ಮಂಗಳೂರಿನಲ್ಲಿ ನೀರೋನೀರು ರಸ್ತೆಗಿಳಿಯಲು ಗಾಬರಿ ಪಡುವ ಕಾರು
ಮಂಗಳೂರು, ಜೂನ್ 19: ರಾಜ್ಯದ ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ ಆರಂಭವಾಗಿದೆ. ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ಪ್ರತಾಪ ತೋರಿಸಲು ಆರಂಭಿಸಿದ್ದಾನೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿಯಲ್ಲಿ ಮುಂಜಾನೆಯಿಂದ ಭಾರೀ ಮಳೆ ಬೀಳುತ್ತಿದೆ.
ಮಂಗಳೂರು ನಗರ ಒಳಗೊಂಡ ಹಾಗೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಸೋಮವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಮಂಗಳೂರು ನಗರ ಸೇರದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಇದರಿಂದಾಗಿ ಮಂಗಳೂರಿನ ಜನರಲ್ಲಿ ಮತ್ತೆ ಆತಂಕ ಮೂಡಿದೆ. ಮಂಗಳವಾರ ಬೆಳಗ್ಗೆಯಿಂದ ನಗರ ಸುತ್ತಮುತ್ತ ಗುಡುಗು ಸಹಿತ ಜಡಿಮಳೆ ಸುರಿಯುತ್ತಿದೆ.
ಹೊಸ್ಮಠ ಸೇತುವೆ ಮುಳುಗಡೆ, ಸುಬ್ರಹ್ಮಣ್ಯದಲ್ಲಿ ತೀರ್ಥ ಸ್ನಾನವೂ ಸವಾಲು
ಭಾರೀ ಮಳೆ ಪರಿಣಾಮ ಮಂಗಳೂರಿನ ರಸ್ತೆಗಳಲ್ಲಿ ನೀರು ಹರಿಯಲಾರಂಬಿಸಿದೆ. ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ನಗರದ ಚರಂಡಿಗಳು ಉಕ್ಕಿ ಹರಿಯುತ್ತಿವೆ. ಮೇ 29ರ ಮಹಾಮಳೆಯ ಪರಿಸ್ಥಿತಿ ಮತ್ತೆ ಎದುರಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಯಾವುದೇ ಪರಿಸ್ಥಿತಿ ನಿಭಾಯಿಸಲು ಕ್ಷಿಪ್ರ ಕಾರ್ಯ ಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ರವಾನಿಸಲಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಆದೇಶ ಹೊರಡಿಸಲಾಗಿದೆ.
ಚಾರ್ಮಾಡಿ ಘಾಟಿ ಪ್ರದೇಶದಲ್ಲಿಯೂ ಹೆಚ್ಚು ಮಳೆಯಾಗುತ್ತಿದೆ. ಅಷ್ಟೇ ಅಲ್ಲ, ರಸ್ತೆಯೇ ಕಾಣದಂತೆ ಎಲ್ಲೆಡೆ ಮಂಜು ಆವರಿಸಿದೆ. ಮಂಜಿನ ಜೊತೆ ಮಳೆ ಸುರಿಯುತ್ತಿರುವುದರಿಂದ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರಿಗೆ ಕೊಂಚ ತೊಂದರೆಯುಂಟಾಗುತ್ತಿದೆ.