ನಾನು ಚುನಾವಣೆಯಲ್ಲಿ ತಟಸ್ಥ ನೀತಿ ಅನುಸರಿಸಿದ್ದೇನೆ: ಸತ್ಯಜಿತ್ ಸುರತ್ಕಲ್
ಮಂಗಳೂರು, ಮೇ 10: ಚುನಾವಣೆಗೆ ಸ್ಪರ್ಧಿಸಲು ಮಂಗಳೂರು ಉತ್ತರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ನಾನು ಈ ಬಾರಿ ತಟಸ್ಥ ಧೋರಣೆ ತಳೆದಿದ್ದೇನೆ. ಆದರೆ, ಒಂದಿಷ್ಟು ಜನರಿಂದ ನನ್ನ ವೈಯಕ್ತಿಕ ತೇಜೋವಧೆ ನಡೆದಿದೆ. ಇವೆಲ್ಲಾ ಸುಳ್ಳು ಆರೋಪಗಳು ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಸುಳ್ಳು ಆಪಾದನೆಗಳು ಹಾಕಲಾಗುತ್ತಿದೆ. ಆದರೆ ಇವೆಲ್ಲವೂ ಸತ್ಯಕ್ಕೆ ದೂರವಾದ , ಕಪೋಲಕಲ್ಪಿತ ಆರೋಪಗಳು ಎಂದು ಹೇಳಿದರು.
ನನ್ನ ಮೇಲೆ ಕಾರ್ಮಿಕರಿಂದ, ಗುತ್ತಿಗೆದಾರರಿಂದ ಹಣ ಪಡೆದಿದ್ದೇನೆ ಎಂಬ ಆರೋಪ ಮಾಡಲಾಗುತ್ತಿದೆ. ಸುರತ್ಕಲ್ ಟೋಲ್ ಗೇಟ್ ನಿಂದ ಕಮಿಷನ್, ಮರಳು ಮಾಫಿಯಾದಲ್ಲಿ ಭಾಗಿಯಾಗಿದ್ದೇನೆ, ಕಾಂಗ್ರೆಸ್ ಅಭ್ಯರ್ಥಿ ಮೊಯ್ದೀನ್ ಬಾವಾ ಅವರೊಂದಿಗೆ ಕೈ ಜೋಡಿಸಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಕ್ರಿಮಿನಲ್ ಮೊಕದ್ದಮೆ ಕಾರಣದಿಂದಾಗಿ ಸೀಟ್ ತಪ್ಪಿದೆ ಎಂಬ ಅಪಪ್ರಚಾರ ನಡೆದಿದೆ ಎಂದು ಅವರು ಕಿಡಿಕಾರಿದರು.
ನನ್ನ ಬಾಲ್ಯದಲ್ಲೇ ನಾನು ಆರ್.ಎಸ್.ಎಸ್ ಸೇರಿದ್ದೆ. ಅಂದಿನಿಂದ ಇಂದಿನವರೆಗೆ ಸಂಘಕ್ಕಾಗಿ ರಾತ್ರಿ ಹಗಲೆನ್ನದೇ ಶ್ರಮಿಸಿದ್ದೇನೆ. ಹಿಂದುತ್ವ ನನ್ನ ಜೀವಾಳ. ಇಂದಿಗೂ ನಾನು ಸಂಘದ ನಿಷ್ಠಾವಂತ ಕಾರ್ಯಕರ್ತ ಎಂದು ಅವರು ಹೇಳಿದರು.
ನನ್ನ ಆದಾಯಕ್ಕೆ ಅಂಗಡಿ ವ್ಯಾಪಾರ ಆರಂಭಿಸಿದ್ದೆ. ಸಂಘ ಪರಿವಾರದಲ್ಲಿ ಬೆಳೆದು ಬಂದವನಾದ ನಾನು 1992ರಿಂದ ಕೇಬಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ನನ್ನ ವೈಯಕ್ತಿಕ ಖರ್ಚಿನಿಂದ ಗನ್ ಮ್ಯಾನ್, ವಾಹನ ನಿರ್ವಹಣೆ ಮಾಡುತ್ತುದ್ದೇನೆ ಎಂದು ಹೇಳಿದ ಅವರು, 1992ರ ಅಯೋಧ್ಯೆ ಹೋರಾಟದಲ್ಲಿ ನಿದ್ದೆ ಬಿಟ್ಟು ಕೆಲಸ ಮಾಡಿದ್ದೇನೆ. ಹುಬ್ಬಳ್ಳಿಯ ಹೋರಾಟದಲ್ಲಿ ಧ್ವಜ ಹಾರಿಸಿದ್ದೇನೆ ಎಂದು ವಿವರಿಸಿದರು.