ ಹಕ್ಕಿಗಳ ಗೂಡು ನಾಶ
ಮಂಗಳೂರು, ಆಗಸ್ಟ್. 25 : ವಲಸೆ ಪಕ್ಷಿಗಳು ಗೂಡು ಕಟ್ಟಿದ ಮರಗಳ ಕೊಂಬೆಗಳನ್ನು ಕಡಿಯಲು ಮುಂದಾದ ವೇಳೆ ಮರಿ ಪಕ್ಷಿಗಳು ಕೆಳಗೆ ಬಿದ್ದು ಸಾವನ್ನಪ್ಪಿವೆ. ಸ್ಥಳೀಯರು ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಿ, ಮರ ಕಡಿಯುವ ಕಾರ್ಯಕ್ಕೆ ತಡೆ ನೀಡಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯ ರಸ್ತೆ ಬದಿ ಸಾಲು ಮರಗಳಿದ್ದು, ಅದರಲ್ಲಿ ವಲಸೆ ಪಕ್ಷಿಗಳು ಬಂದು ಗೂಡು ಕಟ್ಟಿ ಮರಿ ಮಾಡಿದ್ದವು. ಆದರೆ, ಈ ಮರದ ಕೊಂಬೆಗಳು ಶಾಲೆಯ ಕಟ್ಟಡದ ಮೇಲ್ಛಾವಣಿಯ ಮೇಲೆ ಹಾಗೂ ಅಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿಗಳಿಗೆ ತಾಗಿ ಕೊಂಡಿದ್ದರಿಂದ ಅಪಾಯಕಾರಿಯಾಗಿ ಪರಿಣಮಿಸಿತ್ತು.
ವಿದೇಶಿ ಹಕ್ಕಿ ಬೇಟೆಯಾಡಿದ ದೃಶ್ಯ ವೈರಲ್, ಓರ್ವ ಅಂದರ್
ಶಾಲೆಯ ಆಡಳಿತ ಮಂಡಳಿ ಮರದ ಕೊಂಬೆ ಕಡಿಯಲು ಕಾರ್ಮಿಕರನ್ನು ಕರೆಸಿತ್ತು. ಕೊಂಬೆ ಕಡಿಯಲು ಆರಂಭಿಸುತ್ತಿದ್ದಂತೆ ಮರದಲ್ಲಿದ್ದ ಪಕ್ಷಿಗಳು ವಿಚಿತ್ರ ಧ್ವನಿಗಳಿಂದ ಕೂಗತೊಡಗಿದವು, ಒಂದೆರಡು ಹಕ್ಕಿ ಮರಿಗಳು ಕೆಳಗೆ ಬಿದ್ದು ಸತ್ತು ಹೋದವು, ಕೆಲವು ಹಕ್ಕಿ ಮರಿಗಳು ಕೆಳಗೆ ಬಿದ್ದು ಒದ್ದಾಡ ತೊಡಗಿದವು.
ಮಂಗಗಳಿಗೆ ಹಾಕಿದ್ದ ನೈಲಾನ್ ಬಲೆಯಲ್ಲಿ ಸಿಲುಕಿ ಪಕ್ಷಿಗಳ ಸಾವು
ಇದನ್ನು ಕಂಡ ಸ್ಥಳೀಯ ವ್ಯಾಪಾರಿಗಳು ಅರಣ್ಯ ಇಲಾಖೆಗೆ ದೂರು ನೀಡಿದರು. ಮರಿ ಹಕ್ಕಿಗಳು ಬಲಿತು ಹಾರಾಟ ನಡೆಸುವ ತನಕ ಮರದ ಕೊಂಬೆ ಕಡಿಯಲು ಅವಕಾಶ ನೀಡದಂತೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದರು. ಹಕ್ಕಿಗಳು ಗೂಡು ಕಟ್ಟಿರುವಾಗ ಕೊಂಬೆ ಕತ್ತರಿಸಲು ಮುಂದಾದ ಶಾಲೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
ಮರದಲ್ಲಿ ಹಕ್ಕಿಗಳು ಗೂಡು ಕಟ್ಟಿ ಕಟ್ಟಿದ್ದರೂ ಅದರ ಗೆಲ್ಲುಗಳನ್ನು ಕಡಿಯಲು ಮುಂದಾದ ಕಾರ್ಮಿಕರನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿ ಸಂಧ್ಯಾ ವಶಕ್ಕೆ ತೆಗೆದುಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.