ಇಲ್ಯಾಸ್ ಕೊಲೆ ಆರೋಪಿಗಳ ಜತೆ ಸಚಿವ ಯು.ಟಿ. ಖಾದರ್ ಪೋಟೋ ವೈರಲ್
ಮಂಗಳೂರು, ಫೆಬ್ರವರಿ 28: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ನಡುವೆ ಆರೋಪ- ಪ್ರತ್ಯಾರೋಪಗಳ ಭರಾಟೆ ಹೆಚ್ಚಾಗುತ್ತಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರನ್ನು ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ರೂಪ್ ಬೆಂಬಿಡದ ಬೇತಾಳದಂತೆ ಕಾಡುತ್ತಿದೆ.
ಈ ಹಿಂದೆ ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ ಹಾಗೂ ಆತನ ಸಹಚರರೊಂದಿಗಿದ್ದ ಸಚಿವ ಯು.ಟಿ.ಖಾದರ್ ಅವರ ಫೋಟೊಗಳು ವೈರಲ್ ಆಗಿದ್ದವು. ಆದರೆ ಇತ್ತೀಚೆಗೆ ಹತ್ಯೆಯಾದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರೊಂದಿಗೆ ಸಚಿವ ಖಾದರ್ ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಸದ್ದು ಮಾಡುತ್ತಿದೆ.
ಇಲ್ಯಾಸ್ ವೈಯಕ್ತಿಕವಾಗಿ ಪರಿಚಯ ಇಲ್ಲ, ಕೊಲೆ ತನಿಖೆ ಆಗಲಿ:ಖಾದರ್
ಇಲ್ಯಾಸ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ದಾವೂದ್, ಸಮೀರ್, ನಾಸಿರ್ ಹಾಗೂ ಆರೋಪ ಹೊಂದಿರುವ ಉಸ್ಮಾನ್ ಕಲ್ಲಾಪು ಜತೆಗೆ ಸಚಿವ ಖಾದರ್ ಹೆಗಲ ಮೇಲೆ ಕೈ ಹಾಕಿಕೊಂಡಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಮೂಲಕ ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ ಹತ್ಯೆ ಪ್ರಕರಣಕ್ಕೂ ಸಚಿವ ಯು.ಟಿ ಖಾದರ್ ಗೂ ಸಂಬಂಧ ಕಲ್ಪಿಸಲಾಗಿದೆ.
ಇಲ್ಯಾಸ್ ಕೊಲೆ ಆರೋಪಿಗಳೊಂದಿಗೆ ಸಚಿವ ಯು.ಟಿ.ಖಾದರ್ ನಂಟು ಹೊಂದಿದ್ದಾರೆ ಎಂದು ಬಿಂಬಿಸಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಟಾರ್ಗೆಟ್ ಗ್ಯಾಂಗ್ ನ ಲೀಡರ್ ಇಲ್ಯಾಸ್ ನನ್ನು ಜನವರಿ 13ರ ಬೆಳಗ್ಗೆ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಹಲವಾರು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಇಲ್ಯಾಸ್ ಜಾಮೀನಿನ ಮೇಲೆ ಹೊರಗೆ ಬಂದ ಎರಡು ದಿನದಲ್ಲೇ ಹತ್ಯೆಯಾಗಿದ್ದ.
ಇಲ್ಯಾಸ್ ಜತೆಗಿದ್ದ ಯು.ಟಿ ಖಾದರ್ ಫೋಟೋ ವೈರಲ್ ಅಗಿತ್ತು. ಹತ್ಯೆಯಾಗಿರುವ ಇಲ್ಯಾಸ್ ಯಾರೂಂತ ಗೊತ್ತಿಲ್ಲ ಎಂದು ಖಾದರ್ ಹೇಳಿಕೆ ನೀಡಿದ್ದರು. ಆದರೆ ಈಗ ಇಲ್ಯಾಸ್ ಹತ್ಯೆ ಆರೋಪಿಗಳ ಜೊತೆಗಿರುವ ಖಾದರ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.