ಕರಾವಳಿಯಲ್ಲಿ ಚಂಡಮಾರುತದ ಭೀತಿ: ಅ.5ರ ನಂತರ ಭಾರೀ ಮಳೆ ಸಾಧ್ಯತೆ
ಮಂಗಳೂರು, ಅಕ್ಟೋಬರ್. 04: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಹಾಮಳೆಯ ಆತಂಕ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ .
ಈ ಹಿನ್ನೆಲೆಯಲ್ಲಿ ನಾಳೆ ಅಂದರೆ ಅಕ್ಟೋಬರ್ 5 ರ ಬಳಿಕ ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ಎಚ್ಚರಿಕೆ ರವಾನಿಸಲಾಗಿದೆ. ಕಳೆದ 3 ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯ ಕೆಲ ಭಾಗದಲ್ಲಿ ತುಂತುರು ಮಳೆಯಾಗುತ್ತಿದೆ.
ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಸಂಭವ
ಕಳೆದ ಎರಡು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಸಿಡಿಲು ಗುಡುಗು ಸಹಿತ ಮಳೆಯಾಗಿದೆ. ಪರಿಣಾಮ ಮತ್ತೆ ಕರಾವಳಿಯಲ್ಲಿ ಮಳೆ ಆರ್ಭಟ ಆರಂಭವಾಗುವ ಮುನ್ಸೂಚನೆ ದೊರೆತಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಕ್ಕೆ ಪೂರಕವಾದ ವಾತಾವರಣವಿದ್ದು, ಮುಂದಿನ ಒಂದು ವಾರ ಮಳೆ ಮುಂದುವರಿಕೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಯಲ್ಲದೆ ಮಲೆನಾಡಿನಲ್ಲೂ ಭಾರೀ ಮಳೆಯ ಬೀಳುವ ಎಚ್ಚರಿಕೆ ರವಾನಿಸಲಾಗಿದೆ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ ಓದಿ...
ಮೀನುಗಾರರಿಗೆ ಸೂಚನೆ
ಅಕ್ಟೋಬರ್ 05 ರಿಂದ 8 ರವರೆಗೆ ಸಮುದ್ರ ಪ್ರಕ್ಷುಬ್ದಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಈ ಕೂಡಲೇ ಕಿನಾರೆಗೆ ಬರುವಂತೆ ಸಂದೇಶ ರವಾನಿಸಲಾಗಿದೆ.
ಇಂದು ಸಂಜೆಯೊಳಗೆ ಸಮುದ್ರಕ್ಕೆ ತೆರಳಿರುವ ಮೀನುಗಾರರು ತಟಕ್ಕೆ ಮರಳುವಂತೆ ರೇಡಿಯೋ ಸಂದೇಶ ಕೂಡ ರವಾನಿಸಲಾಗಿದೆ. ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರ್ ನಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮೈಕ್ ಮೂಲಕ ಸೂಚನೆ ನೀಡಲಾಗಿದೆ.
ಸಿಡಿಲು ಸಹಿತ ಭಾರೀ ಮಳೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ಕಳೆದ ರಾತ್ರಿ ಉತ್ತಮ ಮಳೆಯಾಗಿದೆ. ಮಂಗಳೂರು ನಗರದ ಹೊರಭಾಗದಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಮಳೆ ಸುರಿದಿದೆ. ಉಳಿದಂತೆ ಬಂಟ್ವಾಳ, ಪುತ್ತೂರು , ಉಪ್ಪಿನಂಗಡಿ , ಧರ್ಮಸ್ಥಳ, ಗುರುವಾಯನ ಕೆರೆ, ಸುಬ್ರಹ್ಮಣ್ಯ, ಸುಳ್ಯದಲ್ಲಿ ನಿನ್ನೆ ರಾತ್ರಿ ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ.
ಪ್ರವಾಸಿಗರೇ ಎಚ್ಚರ! ಕೇರಳದಲ್ಲಿ ಮತ್ತೆ ಭಾರೀ ಮಳೆಯ ರೆಡ್ ಅಲರ್ಟ್
ಮನೆಗಳು ಜಲಾವೃತ
ಕರಾವಳಿಗೆ ಮುಂಗಾರು ಪ್ರವೇಶವಾಗುತ್ತಿದ್ದಂತೆ ಮಂಗಳೂರಿನಲ್ಲಿ ಮೇ. 28 ರಂದು ಭಾರೀ ಮಳೆ ಸುರಿದಿತ್ತು. ಸತತವಾಗಿ ಸುರಿದ ಮಳೆಗೆ ನಗರದಾದ್ಯಂತ ನೆರೆ ಆವರಿಸಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿರುವ ಮನೆಗಳು ಜಲಾವೃತಗೊಂಡಿತ್ತು.
ಮಹಾಮಳೆಯ ಮುನ್ಸೂಚನೆ
ಆಗಸ್ಟ್. 15 ರ ಬಳಿಕ ದಕ್ಷಿಣಕನ್ನಡ ಜಿಲ್ಲೆ ಸೇರಿಂದತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿದ ಪರಿಣಾಮ ನದಿ ಪಾತ್ರದ ಜನರು ಸಂಕಷ್ಟ ಅನುಭವಿಸಿದ್ದರು. ಭಾರೀ ಮಳೆಗೆ ಜಿಲ್ಲೆಯ ಕೆಲವೆಡೆ ಭಾರೀ ಭೂ ಕುಸಿತ ಕೂಡ ಸಂಭವಿಸಿತ್ತು.
ಈಗ ಮತ್ತೆ ಮಹಾಮಳೆಯ ಮುನ್ಸೂಚನೆ ದೊರೆತಿದೆ. ಪರಿಣಾಮ ಈ ಹಿಂದಿನ ಮಳೆಯ ಆರ್ಭಟದ ದೃಶ್ಯ ಮತ್ತೆ ಜನರ ಕಣ್ಮುಂದೆ ಬರತೊಡಗಿದೆ.