ಜಿಎಸ್ಟಿ ದರದಲ್ಲಿ ಗ್ರಾಹಕರಿಗೆ ವಂಚನೆ, ಮಳಿಗೆಗಳ ವಿರುದ್ಧ ದೂರು
ಮಂಗಳೂರು, ನವೆಂಬರ್ 26: ಜಿಎಸ್ ಟಿ ಕೌನ್ಸಿಲ್ ನಿಂದ ನವೆಂಬರ್ 15ರಿಂದಲೇ ಆಹಾರ ಉತ್ಪನ್ನ ಹಾಗೂ ಸಾಬೂನು ಸೇರಿದಂತೆ 177 ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಶೇಕಡಾ 28 ರಿಂದ ಶೇಕಡಾ 18ಕ್ಕೆ ಇಳಿಸಲಾಗಿತ್ತು.
ಜಿಎಸ್ ಟಿ ಇಳಿಕೆ ನಂತರವೂ ತಿಂಡಿ-ತಿನಿಸುಗಳ ದರ ಏರಿಕೆಗೆ ಕೇಂದ್ರ ಗರಂ
ಆದರೆ, ರಾಜ್ಯದ ವಿವಿಧೆಡೆ ಕೆಲ ವ್ಯಾಪಾರ ಮಳಿಗೆಗಳಲ್ಲಿ ಜಿಎಸ್ ಟಿ ತೆರಿಗೆ ದರದಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತೂಕ, ಅಳತೆ ಮತ್ತು ಕಾನೂನು ಮಾಪನ ಇಲಾಖಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಹದಿನೈದು ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ.
ಹಾಗೆಯೇ ಮಂಗಳೂರಿನ ಅತ್ತಾವರದ ಬಿಗ್ ಬಜಾರ್ ಮಳಿಗೆಯ ಮೇಲೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ದರ ಇಳಿಕೆ ಬದಲು ರಿಯಾಯಿತಿ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದು ಬಯಲಾಗಿದೆ.
ಹೀಗಾಗಿ ಬಿಗ್ ಬಜಾರ್ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಹಂಪನಕಟ್ಟೆಯ ಸಿಟಿ ಸೆಂಟರ್ ಮಾಲ್ ನ ಕೆಲ ಮಳಿಗೆಗಳ ಮೇಲೂ ದಾಳಿ ನಡೆಸಲಾಯಿತು. ಒಟ್ಟು ನಾಲ್ಕು ಮಳಿಗೆಗಳ ವಿರುದ್ಧ ಕಾನೂನು ಮಾಪನ ಇಲಾಖೆ ಪ್ರಕರಣ ದಾಖಲಿಸಿದೆ.