ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಪುತ್ತೂರಿನ ವಿದ್ಯಾವರ್ಧಕ ಸಂಘ
ಮಂಗಳೂರು, ಆಗಸ್ಟ್ 24: ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಸಿಲುಕಿ ಸಂತ್ರಸ್ತರಾದ ಕುಟುಂಬಗಳ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆಯಾದಲ್ಲಿ ಒಂದು ವರ್ಷ ಉಚಿತ ಶಿಕ್ಷಣ ನೀಡಲು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮುಂದಾಗಿದೆ.
ಸಂಘದ ಕಾರ್ಯದರ್ಶಿ ಕೃಷ್ಣ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು ಜಲಪ್ರಳಯದಲ್ಲಿ ಸಂತ್ರಸ್ತರಾದ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮುಂದುವರಿಸಲು ತೊಂದರೆಯಾದಲ್ಲಿ ವಿದ್ಯಾವರ್ಧಕ ಸಂಘವನ್ನು ಸಂಪರ್ಕಿಸಿದರೆ ಅಂಥಹ ಮಕ್ಕಳಿಗೆ ಉಚಿತ ಪ್ರವೇಶದ ಜೊತೆಗೆ ಒಂದು ವರ್ಷದ ಉಚಿತ ಶಿಕ್ಷಣದ ಜೊತೆಗೆ ವಸತಿಯನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ .
ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ: ಚಂದನ್ ಶೆಟ್ಟಿ ಮನವಿ
ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಎಲ್ ಕೆ ಜಿ ಯಿಂದ ಹಿಡಿದು ಇಂಜಿನಿಯರಿಂಗ್ ವರೆಗಿನ ಶಿಕ್ಷಣ ಸಂಸ್ಥೆಗಳಿವೆ. 5 ನೇ ಕ್ಲಾಸ್ ನಿಂದ ಹಿಡಿದು ಇಂಜಿನಿಯರಿಂಗ್ ವರೆಗಿನ ಶಿಕ್ಷಣಕ್ಕೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯವನ್ನು ನೀಡಲು ವಿದ್ಯಾವರ್ಧಕ ಸಂಘ ನಿರ್ಧರಿಸಿದೆ.
ಸಂತ್ರಸ್ತರ ಮಕ್ಕಳಿಗೆ ಒಂದು ವರ್ಷ ಉಚಿತ ಶಿಕ್ಷಣ ಕೊಡುವ ಜೊತೆಗೆ ವಿದ್ಯಾರ್ಥಿಯ ಆರ್ಥಿಕ ಸ್ಥಿತಿ ಸುಧಾರಿಸದೇ ಹೋದಲ್ಲಿ ಉಚಿತ ಶಿಕ್ಷಣ ಸೌಲಭ್ಯವನ್ನು ಮುಂದುವರಿಸಲೂ ಸಂಘ ನಿರ್ಧರಿಸಿದೆ.