ತುಂಬಿ ಹರಿದ ಕುಮಾರಧಾರಾ: ಐದನೇ ಬಾರಿ ಮುಳುಗಿದ ಹೊಸಮಠ ಸೇತುವೆ
ಮಂಗಳೂರು, ಜುಲೈ. 11 : ಕಳೆದ 4 ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ದಿನ ಬಿಡುವು ಪಡೆದಿದ್ದ ಮಳೆ ಮತ್ತೇ ಬಿರುಸು ಗೊಂಡಿದೆ. ಮಳೆಯ ಅಬ್ಬರಕ್ಕೆ ಮಲೆನಾಡು ತತ್ತರಿಸಿದೆ .
ಈ ಹಿನ್ನೆಲೆಯಲ್ಲಿ ಮಳೆ ನೀರು ಧಾರಾಕಾರವಾಗಿ ಪಶ್ಚಿಮ ಘಟ್ಟದಿಂದ ಹರಿದು ಬರುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿವೆ. ನೇತ್ರಾವತಿ, ಕುಮಾರಧಾರಾ, ಪಯಶ್ವಿನಿ, ಫಲ್ಗುಣಿ , ಸೇರಿದಂತೆ ಇನ್ನಿತರ ನದಿಗಳು ತುಂಬಿ ಅಪಾಯ ಮಟ್ಟದಲ್ಲಿ ಉಕ್ಕಿ ಹರಿಯತೊಡಗಿದೆ.
ಮಂಗಳೂರು: ಅಪಾಯ ಆಹ್ವಾನಿಸುತ್ತಿರುವ ಹೊಸಮಠ ಸೇತುವೆ!
ಕುಮಾರಧಾರ ನದಿ ತಟದಲ್ಲಿ ನೆರೆ ಪರಿಸ್ಥಿತಿ ಸೃಷ್ಠಿಯಾಗಿರುವ ಪರಿಣಾಮ ಸುಬ್ರಹ್ಮಣ್ಯ ಬಳಿಯ ಹೊಸಮಠ ಸೇತುವೆ ಮತ್ತೇ ಮುಳುಗಡೆಯಾಗಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹೊಸಮಠ ಸೇತುವೆ ಮುಳುಗಡೆಯಾದೆ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ - ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ರಾಜ್ಯ ಹೆದ್ದಾರಿ ಬಂದ್ ಆಗಿರುವುದಕ್ಕೆ ಇದೀಗ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಭಕ್ತರು ಪರದಾಡುವಂತಾಗಿದೆ. ಬುಧವಾರ ರಾತ್ರಿ ಹೊಸ್ಮಠ ಸೇತುವೆಯ ಮೇಲೆ ನದಿ ನೀರು ಹರಿಯತೊಡಗಿದ ಕಾರಣ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿತ್ತು.
ಇಂದು ಗುರುವಾರ ಮತ್ತೇ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಸೇತುವೆ ಮೇಲೆ ವಾಹನ ಸಂಚಾರ ತಡೆಹಿಡಿಯಲಾಗಿದೆ. ನದಿ ನೀರು ಸೇತುವೆ ಮೇಲೆ ಉಕ್ಕಿಹರಿಯುತ್ತಿರುವ ಕಾರಣ ಶುಕ್ರವಾರ ಮುಂಜಾನೆವರೆಗೆ ಸೇತುವೆ ಯನ್ನು ಬ್ಲಾಕ್ ಮಾಡಲಾಗಿದೆ.
ಇದರಿಂದ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವ ಭಕ್ತರು ಪರಿತಪಿಸುವಂತಾಗಿದೆ.
ಇದೇ ವೇಳೆ, ಸಂಗಮ ಕ್ಷೇತ್ರ ಉಪ್ಪಿನಂಗಡಿ ಬಳಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಸಂಗಮಗೊಂಡು ಸಹಸ್ರಲಿಂಗೇಶ್ವರ ದೇವಸ್ಥಾನದ ಅಂಗಣಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕಳೆದ 1 ತಿಂಗಳಲ್ಲಿ 5 ನೇ ಬಾರಿ ಹೊಸಮಠ ಸೇತುವೆ ಮುಳುಗಡೆಯಾಗಿದೆ.