ಪತ್ನಿ ತಲೆಗೆ ಹೊಡೆದು ಕೊಲೆ ಮಾಡಿದ ಪತಿಯ ಬಂಧನ
ಕಾಸರಗೋಡು: ಹೊಸದುರ್ಗ ಅಂಬಲೆತರೆ ಕಾಲಿಚ್ಚಿನಡ್ಕ ಎಂಬಲ್ಲಿ ಪತಿ ತನ್ನ ಪತ್ನಿಯ ತಲೆಗೆ ಬಡಿದು ಕೊಲೆಗೈದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಕಾಲಿಚ್ಚಿನಡ್ಕದ ನಾರಾಯಣಿ (45) ಕೊಲೆಯಾಗಿದ್ದು , ಕೊಲೆ ಮಾಡಿದ ನಾರಾಯಣಿಯ ಪತಿ ಆರೋಪಿ ಅಂಬಾಡಿ(55)ಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಿಗ್ಗೆ ಅಂಬಾಡಿಯ ಮನೆಯಿಂದ ಆರ್ತನಾದ ಕೇಳಿ ಅಕ್ಕಪಕ್ಕದವರು ಓಡಿ ಬಂದಾಗ ರಕ್ತದ ಮಡುವಿನಲ್ಲಿ ಸಾವನ್ನಪ್ಪಿರುವ ನಾರಾಯಣಿಯ ಮೃತದೇಹ ಕಂಡು, ಅಲ್ಲೇ ಇದ್ದ ಅಂಬಾಡಿಯನ್ನು ಹಿಡಿದು ಅಂಬಲೆತರೆ ಪೊಲೀಸರಿಗೆ ಒಪ್ಪಿಸಿದರು.
ಕಳ್ಳಬಟ್ಟಿ ತಯಾರಿಕೆಯಲ್ಲಿ ಬಂಧಿತನಾಗಿದ್ದ ಅಂಬಾಡಿ ನ್ಯಾಯಾಂಗ ಬಂಧನದಲ್ಲಿದ್ದು ಇತ್ತೀಚಿಗೆ ಬಿಡುಗಡೆಯಾಗಿ ಮನೆಗೆ ಬಂದಿದ್ದ.
ಮನೆಯಲ್ಲಿದ್ದ ಐದೂವರೆ ಸಾವಿರ ರೂಪಾಯಿ ಕಾಣೆಯಾಗಿರುವುದು ಆರೋಪಿಸಿ, ಮದ್ಯಪಾನಿಯಾದ ಅಂಬಾಡಿ, ಪತ್ನಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಈ ವಿವಾದವೇ ಕೊಲೆಯಲ್ಲಿ ಕೊನೆಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿಗೆ ಅಜಿತ್, ಅರ್ಜುನ್, ಅಜಯನ್, ಶ್ರೀಜಾ, ಅನಿತ ಎಂಬ ಐವರು ಮಕ್ಕಳಿದ್ದಾರೆ.