ಶನಿವಾರ ಬೆಳಿಗ್ಗೆಯಿಂದಲೇ ಕರಾವಳಿಯಲ್ಲಿ ಭಾರೀ ಗಾಳಿ ಮಳೆ
ಮಂಗಳೂರು ಜೂನ್ 09 : ಶನಿವಾರ ಮುಂಜಾನೆಯಿಂದ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಬಿಡದೆ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತ ಗೊಂಡಿದೆ.
ಭಾರೀ ಗಾಳಿ ಮಳೆಯಿಂದಾಗಿ ನೂರಾರು ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ನೆಲಸಮವಾಗಿದ್ದರಿಂದ ಜಿಲ್ಲೆಯ ಹಲವಾರು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ ಇನ್ನೂ 2 ದಿನ ಭಾರೀ ಮಳೆ ಮುಂದುವರೆಯಲಿದೆ.
In Pics : ಹುಚ್ಚೆದ್ದು ಹೊಡೆಯುತ್ತಿರುವ ಮಳೆಗೆ ಮುಳುಗಿದ ಮಂಗಳೂರು
ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಕಡಲ ಅಬ್ಬರ ಹೆಚ್ಚಾಗಿದ್ದು ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿವೆ. ಭಾರೀ ಮಳೆ ಸುರಿಯುತ್ತಿದ್ದು ಮಳೆಯೊಂದಿಗೆ ವೇಗವಾಗಿ ಗಾಳಿಯೂ ಬೀಸುತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಮಹಿಳೆಯೊಬ್ಬರು ಹೊಳೆಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಎಂಬಲ್ಲಿ ಈ ಘಟನೆ ನಡೆದಿದ್ದು, ಹೊಳೆಯ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಮಣ್ಣು ಕುಸಿದು ರೇವತಿ (50) ಎಂಬವರು ಹೊಳೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಕುರಿತು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಂಗಾರಿನ ಸಂಭ್ರಮ: ವಾಡಿಕೆ ಮಳೆಯ ನಿರೀಕ್ಷೆಯಲ್ಲಿ ಕೊಡಗಿನ ರೈತರು
ಭಾರೀ ಗಾಳಿ ಮಳೆಯಿಂದಾಗಿ ಮಂಗಳೂರಿನ ಕೋಟೆಕಾರು ಬೀರಿ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಮರಗಳು ಧರೆಗುರುಳಿವೆ. ಪುತ್ತೂರು ತಾಲೂಕಿನ ಪೆರ್ನಾಜೆಯಲ್ಲಿ ಗಾಳಿಗೆ ಅಡಿಕೆ ತೋಟ ನೆಲಕಚ್ಚಿದೆ. ಕೆಲ ಮನೆಗಳ ಮೇಲ್ಚಾವಣೆ ಹಾರಿ ಹೋಗಿವೆ. ಮಂಗಳೂರಿನ ಭವಂತಿ ರಸ್ತೆಯ ಹಳೆ ಕಟ್ಟಡ ಒಂದರ ಮುಂಭಾಗ ಕುಸಿದ ಪರಿಣಾಮ ಕಟ್ಟಡದ ಕೆಳಗೆ ನಿಲ್ಲಿಸಿದ್ದ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಮಂಗಳೂರಿನಲ್ಲಿ ಮಳೆ ಅಬ್ಬರ: ಮರ ಧರೆಗುರುಳಿ ನಾಲ್ವರಿಗೆ ಗಾಯ
ಜಿಲ್ಲೆಯ ಹಲವು ಭಾಗದಲ್ಲಿ ವಿದ್ಯುತ್ ಕೈಕೊಟ್ಟಿದೆ. ಮಳೆಯ ಜೊತೆಗೆ ಗಾಳಿಯ ರಭಸದಿಂದಾಗಿ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದ್ದು ಕಡಲು ಭೋರ್ಗರೆಯುತ್ತ ದಡಕ್ಕೆ ಅಪ್ಪಳಿಸುತ್ತಿದೆ. ಮೀನುಗಾರರಿಗೆ ಸಮುದ್ರದಲ್ಲಿ ಮೀನು ಹಿಡಿಯುವ ಸಾಹಸ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.