ಆಕೆ ಬದುಕು ಕೊಟ್ಟಳು, ಆತ ಪ್ರೀತಿಯನ್ನೇ ಮರೆತು ಕೈಕೊಟ್ಟ!
ಮಂಗಳೂರು, ಜನವರಿ 11: ಕಿನ್ನಿಗೋಳಿಯ ಯುವತಿಯನ್ನು ಪ್ರೀತಿಸಿದ ನಾಟಕವಾಡಿ, ವಂಚಿಸಿದ ವಾಮಂಜೂರಿನ ಯುವಕನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಾಗಿದೆ. ಕಿನ್ನಿಗೋಳಿಯ ಯುವತಿ ತಾನು ಮೆಚ್ಚಿದ ವಾಮಂಜೂರಿನ ಯುವಕ ಅಮಿತ್ ಬದುಕಲ್ಲಿ ನೆಲೆ ಕಾಣಲಿ ಎಂಬ ಕಾರಣಕ್ಕೆ ಕಂಡಕಂಡವರ ಕೈಕಾಲು ಹಿಡಿದು, ಸಾಲ ಮಾಡಿ ಆತನನ್ನು ಅಬುಧಾಬಿಗೆ ಕಳಿಸಿಕೊಟ್ಟಿದ್ದಳು.
ಅಮಿತ್ ನನ್ನು ಮದುವೆಯಾಗುವ ನಂಬಿಕೆಯಲ್ಲಿ ಆತನಿಗೆ ತನ್ನ ಸರ್ವಸ್ವವನ್ನೂ ಅರ್ಪಿಸಿದ್ದಳು. ಒಂದು ದಿನ ಅಮಿತ್ ಮನೆಗೂ ಹೋಗಿದ್ದಳು. ನಿನ್ನ ಜೊತೆಗೇ ಅಮಿತ್ ಮದುವೆ ಮಾಡ್ತೀವಿ ಎಂದು ಆ ಯುವಕನ ತಂದೆ-ತಾಯಿ ಭಾಷೆ ಕೂಡ ಕೊಟ್ಟಿದ್ದರು.[ನೋಟು ಬದಲಾವಣೆ: ಸ್ವಾಮೀಜೀಗೇ ಮುಂಡಾಯಿಸಿದ ಖದೀಮ]
ಇದೀಗ ಅಬುಧಾಬಿಯಿಂದ ಅಮಿತ್ ಊರಿಗೆ ಬಂದವನು, ಮದುವೆ ಆಗಲ್ಲ ಎಂದು ಹೇಳಿ ವಾಪಸ್ ಹಾರಿದ್ದಾನೆ. ಪೊಲೀಸರಿಗೆ ದೂರಿದರೆ ನಿನ್ನ ಫೋಟೋಗಳನ್ನು ಫೇಸ್ ಬುಕ್ ಗೆ ಹಾಕಿ ಮರ್ಯಾದೆ ತೆಗಿತೀನಿ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಆತನನ್ನು ಮನಸಾರೆ ಪ್ರೀತಿಸಿದ್ದ ಯುವತಿ ಧೈರ್ಯ ಮಾಡಿ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರಿದ್ದಾರೆ.
ಕಿನ್ನಿಗೋಳಿಯ ಯುವತಿ ಮತ್ತು ವಾಮಂಜೂರಿನ ಅಮಿತ್ ಮಂಗಳೂರಿನಲ್ಲಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರಿಗೂ ಸ್ನೇಹವಾಗಿದೆ. ಮುಂದೆ ಸ್ನೇಹವು ಪ್ರೀತಿಗೆ ಬದಲಾಗಿತ್ತು. ಈಗ ಅಮಿತ್ ನಂಬಿಕೆ ದ್ರೋಹ ಎಸಗಿದ್ದಾನೆ ಎಂದು ಯುವತಿ ಕಣ್ಣೀರಾಗಿದ್ದಾರೆ.