ಮಂಗಳೂರಿನಲ್ಲಿ ಮತ್ತೆ ಬಿರುಗಾಳಿ ಸಹಿತ ಭಾರಿ ಮಳೆಯ ಎಚ್ಚರಿಕೆ
ಮಂಗಳೂರು, ಜೂನ್ 5: ಕರಾವಳಿಯಲ್ಲಿ ಮತ್ತೆ ಮಹಾಮಳೆಯ ಆತಂಕ ಮೂಡಿದೆ. ಕರಾವಳಿಯಲ್ಲಿ ಜೂನ್ 7 ರಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನಾ ಇಲಾಖೆ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಮಂಗಳೂರಿಗರಲ್ಲಿ ಮತ್ತೇ ಮಹಾಮಳೆಯ ಅತಂಕ ಎದುರಾಗಿದೆ.
ಕರಾವಳಿಗೆ ಈಗಾಗಲೇ ಮುಂಗಾರು ಮಾರುತಗಳ ಪ್ರವೇಶವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್ 6 ರ ಬಳಕೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ . ಉಳಿದಂತೆ ಬಹುತೇಕ ಜಿಲ್ಲೆಗಳ ಹಲವೆಡೆ ಗುಡುಗಿನಿಂದ ಕೂಡಿದ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕಕ್ಕೆ ನೈಋತ್ಯ ಮುಂಗಾರು: ಕರಾವಳಿಯಲ್ಲಿ ಮತ್ತೆ ಪ್ರವಾಹ ಭೀತಿ
ಈ ನಡುವೆ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದು ಕರಾವಳಿಯ ಅದರಲ್ಲೂ ಮಂಗಳೂರಿಗರಲ್ಲಿ ಭಯ ಸೃಷ್ಟಿಸಿದೆ.
ಕಳೆದ ಮೇ 29 ರಂದು ಮಂಗಳೂರಿನಲ್ಲಿ ಸುರಿದ ಮಹಾ ಮಳೆಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳು ತತ್ತರಿಸಿದ್ದವು. ಮಂಗಳೂರಿನ ಬಹುತೇಕ ಭಾಗದಲ್ಲಿ ಮಳೆ ನೀರು ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರಿ ಸುಮಾರು 6 ಗಂಟೆಗಳ ಕಾಲ ನಿರಂತರವಾಗಿ ಸುರಿದ ಮಹಾಮಳೆ ಮಂಗಳೂರಿನ ಜನ ಜೀವನವನ್ನೇ ಅಸ್ತವ್ಯಸ್ತ ಮಾಡಿತ್ತು. ನಾಲೆ, ಚರಂಡಿ, ಕಾಲುವೆಗಳು ಉಕ್ಕಿ ರಸ್ತೆ ಮೇಲೆ ಹರಿದ ಪರಿಣಾಮ ಜನ ಜೀವನವೇ ಸ್ಥಬ್ದಗೊಂಡಿತ್ತು.
ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ
ಮಹಾಮಳೆ ಸೃಷ್ಠಿಸಿದ್ದ ಪ್ರವಾಹ ಪರಿಸ್ಥತಿಯಿಂದ ಈಗಷ್ಟೇ ಹೊರಬರುತ್ತಿರುವ ಮಂಗಳೂರಿಗರಿಗೆ ಮತ್ತೆ ಮಹಾಮಳೆಯ ಆತಂಕ ಕಾಡಲಾರಂಭಿಸಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗು ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಎಚ್ಚೆತ್ತುಕೊಂಡಿದ್ದು ಕಳೆದ ಮಹಾಮಳೆಯ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದ್ದ ಚರಂಡಿ ಹಾಗೂ ಕಾಲುವೆಗಳ ಹೂಳೆತ್ತುವ ಕಾರ್ಯ ಆರಂಭಿಸಿದೆ.
ರಾಜ ಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗಳನ್ನು ಕೂಡ ಆರಂಭಿಸಲಾಗಿದೆ. ಮಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿಗೊಂಡಿರುವ ಕುರಿತು ಈಗಾಗಲೇ ವರದಿ ಸಿದ್ದಗೊಂಡಿದ್ದು ಇದನ್ನು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ಸಲ್ಲಿಸಲಾಗಿದೆ.