ಅಕ್ರಮ ಮರಳು ದಾಸ್ತಾನು ಬಚ್ಚಿಟ್ಟ ಆರೋಪ : 3 ಜನ ಪೊಲೀಸ್ ಸಸ್ಪೆಂಡ್
ಮಂಗಳೂರು ಜೂನ್ 08: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಾಸ್ತಾನು ಕುರಿತ ಮಾಹಿತಿ ಮುಚ್ಚಿಟ್ಟ ಆರೋಪ ಮೇರೆಗೆ ಬಜ್ಪೆ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಬಜ್ಪೆ ಠಾಣೆಯ ಸಿಬ್ಬಂದಿಗಳಾದ ಕಾನ್ಸ್ ಟೇಬಲ್ ಮಂಜುನಾಥ್, ಲಕ್ಷ್ಮಣ್, ಹೆಡ್ ಕಾನ್ಸ್ ಟೇಬಲ್ ಚಂದ್ರಮೋಹನ್ ಅವರನ್ನು ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು: ಮರಳು ದಂಧೆಗೆ ಸಾಥ್, 5 ಅಧಿಕಾರಿಗಳ ಬಂಧನ
ಮಂಗಳೂರಿನ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸ್ ಕಮಿಷನರ್ ಹಾಗು ಹಿರಿಯ ಪೊಲೀಸ್ ಅಧಿಕಾರಿಗಳ ವಿಶೇಷ ಕಾರ್ಯಪಡೆ ತಂಡ ಬಡಗುಳಿಪಾಡಿ, ನಾರ್ಲಪದವು ಮೂಡುಪೆರಾರ ಬಳಿ 853 ಲೋಡ್ ಅಕ್ರಮ ಮರಳು ಸಂಗ್ರಹ ಪತ್ತೆ ಹಚ್ಚಿ ವಶಪಡಿಕೊಳ್ಳಲಾಗಿತ್ತು.
ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳನ್ನು ಸಂಗ್ರಹಿಸಿರುವ ವಿಚಾರವನ್ನು ಉದ್ದೇಶ ಪೂರ್ವಕವಾಗಿ ಗೌಪ್ಯವಾಗಿರಿದಸಿದ ಆರೋಪದ ಮೇಲೆ ಬಜ್ಪೆ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಈ ಶಿಸ್ತುಕ್ರಮ ಜರುಗಿಸಲಾಗಿದೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ಮಟ್ಟಹಾಕಲು ರಚಿಸಲಾಗಿದ್ದ ಪೊಲೀಸ್ ಇಲಾಖೆ ಹಾಗು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಪಡೆ ತಂಡ ಜೂನ್ 5 ರಂದು ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ದಾಳಿ ನಡೆಸಿತ್ತು.
ವಿಶೇಷ ಜಂಟಿ ಕಾರ್ಯಪಡೆ ತಂಡ ಕಾರ್ಯಾಚರಣೆ ಸಂದರ್ಭ ಬಜ್ಪೆ ಠಾಣಾ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 177 ಲೋಡ್ ಮರಳು ಸೇರಿದಂತೆ ಇನ್ನಿತರ ಕಡೆ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ 250 ಕ್ಕೂ ಹೆಚ್ಚು ಲೋಡ್ ಮರಳನ್ನು ವಶಪಡಿಸಿಕೊಂಡಿತ್ತು.
ಇದಲ್ಲದೇ ಮೊಗರು ಗ್ರಾಮದ ನಾರ್ಲಪದವು ಎಂಬಲ್ಲಿ 40 ಲೋಡ್, ಸರ್ವೆ ನಂಬರ್ 56/ಪಿ5 ಯಲ್ಲಿದ್ದ 193 ಲೋಡ್, ಮೂಡುಪೆರಾರ್ ಗ್ರಾಮದ ಚರ್ಚ್ ಬಳಿ ಸರ್ವೆ ನಂಬರ್ 76/1 ಪಿ 2ರಲ್ಲಿದ್ದ 272 ಲೋಡ್, ಸರ್ವೆ ನಂಬರ್ 78ರಲ್ಲಿದ್ದ 35 ಲೋಡ್ ಗಳಷ್ಟು ಅಕ್ರಮ ಮರಳನ್ನು ವಿಷೇಶ ಕಾರ್ಯಪಡೆತಂಡ ದಾಳಿ ನಡೆಸಿ ವಶಪಡಿಸಿಕೊಂಡಿತ್ತು.
ವಶಪಡಿಸಿಕೊಳ್ಳಲಾದ ಅಕ್ರಮ ಮರಳು ದಾಸ್ತಾನಿನ ಅಂದಾಜು ಮೌಲ್ಯ ರೂಪಾಯಿ 35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು.