ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ವಾಟ್ಸಾಪ್ ಹವಾ, ಕೋಟೆ ಗೆಲ್ಲಲು ತಂತ್ರ ಸಿದ್ಧ!
ಮಂಗಳೂರು, ಮಾರ್ಚ್ 8 : ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕರ್ನಾಟಕದಲ್ಲಿ ಕಮಲವನ್ನು ಅರಳಿಸಲು ಬಿಜೆಪಿ ಈ ಬಾರಿ ಮಾಧ್ಯಮಗಳಿಗಿಂತ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಉಪಯೋಗಿಸಲು ರಣತಂತ್ರ ರೂಪಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರ ಹೆಚ್ಚು ಸಹಾಯಕ ಆಗಿತ್ತು. ಇದೀಗ ಉತ್ತರ ಪ್ರದೇಶದ ಮಾದರಿಯಲ್ಲೇ ಸಾಮಾಜಿಕ ಜಾಲತಾಣಗಳ ಮೂಲಕ ಗರಿಷ್ಠ ಪ್ರಮಾಣದಲ್ಲಿ ಪ್ರಚಾರ ನಡೆಸಲು ಬಿಜೆಪಿ ನಿರ್ಧರಿಸಿದೆ.
ಸಾಮಾಜಿಕ ಜಾಲತಾಣಗಳಿಂದ ಭಾರತದ ಬದಲಾವಣೆ : ನಿರ್ಮಲಾ ಸೀತಾರಾಮನ್
ಬಿಜೆಪಿಯ ಭದ್ರಕೋಟೆಯಾಗಿದ್ದ ಕರಾವಳಿಯಲ್ಲಿ ಮತ್ತೆ ಆಧಿಪತ್ಯ ಸ್ಥಾಪಿಸಲು ಟೊಂಕಕಟ್ಟಿ ನಿಂತಿರುವ ಅಧ್ಯಕ್ಷ ಅಮಿತ್ ಶಾ, ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರವನ್ನು ಕರಾವಳಿಯಿಂದಲೇ ಪ್ರಾರಂಭಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಚುನಾವಣಾ ಸಿದ್ಧತೆಗೆ ಪ್ರವಾಸ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳನ್ನು ಸಕ್ರಿಯಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಅಲ್ಲದೆ ಕರಾವಳಿ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ರಾಜ್ಯದ ಸಾಮಾಜಿಕ ಜಾಲತಾಣಗಳ ಕಾರ್ಯಕರ್ತರ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಗರಿಷ್ಠ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಸಲಹೆಯನ್ನು ಕೂಡ ನೀಡಿದ್ದರು.
ಬಿಜೆಪಿ ಪರ ಒಲವುಳ್ಳವರ ಮಾಹಿತಿ
ಅಮಿತ್ ಶಾ ಸೂಚನೆಯನ್ನು ಪಾಲಿಸಲು ಬಿಜೆಪಿ ಈಗಾಗಲೇ ಕ್ರಮ ಕೈಗೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲಿರುವ ಬೂತ್ ಮಟ್ಟದ ಮುಖಂಡರು ಮನೆಗಳ ಪಟ್ಟಿಯನ್ನು ತಯಾರಿಸಿದ್ದಾರೆ. ಅದರಲ್ಲಿ ಬಿಜೆಪಿ ಪರ ಒಲವುಳ್ಳವರ ಮನೆಗಳ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಈ ಪಟ್ಟಿ ಜೊತೆಗೆ ಪ್ರತಿ ಮನೆಯ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ವಾಟ್ಸ್ ಅಪ್ ಗ್ರೂಪ್ ಒಂದನ್ನು ರಚಿಸಿರುವ ಬಿಜೆಪಿ, ಪ್ರತಿ ಗ್ರೂಪ್ ಗೆ ಒಬ್ಬರನ್ನು ಅಡ್ಮಿನ್ ಆಗಿ ಮಾಡಿದೆ. ಈ ಕಾರ್ಯ ನಿರ್ವಹಿಸಲು ಬಿಜೆಪಿ ಈಗಾಗಲೇ 20 ಮಂದಿ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಿದೆ.
ಬೂತ್ ನಲ್ಲಿ ನೂರು ಮಂದಿಯನ್ನಾದರೂ ಸೇರಿಸಬೇಕು
ಒಂದರಿಂದ 6 ವರೆಗಿನ ಬೂತ್ ಗಳನ್ನು ಒಂದು ಶಕ್ತಿ ಕೇಂದ್ರವಾಗಿ ಪರಿವರ್ತಿಸಲು ಬಿಜೆಪಿ ನಿರ್ಧರಿಸಿದ್ದು, ಈ ಶಕ್ತಿ ಕೇಂದ್ರಕ್ಕೆ ಒಬ್ಬರು ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಒಂದು ಬೂತ್ ನಲ್ಲಿ ಕನಿಷ್ಠ 100 ಮಂದಿಯನ್ನಾದರೂ ಗ್ರೂಪ್ ಗೆ ಸೇರಿಸಬೇಕೆನ್ನುವುದು ಪಕ್ಷದ ಉದ್ದೇಶವಾಗಿದೆ. ಯುವ ಮೋರ್ಚಾ, ಮಹಿಳಾ ಮೋರ್ಚಾ ಕೂಡ ಪ್ರತ್ಯೇಕವಾಗಿ ವಾಟ್ಸ ಅಪ್ ಗ್ರೂಪ್ ಗಳನ್ನು ರಚಿಸುತ್ತಿದೆ. ಪ್ರತಿಯೊಂದು ಗ್ರೂಪ್ ನಲ್ಲಿ ವಿಧಾನಸಭಾ ಕ್ಷೇತ್ರದ ನಂಬರ್ ಹಾಗೂ ಬೂತ್ ನಂಬರ್ ನಮೂದಿಸಿರುತ್ತಾರೆ.
ಆರೋಪಗಳಿಗೆ ಉತ್ತರ
ಈ ರೀತಿಯಾಗಿ ರಚಿಸಲಾದ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಕೇಂದ್ರ ಸರಕಾರದ ಸಾಧನೆ ಹಾಗೂ ರಾಜ್ಯ ಸರಕಾರದ ವೈಫಲ್ಯಗಳನ್ನು ಫೋಸ್ಟ್ ಮಾಡಲಾಗುತ್ತದೆ. ಅಲ್ಲದೇ ದಿನದಲ್ಲಿ ಐದಾರು ಬಾರಿ ಈ ಗ್ರೂಪ್ ಗಳಲ್ಲಿ ಈ ವಿಚಾರಗಳು ಅಪ್ ಡೇಟ್ ಆಗುತ್ತಾ ಇರುತ್ತವೆ. ಅಲ್ಲದೆ ಬಿಜೆಪಿ ವಿರುದ್ಧ ಮಾಡುವ ಆರೋಪಗಳಿಗೆ ಸೂಕ್ತ ಉತ್ತರಗಳನ್ನು ಈ ಗ್ರೂಪ್ ಗಳಲ್ಲಿ ಅಪ್ ಡೇಟ್ ಮಾಡಲಾಗುತ್ತದೆ.
1,200 ಬೂತ್ ಗಳಲ್ಲಿ ಜಾಲತಾಣಗಳ ಅಡ್ಮಿನ್ ನೇಮಕ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ 1,760 ಬೂತ್ ಗಳ ಪೈಕಿ 1,200 ಬೂತ್ ಗಳಲ್ಲಿ ಜಾಲತಾಣಗಳ ಅಡ್ಮಿನ್ ಗಳನ್ನು ನೇಮಕ ಮಾಡಿ ವಾಟ್ಸಪ್ ಗ್ರೂಪ್ ಗಳನ್ನು ರಚಿಸಲಾಗಿದೆ. ಇದಲ್ಲದೆ ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ದಿಂದಲೂ ಪ್ರತ್ಯೇಕ ಗ್ರೂಪ್ ರಚಿಸಲಾಗಿದೆ. ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಬಿಜೆಪಿ ವಾರ್ ರೂಮ್ ತೆರೆಯಲ್ಲಿದ್ದು, ಈ ಜಾಲತಾಣಗಳ ವಾರ್ ರೂಮ್ ಗಳಲ್ಲಿ ನುರಿತ ಐಟಿ ತಂತ್ರಜ್ಞರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಸಾಮಾಜಿಕ ಜಾಲತಾಣದ ಕೇಂದ್ರವನ್ನು ತೆರೆಯಲಾಗುತ್ತದೆ. ಈ ಮೂಲಕ ಹಾಲಿ ಶಾಸಕರ ಸಾಧನೆಗಳನ್ನು ಈ ಜಾಲತಾಣಗಳಲ್ಲಿ ಹಾಕುವ ಮೂಲಕ ಜನರನ್ನು ತಲುಪಲು ಬಿಜೆಪಿ ತಂತ್ರಗಾರಿಕೆಯನ್ನು ಹಣೆದಿದೆ.