ಮಕ್ಕಳಿಗಾಗಿ ಮತ್ತೊಮ್ಮೆ ಜೋಳಿಗೆ ಹಿಡಿಯುತ್ತೇನೆ - ಕಲ್ಲಡ್ಕ ಪ್ರಭಾಕರ ಭಟ್
ಮಂಗಳೂರು, ಆಗಸ್ಟ್ 9: "ಮಕ್ಕಳಿಗಾಗಿ ಮತ್ತೊಮ್ಮೆ ಜೋಳಿಗೆ ಹಿಡಿದುಕೊಂಡು ಸಮಾಜದಲ್ಲಿ ಭಿಕ್ಷೆ ಬೇಡುತ್ತೇನೆ ಹೊರತು ಸರ್ಕಾರದ ಎದುರು ಕೈ ಚಾಚಲು ಹೋಗುವುದಿಲ್ಲ," ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
"ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಹಾಗೂ ಪುಣಚ ಶ್ರೀದೇವಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ಶ್ರೀಕ್ಷೇತ್ರ ಕೊಲ್ಲೂರಿನಿಂದ ನೀಡುತ್ತಿದ್ದ ಅನುದಾನ ಹಿಂಪಡೆಯುವುದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರವಿದೆ. ನಮ್ಮಲ್ಲಿ ಕಲಿಯುತ್ತಿರುವ 2,126ವಿದ್ಯಾರ್ಥಿಗಳಲ್ಲಿ ಶೇ. 91ರಷ್ಟು ಅಹಿಂದ ವರ್ಗದವರು," ಎಂದು ಪ್ರಭಾಕರ ಭಟ್ ಆಕ್ರೋಶ ಹೊರ ಹಾಕಿದ್ದಾರೆ.
"ಅನ್ನದಾನ ನಮಗೆ ಪವಿತ್ರ ಕೆಲಸ. ಅದಕ್ಕೆ ತಡೆಯೊಡ್ಡಿರುವುದು ದೇವರು ಮೆಚ್ಚದ ಕೆಲಸ. ಇದು ದ್ವೇಷದ ರಾಜಕಾರಣ," ಎಂದು ಪ್ರಭಾಕರ ಕಲ್ಲಡ್ಕ ಭಟ್ ಕಿಡಿಕಾರಿದ್ದಾರೆ.
"ನಮ್ಮಲ್ಲಿ ಮೂರು ರಿಂದ ಹದಿನೈದು ವರ್ಷದವರೆಗಿನ ಮಕ್ಕಳಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಬಡ ಕುಟುಂಬದಿಂದ ಬಂದವರು. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಬಡ ವಿದ್ಯಾರ್ಥಿಗಳ ಹೊಟ್ಟೆಗೆ ಹೊಡೆದಂತಾಗಿದೆ. ಇದೊಂದು ಅನೈತಿಕ ಅನ್ಯಾಯದ ಕ್ರಮ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಶಾಲೆಯನ್ನು ಯಾರು ನಡೆಸುತ್ತಾರೆ ಎಂಬುದು ಮುಖ್ಯವಲ್ಲ. ಬಡ ವಿದ್ಯಾರ್ಥಿಗಳು ಕಲಿಯುವ ಯಾವುದೇ ಸಂಸ್ಥೆಯಾದರೂ ಅದಕ್ಕೆ ಸಹಾಯ ಬೇಕು. ದೇವಸ್ಥಾನದ ಹಣ ಭಕ್ತರ ಹಣವಾಗಿದ್ದು ಅದು ಇಂತಹ ಸೇವೆಗೆ ಸಂದಾಯ ಆಗಬೇಕು," ಎಂದು ಭಟ್ ಹೇಳಿದರು.
"ಸಿದ್ದರಾಮಯ್ಯ ಬಾಯಿ ಬಿಟ್ಟಾಗೆಲ್ಲ ಅಹಿಂದ ಮಂತ್ರ ಪಠಿಸುತ್ತಾರೆ. ಅಹಿಂದ ವರ್ಗಕ್ಕೆ ಸೇರಿದ ಮಕ್ಕಳೇ ಕಲಿಯುತ್ತಿರುವ ಶಿಕ್ಷಣ ಸಂಸ್ಥೆಗೆ ಸಹಾಯ ನೀಡುವುದನ್ನು ನಿಲ್ಲಿಸುವ ಕ್ರಮ ಅಹಿಂದ ವರ್ಗಕ್ಕೆ ನೀಡಿದ ಹೊಡೆತವಾಗಿದೆ. ಇದು ಅವರ ಮಾತು ಕೃತಿಯ ವೈರುಧ್ಯವನ್ನು ತೋರುತ್ತದೆ," ಎಂದು ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.