'ಲವ್ ಜಿಹಾದ್ ಗೆ ಸಹಕರಿಸುವ ಪುತ್ತೂರು ಗ್ರಾಮಾಂತರ ಎಸ್ ಐ ವಿರುದ್ಧ ಪ್ರತಿಭಟನೆ'
ಮಂಗಳೂರು, ಸೆಪ್ಟೆಂಬರ್ 13 : ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಪುತ್ತೂರು ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳಾದ ಚಂದ್ರ ರುಕ್ಮರ್ ಅವರ ಕಾರ್ಯವೈಖರಿಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಸೆಪ್ಟೆಂಬರ್ 15 ರಂದು ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಮುಖಂಡ ರತ್ನಾಕರ್ ಅಡ್ಯಂತಾಯ ಹೇಳಿದರು.
ಬುಧವಾರ ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದ ಅವರು, "ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಾಟ, ಲವ್ ಜಿಹಾದ್ ಸೇರಿದಂತೆ ಅಕ್ರಮಗಳು ನಡೆಯುತ್ತಿದ್ದರೂ ಠಾಣಾಧಿಕಾರಿ ಇದರ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ವಿಶೇಷವಾಗಿ ಲವ್ ಜಿಹಾದ್ ಪ್ರಕರಣದಲ್ಲಿ ತೊಡಗಿಕೊಂಡವರ ಪರವಾಗಿ ಎಸ್.ಐ ಅಬ್ದುಲ್ ಖಾಸರ್ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಅಕ್ರಮ ಗೋ ಸಾಗಾಟ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಈ ಅಧಿಕಾರಿಗೆ ದೂರು ನೀಡಲು ಹೋದ ಸಂದರ್ಭದಲ್ಲಿ ದೂರು ನೀಡಲು ಬಂದವರನ್ನೇ ಗದರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರಗಳನ್ನೆಲ್ಲಾ ನೋಡಿದಾಗ ಅಬ್ದುಲ್ ಖಾದರ್ ಠಾಣಾಧಿಕಾರಿಯೋ ಅಥವಾ ಮತಾಂಧತೆಯನ್ನು ಹರಡುವ ಮಸೀದಿಯ ಮೌಲಿಯೋ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಕಿಡಿಕಾರಿದರು.
ಸೆಪ್ಟೆಂಬರ್ 15 ರಂದು ನಡೆಸಲಿರುವ ಪ್ರತಿಭಟನೆಗೆ ಪೋಲೀಸ್ ಅನುಮತಿ ನಿರಾಕರಿಸಿದರೂ ಪ್ರತಿಭಟನೆ ಮಾಡಿಯೇ ಸಿದ್ಧ ಎಂದು ಈ ಸಂದರ್ಭದಲ್ಲಿ ಸವಾಲು ಹಾಕಿದರು.
ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತ್ ಪ್ರತಿಭಟನೆಯಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.