ಕಲ್ಲಡ್ಕ ಪ್ರಭಾಕರ ಭಟ್ ರ ಶಾಲೆಗೆ ರಾಜ್ಯ ಸರ್ಕಾರದ ಅನುದಾನ ರದ್ದು
ಮಂಗಳೂರು, ಆಗಸ್ಟ್ 8: ಕಲ್ಲಡ್ಕ ಪ್ರಭಾಕರ ಭಟ್ ರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸರಕಾರ ನೀಡುತ್ತಿದ್ದ ಅನುದಾನಕ್ಕೆ ಕತ್ತರಿ ಬಿದ್ದಿದೆ. ಸರಕಾರದ ಈ ನಡೆಯನ್ನು ಖಂಡಿಸಿರುವ ಕಲ್ಲಡ್ಕ ಪ್ರಭಾಕರ್ ಭಟ್, "ಇದೊಂದು ಸಿದ್ದರಾಮಯ್ಯ ಸರಕಾರದ ದ್ವೇಷದ ನಡೆ," ಎಂದು ಟೀಕಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾಕೇಂದ್ರವನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಇವುಗಳಿಗೆ ದೇವಸ್ಥಾನದ ದತ್ತು ಯೋಜನೆಯಡಿ ಅನುದಾನ ಲಭಿಸುತ್ತಿತ್ತು.
2007ರಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಈ ಎರಡು ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಕೊಲ್ಲೂರು ದೇವಸ್ಥಾನದಿಂದ ಶ್ರೀರಾಮ ವಿದ್ಯಾಕೇಂದ್ರಕ್ಕೆ 2.32 ಕೋಟಿ ಅನುದಾನ ಲಭಿಸಿದ್ದರೆ, ಪುಣಚ ಶ್ರೀದೇವಿ ಶಾಲೆಗೆ 50.72 ಲಕ್ಷ ನೆರವು ನೀಡಲಾಗಿತ್ತು.
ಇದೀಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ದೇವಸ್ಥಾನದಿಂದ ಶಾಲೆಗೆ ಬರುತ್ತಿದ್ದ ಅನುದಾನಕ್ಕೆ ಬ್ರೇಕ್ ಹಾಕಿದೆ. 'ದೇವಸ್ಥಾನದ ದುಡ್ಡು ಶಾಲೆಗೆ ವ್ಯಯಿಸಬಾರದು' ಎಂದು ಉಲ್ಲೇಖಿಸಿ 2007ರಲ್ಲಿ ರಾಜ್ಯ ಸರಕಾರ ನೀಡಿದ್ದ ದತ್ತು ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ಟರ ನೇತೃತ್ವದಲ್ಲಿ ನಡೆಯುತ್ತಿರುವುದರಿಂದ ರಾಜ್ಯ ಸರಕಾರ ದ್ವೇಷದ ರಾಜಕಾರಣಕ್ಕಾಗಿ ಅನುದಾನ ಕಡಿತಗೊಳಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು 'ಒನ್ಇಂಡಿಯಾ' ಕ್ಕೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಕಲ್ಲಡ್ಕ ಪ್ರಭಾಕರ್ ಭಟ್, "ಇದು ಸಿದ್ದರಾಮಯ್ಯ ಸರಕಾರದ ದ್ವೇಷದ ರಾಜಕಾರಣ. ರಾಜ್ಯ ಸರಕಾರ ಬಡ ಮಕ್ಕಳ ಹೊಟ್ಟೆಗೆ ಹೊಡೆದಿದೆ. ಈ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿರುವುದು ಸಿದ್ಧರಾಮಯ್ಯ ಹೇಳಿಕೊಂಡು ತಿರುಗಾಡುವ ಅಹಿಂದದ ಮಕ್ಕಳೇ. ಶೇಕಡಾ 90ರಷ್ಟು ಅಹಿಂದ ವರ್ಗಕ್ಕೆ ಸೇರಿದ ಬಡ ಮಕ್ಕಳು ಕೇಂದ್ರದಲ್ಲಿದ್ದಾರೆ. ಇವರಿಗೆ ರಾಜ್ಯ ಸರಕಾರ ಅನ್ಯಾಯ ಮಾಡಿದೆ," ಎಂದು ಕಿಡಿಕಾರಿದ್ದಾರೆ .