ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ರಸ್ತೆ ನಾಮಕರಣ ವಿವಾದ, ಶಾಸಕರ ಸಂದರ್ಶನ

|
Google Oneindia Kannada News

ಮಂಗಳೂರು, ಆ.3 : 'ಲೈಟ್ ಹೌಸ್ ಹಿಲ್ ರಸ್ತೆಗೆ ನಾಮಕರಣ ಮಾಡುವ ವಿವಾದವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ ಮತ್ತು ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಚರ್ಚಿಸಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು' ಎಂದು ಶಾಸಕ ಜೆ.ಆರ್.ಲೊಬೊ ಹೇಳಿದ್ದಾರೆ.

ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಅವರು, 'ಒಬ್ಬರು ನಾವು ನಾಳೆ ರಸ್ತೆ ನಾಮಕರಣ ಮಾಡುತ್ತೇವೆ ಎಂದು ಹೊರಟಿದ್ದರು. ಇನ್ನೊಬ್ಬರು ಪ್ರತಿಭಟನೆ ಮಾಡುತ್ತೇವೆ ಎಂದು ಹೊರಟಿದ್ದರು' ಎಂದರು.

'ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಜನರನ್ನು ಸೇರಿಸಿ ಪ್ರತಿಭಟಿಸುವ ಕಿಡಿಗೇಡಿಗಳು ಒಂದು ಕಲ್ಲು ಎಸೆದರೆ ಅಶಾಂತಿ ಸೃಷ್ಟಿಯಾಗುತ್ತದೆ ಮತ್ತು ಶಾಂತಿ ಸ್ಥಾಪನೆ ಎಷ್ಟು ಕಷ್ಟ ಎಂದು ನಮಗೆ ಗೊತ್ತಿದೆ. ಆದ್ದರಿಂದ ಅಶಾಂತಿಗೆ ಯಾವ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು' ಶಾಸಕರು ಹೇಳಿದರು.

I have no objection with renaming St. Aloysius college road - JR Lobo

'ಅಲೋಶಿಯಸ್ ಕಾಲೇಜು ರಸ್ತೆ ಎಂದು ಹೆಸರಿಡಬೇಕು ಎಂದು ನಾನು ಹೇಳಿಲ್ಲ. ನನಗೆ ಆ ಹೆಸರು ಇಡಲು ಯಾವ ಆಸಕ್ತಿಯೂ ಇಲ್ಲ. ಶಾಂತಿಯುತವಾಗಿ ಯಾರ ಹೆಸರು ಬೇಕಾದರೂ ಹಾಕಿಕೊಳ್ಳಲಿ' ಎಂದರು.

'ಮೂಲ್ಕಿ ಸುಂದರರಾಮ ಶೆಟ್ಟಿ ಅತ್ಯಂತ ಗೌರವಯುತವಾದ ವ್ಯಕ್ತಿ. ರಾಷ್ಟ್ರೀಕೃತ ಬ್ಯಾಂಕ್ ಸ್ಥಾಪಿಸಿ ಎಷ್ಟೋ ಮಂದಿಗೆ ಉದ್ಯೋಗ ಕೊಟ್ಟವರು. ಅವರಿಗೆ ಗೌರವ ಸಿಗಲೇಬೇಕು ಆ ಬಗ್ಗೆ ನನ್ನ ಆಕ್ಷೇಪ ಇಲ್ಲವೇ ಇಲ್ಲ' ಎಂದು ಶಾಸಕರು ಸ್ಪಷ್ಟಪಡಿಸಿದರು.

'ಸಂತ ಅಲೋಶಿಯಸ್ ಕಾಲೇಜಿನಲ್ಲೂ ಲಕ್ಷಾಂತರ ಮಂದಿ ಓದಿದ್ದಾರೆ. ಇಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದರಿಂದ ನಾನು ತನ್ನ ಕರ್ತವ್ಯ ಮಾಡುತ್ತಿದ್ದೇನೆ. ರಸ್ತಗೆ ನಾಮಕರಣ ಮಾಡುವಾಗ ಇಬ್ಬರ ಒಪ್ಪಿಗೆಯೂ ಅಗತ್ಯ' ಎಂದರು.

ನಾನು ಯಾವ ಪಕ್ಷವನ್ನು ದೂರಲು ಹೋಗುವುದಿಲ್ಲ ಕೆಲವರು ಅನಗತ್ಯವಾಗಿ ರಾಜಕೀಯ ಮಾಡಲು ಹೊರಟಿದ್ದಾರೆ. ಎರಡೂ ಕಡೆಯವರನ್ನು ಕರೆಸಿ ಕುಳಿತುಕೊಂಡು ಪರಿಹರಿಸುವ ವಿಷಯಕ್ಕೆ ಬೇರೆ ಬೇರೆ ಬಣ್ಣ ಹಚ್ಚುತ್ತಿದ್ದಾರೆ. ನಾವು ರಾಜಕೀಯ ವ್ಯಕ್ತಿಗಳು ಬೆಂಕಿ ಬಿದ್ದಲ್ಲಿ ನೀರು ಹಾಕಿ ತಣಿಸುವ ಕೆಲಸ ಮಾಡಬೇಕೇ ವಿನಾ ಅದಕ್ಕೆ ಎಣ್ಣೆ ತುಪ್ಪ ಹಾಕುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಹಾಗೆ ಮಾಡಿದರೆ ಇಡೀ ಊರೇ ಹಾಳಾಗಿ ಹೋಗುತ್ತದೆ ಯಾರಿಗೂ ಅದರಿಂದ ಒಳ್ಳೆಯದಾಗುವುದಿಲ್ಲ. ನಾನು ಶಾಸಕನಾಗಿ ಮಧ್ಯಸ್ಥಿಕೆ ವಹಿಸಿದ್ದೇನೆಯೇ ವಿನಾ ಪಕ್ಷದ ವ್ಯಕ್ತಿಯಾಗಿ ಹೋಗಿಲ್ಲ. ಇಂಥವರ ಹೆಸರು ಇರಲಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಗಲಾಟೆ ಆಗಬಾರದು, ಪರಿಸ್ಥಿತಿ ಕೈ ಮೀರಬಾರದು ಎಂಬುದಷ್ಟೇ ನನ್ನ ಅಭಿಲಾಷೆ ಎಂದು ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಲೈಟ್ ಹೌಸ್ ಹಿಲ್ ರೋಡ್ಗೆ ಬಾವುಟ ಗುಡ್ಡೆ ಹೆಸರೇ ಸೂಕ್ತ: ಗೋಪಾಲ್ ಪೆರಾಜೆ

1834ರಲ್ಲಿ ಬ್ರಿಟಿಷರ ವಿರುದ್ಧ ಅಮರ ಸುಳ್ಯ ಪ್ರದೇಶದಿಂದ ಆರಂಭವಾದ ಸ್ವಾತಂತ್ರ್ಯ ಹೋರಾಟದ ನೆನಪಿನ ಸಲುವಾಗಿ ನಗರದ ಲೈಟ್ ಹೌಸ್ ಹಿಲ್ ರಸ್ತೆಯನ್ನು 'ಬಾವುಟ ಗುಡ್ಡೆ ರಸ್ತೆ' ಎಂದೇ ಹೆಸರಿಡಲು ಮಂಗಳೂರು ನಗರ ಪಾಲಿಕೆ, ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕು ಎಂದು ಅಮರ ಕ್ರಾಂತಿ ಸಮಿತಿಯ ಸಂಚಾಲಕ ಗೋಪಾಲ್ ಪೆರಾಜೆ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

1834ರಲ್ಲಿ ಕೊಡಗಿನ ಅರಸರ ಪದ್ಯಚ್ಯುತಿ ಬಳಿಕ ಬ್ರಿಟಿಷರ ವಿರುದ್ಧ ಕೊಡಗು, ಸಂಪಾಜೆ, ಸುಳ್ಯ, ಬೆಳ್ಳಾರೆ, ಪುತ್ತೂರು, ಮಂಜೇಶ್ವರ, ಮತ್ತು ಮಂಗಳೂರು ವ್ಯಾಪ್ತಿಯ ಪ್ರದೇಶಗಳಲ್ಲಿ ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿತು. ಆ ಸಮಯದಲ್ಲಿ ಮೂರು ಕವಲುಗಳಾಗಿ ಹಂಚಿಕೆಯಾದ ತಂಡಗಳು ಕೊನೆಯದಾಗಿ 1837ರಲ್ಲಿ ಮಂಗಳೂರಿನ ಬಾವುಟ ಗುಡ್ಡೆಗೆ ಬಂದು 13 ವರ್ಷಗಳ ಕಾಲ ಹೋರಾಡಿ ಬ್ರಿಟಿಷರನ್ನು ಸೋಲಿಸಿದ ಸಂಕೇತವಾಗಿ ಸೂರ್ಯ ಗುರುತಿನ ಬಾವುಟವನ್ನು ಹಾರಿಸುವ ಮೂಲಕ ಈ ಗುಡ್ಡೆಗೆ ಬಾವುಟ ಗುಡ್ಡೆ ಎನ್ನುವ ಹೆಸರು ಬಂತು ಎಂದರು.

ರಸ್ತೆಗೆ ಹೆಸರಿಡುವ ವಿಷಯದಲ್ಲಿ ಜಾತಿ ರಾಜಕೀಯ - ಸದಾನಂದ ಶೆಟ್ಟಿ

ರಸ್ತೆಗೆ ಹೆಸರಿಡುವ ವಿಷಯದಲ್ಲಿ ಜಾತಿ ರಾಜಕೀಯ ಎಳೆದು ತಂದಿರುವುದು ಸರಿಯಲ್ಲ ಸುಂದರರಾಮ ಶೆಟ್ಟಿ ಎಲ್ಲರನ್ನು ಸಮಾನತೆ ಕಾಣುವ ವ್ಯಕ್ತಿ ಯಾವುದೇ ಕಾರಣಕ್ಕೂ ರಸ್ತೆಗೆ ನಾಮಕರಣ ಮಾಡುವ ವಿಷಯವನ್ನು ನಾವು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಮೂಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದ ಗೌರವ ಅಧ್ಯಕ್ಷ ಸದಾನಂದ ಶೆಟ್ಟಿ ತಿಳಿಸಿದ್ದಾರೆ.

ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರಿಡುವ ಬಗ್ಗೆ ಅಪಸ್ವರ ಎಬ್ಬಿಸಿದ್ದು ಬೇಸರದ ವಿಷಯ. ನಾವು ಕಾನೂನು ತಪ್ಪಿ ಹೋಗುವುದಿಲ್ಲ ಹೋರಾಟದಲ್ಲಿ ವಿದ್ಯಾರ್ಥಿಗಳನ್ನು ಬಳಸಿ ಜಾತಿಯ ಲೇಪನ ಹಾಕುವುದು ಸರಿಯಲ್ಲ ಎಂದರು. ಸುಂದರರಾಮ ಶೆಟ್ಟಿ ಅವರ ಹೆಸರು ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಟ ನಡೆಸುತ್ತೇವೆ ಎಂದರು.

English summary
I have no objection with renaming St. Aloysius college road as sundararam shetty road says MLA J.R.Lobo to Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X