ಜ.16ರಿಂದ ಮಂಗ್ಳೂರಲ್ಲಿ ಆರೋಗ್ಯ ಶ್ರೀ ಯೋಜನೆ ಸೇವೆ ಸ್ಥಗಿತ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಭಾಗ್ಯ ಸೇವೆಗಳನ್ನು ದ.ಕ ಜಿಲ್ಲೆಯಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಸರ್ಕಾರ ಬಾಕಿ ಮೊತ್ತ ಹಣವನ್ನು ಆಸ್ಪತ್ರೆಗಳಿಗೆ ನೀಡದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಂಗಳೂರು, ಜನವರಿ. 14 : ಬಿಪಿಎಲ್ ಕಾರ್ಡುದಾರರಿಗೆ ನೀಡಲಾಗುತ್ತಿದ್ದ ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಭಾಗ್ಯ ಮತ್ತು ಜೋತಿ ಸಂಜೀವಿನಿ ಎಂಬ ಆರೋಗ್ಯ ಭಾಗ್ಯಗಳನ್ನು ಸ್ಥಗಿತಗೊಳಿಸಲು ದಕ್ಷಿಣ ಕನ್ನಡ ಫೆಡರೇಷನ್ ಆಫ್ ಹಾಸ್ಪಿಟಲ್ ಅಸೋಸಿಯೇಷನ್ ನಿರ್ಧರಿಸಿದೆ.
ರಾಜ್ಯ ಸರ್ಕಾರವು ಆಸ್ಪತ್ರೆಗಳಿಗೆ ಈ ಮೂರು ಆರೋಗ್ಯ ಭಾಗ್ಯದ ಬಾಕಿ ಮೊತ್ತವನ್ನು ನೀಡದೆ ಇರುವುದುರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಗಂಭೀರ ಖಾಯಿಲೆಗಳಿಂದ ಬಳಲುವ ಬಿ.ಪಿ.ಎಲ್ ಕಾರ್ಡುದಾರರ ಆರೋಗ್ಯ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಈ ಮೂರು ಆರೋಗ್ಯ ಯೋಜನೆಯನ್ನು ರೂಪಿಸಿತ್ತು.
ಆದರೆ, ಇದೀಗ ಬಡವರ ಪಾಲಿಗೆ ಸಂಜೀವಿನಿಯಾಗಿದ್ದ ಈ ಆರೋಗ್ಯ ಯೋಜನೆಗಳಲ್ಲಿ ಚಿಕಿತ್ಸೆ ಪಡೆದವರ ವೆಚ್ಚವನ್ನು ಸರ್ಕಾರ ಪಾವತಿ ಮಾಡದೆ ಕೋಟ್ಯಾಂತರ ರೂ. ಬಾಕಿ ಇರಿಸಿಕೊಂಡಿರುವುದರಿಂದ ಜನವರಿ 16ರಿಂದ ಸ್ಥಗಿತಗೊಳಿಸಲು ಫೆಡರೇಷನ್ ಆಫ್ ಹಾಸ್ಪಿಟಲ್ ಅಸೋಸಿಯೇಷನ್ ನಿರ್ಧರಿಸಿದೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಆರೋಗ್ಯ ಯೋಜನೆಗಳಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಬಹಳ ಮಹತ್ವದ್ದು. ಈ ಯೋಜನೆಯನುಸಾರ ಬಡತನ ರೇಖೆಯ ಕೆಳಗಿನ ಜನರಿಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ, ಬೈಪಾಸ್ ಸರ್ಜರಿ, ಹೃದಯದ ಶಸ್ತ್ರಚಿಕಿತ್ಸೆಗಳು ಮತ್ತಿತರ ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆಗಳನ್ನು ಸರಕಾರದ ಸೂಚಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಿಸಿಕೊಳ್ಳಬಹುದು.
ಹೆಚ್ಚಿನೆಲ್ಲ ಶಸ್ತ್ರಚಿಕಿತ್ಸೆಗಳ ಸಂಪೂರ್ಣ ಪ್ಯಾಕೇಜ್ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಬರುತ್ತದೆ. ಇದರ ಜತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲಭ್ಯವಿದ್ದ ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಮತ್ತು ಜ್ಯೋತಿ ಸಂಜೀವಿನಿ ಯೋಜನೆಗಳು ಸ್ಥಗಿತಗೊಳ್ಳಲಿವೆ.
ಸರಕಾರ ಬಾಕಿ ಇರಿಸಿಕೊಂಡಿರುವ ಹಣವನ್ನು ಪಾವತಿಸುವವರಿಗೆ ಯೋಜನೆ ಸ್ಥಗಿತಗೊಳ್ಳಲಿದೆ. ಅಲ್ಲದೆ ತಮ್ಮ ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ನರ್ಸಿಂಗ್ ಹೊಮ್ ಆಂಡ್ ಹಾಸ್ಪಿಟಲ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಯೂಸಫ್ ಕುಂಬ್ಳೆ ತಿಳಿಸಿದ್ದಾರೆ.
ರಾಜ್ಯಾದ್ಯಂತ ಸುಮಾರು 200 ಕೋಟಿಯಷ್ಟು ಹಣ ಬಾಕಿಯಿದ್ದು , ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಸುಮಾರು 60 ಕೋಟಿಯಷ್ಟು ಚಿಕಿತ್ಸಾ ವೆಚ್ಚ ಬಾಕಿಯಿದೆ. ಇದು ಪಾವತಿಯಾಗಲೇ ಬೇಕು.
ಕಳೆದ ಎರಡು ತಿಂಗಳಿನಿಂದ ಬಾಕಿ ಹಣವನ್ನು ಪಾವತಿಸುವಂತೆ ಸರಕಾರದ ಗಮನ ಸೆಳೆಯಲಾಗಿದ್ದರೂ ಸ್ಪಂದನೆಯಿಲ್ಲ ಎಂದು ಎ. ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ತಿಳಿಸಿದರು.
ಈಗಾಗಲೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತೊಂದರೆ ಆಗುವುದನ್ನು ತಪ್ಪಿಸಲು ಅವರ ಚಿಕಿತ್ಸೆಯನ್ನು ಮುಂದುವರೆಸಲಾಗುವುದು.
ಆದರೆ, ಹೊಸ ರೋಗಿಗಳು ಬಂದರೆ ಅವರಿಗೆ ಈ ಯೋಜನೆಯಡಿ ಸೇವೆ ನೀಡುವುದಿಲ್ಲ ಎಂದು ಫೆಡರೇಷನ್ ಆಫ್ ಹಾಸ್ಪಿಟಲ್ ಅಸೋಸಿಯೇಷನ್ ನಿಖರವಾಗಿ ತಿಳಿಸಿದೆ. ಇದರಿಂದ ಬಡಪಾಯಿ ಜನರಿಗೆ ದಿಕ್ಕು ತೋಚದಂತಾಗಿದೆ.