ವಿಶೇಷ ಲೇಖನ: ಬೀಡಿ ಉದ್ಯಮಕ್ಕೆ ಬೆಂಕಿ, ಜೀವ ಕಳೆದುಕೊಂಡ 'ಮೀನು'
ಮಂಗಳೂರು, ನವೆಂಬರ್ 8: ಮತ್ತೆ ಆ ದಿನದ ನೆನಪಾಗುತ್ತಿದೆ. ಕಳೆದ ವರ್ಷದ ನವೆಂಬರ್ 8ನೇ ತಾರೀಕು ಇಂಥದ್ದೇನೋ ಸಂಭವಿಸುತ್ತದೆ ಎಂಬ ಚಿಕ್ಕ ಮುನ್ಸೂಚನೆಯೂ ಇರಲಿಲ್ಲ. ಆ ನಂತರ ತಿಂಗಳುಗಟ್ಟಲೆ ಇಡೀ ದೇಶದ ಜನ ಪ್ರಧಾನಿ ಮೇಲೆ ಭರವಸೆ ಇಟ್ಟು, ಅಪನಗದೀಕರಣದ ಹೊಡೆತಗಳನ್ನು ಹಲ್ಲು ಕಚ್ಚಿ ಸಹಿಸಿಕೊಂಡಿದ್ದಾರೆ.
1000 ಹಾಗೂ 500 ರುಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಕ್ರಮಕ್ಕೆ ನಾನಾ ವರ್ಗಗಳಿಂದ ಸಮರ್ಥನೆ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಕೇಂದ್ರ ಸರಕಾರದ ಈ ಕ್ರಮದಿಂದ ಎದುರಾದ ಸಂಕಷ್ಟ ಅರಗಿಸಿಕೊಂಡು, ದೇಶದ ಎಲ್ಲ ಭಾಗದ ಜನರು ಮುನ್ನಡೆದರು. ಭವ್ಯ ಭಾರತದ ಕನಸಿನ ಜತೆಗೆ ಹೆಜ್ಜೆ ಇಟ್ಟರು.
ಅಪನಗದೀಕರಣಕ್ಕೆ ಒಂದು ವರ್ಷ: ಯಾರು, ಏನಂದರು?
ಆದರೆ, ಈ ನೋಟು ನಿಷೇಧದ ಕ್ರಮವು ರಾಜ್ಯದ ಕರಾವಳಿಯನ್ನು ಇನ್ನಿಲ್ಲದಂತೆ ತಟ್ಟಿತು.ಇಲ್ಲಿಯ ಮೀನುಗಾರಿಕೆ, ಬೀಡಿ ಉದ್ಯಮ, ಅಡಿಕೆ ವ್ಯಾಪಾರದ ಮೇಲೆ ಈ ನೋಟು ನಿಷೇಧ ಭಾರಿ ಹೊಡೆತವನ್ನೇ ನೀಡಿತ್ತು. ಕರಾವಳಿಯ ಈ ಕ್ಷೇತ್ರಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಆದರೆ ಬಿದ್ದ ಹೊಡೆತದ ಪರಿಣಾಮ ಚೈತನ್ಯ ಕಳೆದುಕೊಂಡಿದೆ.
ಮೋದಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಏನಿದೆ
ಆಗ ಆಗಿದ್ದೇನು ಎಂಬುದರ ಚಿತ್ರಣವೊಂದನ್ನು ನಿಮ್ಮೆದುರು ತಂದಿಡುವ ಪ್ರಯತ್ನವಿದು.
ಬೀಡಿ ಉದ್ಯಮಕ್ಕೆ ಬೆಂಕಿ ಬಿತ್ತು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಲಕ್ಷಾಂತರ ಜನರಿಗೆ ಜೀವನಾಧಾರವಾಗಿದ್ದು ಬೀಡಿ ಉದ್ಯಮ. ಅತಿ ಹೆಚ್ಚು ಬೀಡಿ ಉದ್ಯಮದಾರರು ಇರುವುದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ. ನೋಟು ಅಮಾನ್ಯದ ಬಿಸಿ ಹೆಚ್ಚು ತಟ್ಟಿದ್ದು ಈ ಉದ್ಯಮಕ್ಕೆ. ಹಿಂದಿನಿಂದಲೂ ಈ ಉದ್ಯಮ ನಗದು ವ್ಯವಹಾರದ ಮೂಲಕವೇ ನಡೆದು ಬಂದಿತ್ತು. ಏಕಾಏಕಿ ನೋಟು ನಿಷೇಧ ಘೋಷಣೆ ಮಾಡಿದ ಸಂದರ್ಭದಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಹಾಗೂ ಉದ್ದಿಮೆದಾರರು ಕಂಗಾಲಾದರು.
ಚೇತರಿಸಿಕೊಳ್ಳದ ಉದ್ಯಮ
ಕಾರ್ಮಿಕರು ಬೀಡಿ ಸುತ್ತಿದರೂ ನಗದು ರೂಪದಲ್ಲಿ ಕೂಲಿ ಪಡೆಯುವಂತಿರಲಿಲ್ಲ. ಬ್ಯಾಂಕ್ ಖಾತೆಗೆ ನೇರ ಹಣ ಪಾವತಿಗೆ ಸರಕಾರದ ಆದೇಶ ಹಿನ್ನೆಲೆಯಲ್ಲಿ ಬೀಡಿ ಕಾರ್ಮಿಕರು ಪ್ರತಿ ವಹಿವಾಟಿಗೂ ಬ್ಯಾಂಕ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇನ್ನೊಂದೆಡೆ ಬೀಡಿ ಉದ್ಯಮದಲ್ಲಿ ಬೇಡಿಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಬೀಡಿ ಕಾರ್ಮಿಕರು ಪರ್ಯಾಯ ಉದ್ಯೋಗ ಅರಸಿಕೊಂಡರು. ಅಪನಗದೀಕರಣದ ವರ್ಷದ ಬಳಿಕವೂ ಬೀಡಿ ಉದ್ಯಮ ಚೇತರಿಸಿಕೊಂಡಿಲ್ಲ.
ಚೇತರಿಕೆ ಹಾದಿಯಲ್ಲಿ ಮೀನುಗಾರಿಕೆ
ನಗದಿನ ಅಭಾವ ಅತಿ ಹೆಚ್ಚು ಕಾಡಿದ್ದು ಮೀನುಗಾರಿಕೆ ಕ್ಷೇತ್ರವನ್ನು. ಕರಾವಳಿಯ ಮೀನು ಉದ್ಯಮ ನಿಂತಿರುವುದೇ ನಗದು ವಹಿವಾಟಿನ ಮೇಲೆ. ನೋಟು ನಿಷೇಧ ಕ್ರಮದಿಂದಾಗಿ ಅತಿ ಹೆಚ್ಚು ಆಘಾತಕ್ಕೆ ಒಳಗಾಗಿದ್ದು ಮತ್ಸೋದ್ಯಮ. ಅಪನಗದೀಕರಣಕ್ಕೆ ಈಗ ಒಂದು ವರ್ಷ ಸಂದಿದ್ದು, ಕರಾವಳಿಯ ಮೀನುಗಾರಿಕೆ ಕ್ಷೇತ್ರ ಚೇತರಿಸಿಕೊಳ್ಳುತ್ತಿದೆ.
ಮೊದಲು 2-3 ತಿಂಗಳು ಸಮಸ್ಯೆ
ನೋಟು ನಿಷೇಧ ಘೋಷಣೆಯಾದ ಮೊದಲು 2-3 ತಿಂಗಳು ಮೀನಿನ ವ್ಯವಹಾರಕ್ಕೆ ಸಾಕಷ್ಟು ಸಮಸ್ಯೆಯಾಗಿತ್ತು. ಆದರೆ ಪ್ರಸ್ತುತ ಸಮಸ್ಯೆಯಾಗುತ್ತಿಲ್ಲ. ಮೀನು ವಹಿವಾಟು ಕಳೆದ ಸಾಲಿನಲ್ಲಿ ಶೇ 20ರಷ್ಟು ಲಾಭದಲ್ಲಿದ್ದರೆ, ಈ ಬಾರಿ ಶೇ 22ರಷ್ಟು ಲಾಭ ಕಂಡಿದೆ ಎಂದು ಮೀನು ಮಾರಾಟಗಾರರ ಅಭಿಪ್ರಾಯವಾಗಿದೆ.
200, 50 ರುಪಾಯಿ ನೋಟುಗಳು ಎಲ್ಲಿ?
ಕಳೆದ ಸಾಲಿನಲ್ಲಿ ಮೀನಿಗೆ ದೊರಕುತ್ತಿದ್ದ ಬೆಲೆ ಅರ್ಧದಷ್ಟು ಕುಸಿತವಾಗಿದ್ದು, ನಿರ್ಧಾರಿತ ಬೆಲೆ ದೊರಕುತ್ತಿಲ್ಲ ಎಂಬ ಆಕ್ರೋಶ ಕೂಡ ವ್ಯಕ್ತವಾಗಿದೆ. ಕೇಂದ್ರದ ನಿರ್ಧಾರ ದೇಶಕ್ಕೆ ಕಪ್ಪುಚುಕ್ಕೆಯಾಗಿದೆ. ಇದೊಂದು ಕರಾಳ ದಿನ ಎಂದು ಕೆಲವು ಮೀನು ಮಾರಾಟಗಾರರು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ಬಿಡುಗಡೆ ಮಾಡಿದ 200, 50 ರುಪಾಯಿ ನೋಟುಗಳು ಎಲ್ಲಿವೆ ಎಂದು ಪ್ರಶ್ನಿಸುತ್ತಿದ್ದಾರೆ.
ಅಡಿಕೆ ಖರೀದಿ ಸ್ಥಗಿತ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಶೇ 90ರಷ್ಟು ಅಡಿಕೆ ಮಾರಾಟವಾಗುವುದು ಖಾಸಗಿ ಮಾರುಕಟ್ಟೆಯಲ್ಲಿ. ಉಳಿದ ಶೇ 10ರಷ್ಟು ಮಾತ್ರ ಸಹಕಾರಿ ಸಂಸ್ಥೆಗಳಿಗೆ ಹೋಗುತ್ತದೆ. ನೋಟು ಅಮಾನ್ಯ ಸಂದರ್ಭ ಹಣ ಚಲಾವಣೆ ಇಲ್ಲದೆ ಖಾಸಗಿ ಮಾರುಕಟ್ಟೆಯಲ್ಲಿ ಅಡಿಕೆ ಖರೀದಿ ಸ್ಥಗಿತಗೊಳಿಸಲಾಗಿತ್ತು.
ನಗದು ರಹಿತ ವ್ಯವಹಾರ
ಕ್ರಮೇಣ ಅಡಿಕೆ ವ್ಯಾಪಾರ ಚೇತರಿಕೆ ಕಂಡುಕೊಂಡಿತು. ಹೊಸ ನೋಟುಗಳು ಬರಲಾರಂಭಿಸಿದಂತೆಯೇ ಖರೀದಿ ಮಿತಿಯನ್ನು ಕೂಡ ಸಡಿಲಿಸಲಾಯಿತು. ಕ್ಯಾಂಪ್ಕೊ ಸೇರಿದಂತೆ ಹೆಚ್ಚಿನ ಸಹಕಾರ ಸಂಘಗಳಲ್ಲಿ ಅಡಿಕೆ ವ್ಯಾಪಾರ, ವ್ಯವಹಾರ ನಗದುರಹಿತವಾಗಿ ಜಾರಿಗೆ ತಂದಿವೆ.