ಗೋಮಾಂಸ ತಿನ್ನುವವರಿಗೆ ಹಂದಿ ಸಾಕಲು ಕೊಡಿ: ಹಿಂಜಾವೇ
ಮಂಗಳೂರು, ಏಪ್ರಿಲ್ 03: ಮುಂದೆ ಅಧಿಕಾರಕ್ಕೆ ಬರುವ ಸರಕಾರ ಗೋಮಾಂಸವನ್ನು ಸೇವಿಸುವವರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕುರಿತು ಯೋಚಿಸಬೇಕು. ಗೋಭಕ್ಷಕಣೆ ಮಾಡುವ ಪ್ರತಿ ಕುಟುಂಬಕ್ಕೆ ನಾಲ್ಕು ಹಂದಿಗಳನ್ನು ಸಾಕಲು ನೀಡುವ ವ್ಯವಸ್ಥೆ ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳನ್ನು ಹಟ್ಟಿಯಿಂದ ತಲವಾರು ಝಳಪಿಸಿ ರಾಜಾರೋಷವಾಗಿ ಕಳ್ಳತನ ಮಾಡಲಾಗುತ್ತಿದೆ. ಇಂತಹ ಘಟನೆಗಳು ಕರಾವಳಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಕಳ್ಳತನಕ್ಕೆ ಬೆಂಬಲ ಸೂಚಿಸುವ ರಾಜಕೀಯ ಪಕ್ಷಗಳು, ಬುದ್ಧಿಜೀವಿಗಳೂ ಸಾಕಷ್ಟು ಜನರಿದ್ದು, ಇವರೆಲ್ಲಾ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಗೋವುಗಳು ಹಿಂದೂಗಳ ಶ್ರದ್ಧೆಯ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಂದೆ ಅಧಿಕಾರಕ್ಕೆ ಬರುವ ಪಕ್ಷ ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧ ಮಾಡಬೇಕು. ಹಾಗೂ ಗೋಭಕ್ಷಕರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಮಾಡಬೇಕು ಎಂದು ಒತ್ತಾಯಿಸಿದರು.
ಗೋ ಭಕ್ಷಣೆ ಮಾಡುವ ಕುಟುಂಬಗಳಿಗೆ ಸರಕಾರದ ವತಿಯಿಂದಲೇ ನಾಲ್ಕು ಹಂದಿಗಳನ್ನು ನೀಡಿ ಅದನ್ನು ಸಾಕುವ ವ್ಯವಸ್ಥೆಯನ್ನೂ ಸರಕಾರದಿಂದಲೇ ಮಾಡಿಸಬೇಕೆಂದು ಅವರು ಒತ್ತಾಯಿಸಿದರು. ಮಂಗಳೂರಿನ ಕೈರಂಗಳದ ಗೋ ಶಾಲೆಯಿಂದ ಗೋವುಗಳನ್ನು ಕದ್ದ ಗೋ ಕಳ್ಳರನ್ನು ಎರಡು ದಿನಗಳ ಒಳಗೆ ಪೋಲೀಸರು ಬಂಧಿಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಸಂದರ್ಭದಲ್ಲಿ ಎಚ್ಚರಿಸಿದರು.