ಕಟೀಲು ದೇಗುಲದಲ್ಲಿ ಮುಂಜಾನೆ ಗಂಜಿ ಊಟ ಆರಂಭ
ಮಂಗಳೂರು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅನ್ನದಾನಕ್ಕೆ ಪ್ರಸಿದ್ಧವಾಗಿತ್ತು. ಆದರೆ ಇದೀಗ ಹೊಸ ಸೇರ್ಪಡೆ ಎಂಬಂತೆ ಕಟೀಲು ದೇಗುಲದಲ್ಲಿ ಬೆಳಗ್ಗಿನ ಜಾವ ಭಕ್ತರಿಗೆ ಗಂಜಿ ಊಟ ಪ್ರಾರಂಭವಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಾತ್ರಾರ್ಥಿಗಳಿಗಾಗಿ ಅನ್ನಪ್ರಸಾದ ವ್ಯವಸ್ಥೆ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಇತ್ತು. ಇದೀಗ ಬೆಳಗ್ಗೆ ೭.೩೦ ರಿಂದ ೧೦ ರ ವರೆಗೆ ಭಕ್ತರಿಗೆ ಗಂಜಿ ಊಟವನ್ನು ಪ್ರಸಾದ ರೂಪವಾಗಿ ನೀಡುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ.
ಪುಣ್ಯ ಕ್ಷೇತ್ರವಾಗಿ ಮತ್ತು ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿರುವ ಕಟೀಲು ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೇರೆ ಬೇರೆ ಊರುಗಳಿಂದ ಭಕ್ತಾದಿಗಳು , ಯಾತ್ರಾರ್ಥಿಗಳು ಆಗಮಿಸುತ್ತಿರುತ್ತಾರೆ. ಈ ಹಿನ್ನಲೆಯಲ್ಲಿ ಅನ್ನಪ್ರಸಾದಕ್ಕಾಗಿ ದೇಗುಲ ಈಗಾಗಲೇ ೩ ಕೋಟಿ ರೂ. ಖರ್ಚು ಮಾಡುತ್ತಿದೆ.
ಬೇರೆ ಬೇರೆ ಊರುಗಳಿಂದ ಬರುವ ಭಕ್ತರಿಗೆ , ಪ್ರವಾಸಕ್ಕೆ ಬರುವ ಶಾಲಾ ಮಕ್ಕಳಿಗೆ ಕಟೀಲು ದೇಗುಲದಲ್ಲಿ ಊಟದ ವ್ಯವಸ್ಥೆ ಇರುವುದು ಅನುಕೂಲವಾದಂತೆ ಇದೀಗ ಬೆಳಗ್ಗಿನ ಜಾವ ಬಿಸಿ ಬಿಸಿ ಗಂಜಿ ಊಟವು ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಇನ್ನು ಮುಂಬರುವ ದಿನಗಳಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗಾಗಿ ದಿನವಿಡೀ ಪಾನೀಯ ನೀಡುವ ಬಗ್ಗೆ ಕಟೀಲು ಆಡಳಿತ ಮಂಡಳಿ ಚಿಂತನೆ ಕೂಡಾ ನಡೆಸಿದೆ.