ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ
ಮಂಗಳೂರು, ಸೆಪ್ಟೆಂಬರ್ 16: ಸ್ನೇಹಿತರಿಂದ ಇರಿತಕ್ಕೊಳಗಾಗಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪಡೀಲ್ ಬಳಿಯ ಕೊಡಿಕಲ್ ಶಿವನಗರ ನಿವಾಸಿ ನಿಸರ್ಗ (19) ಮೃತ ಯುವಕ.
ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಇಬ್ಬರು ವಿದೇಶಿಗರ ಬಂಧನ
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸೆಪ್ಟೆಂಬರ್ 14 ರ ರಾತ್ರಿ ನಗರದ ಅತ್ತಾವರದಲ್ಲಿ ನಡೆಯುವ ಮೊಸರು ಕುಡಿಕೆ ಕಾರ್ಯಕ್ರಮ ವೀಕ್ಷಿಸಲು ಕೋಡಿಕಲ್ ಶಿವನಗರ ಸ್ನೇಹಿತರಾದ ನಿಸರ್ಗ, ಪುನೀತ್, ನಿಖಿಲ್, ಪ್ರಕಾಶ್ ಹಾಗೂ ಶರತ್ ತೆರಳಿದ್ದರು.
ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ರಾತ್ರಿ 2:30 ಹೊತ್ತಿಗೆ ಸ್ನೇಹಿತರ ಮಧ್ಯೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ನಿಸರ್ಗ ಅವರ ಮೇಲೆ ನಾಲ್ವರು ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಪುನೀತ್ ತನ್ನ ಬಳಿ ಇದ್ದ ಚಾಕುವಿನಿಂದ ನಿಸರ್ಗ ಎದೆಗೆ ತಿವಿದಿದ್ದಾನೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಸರ್ಗನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಸರ್ಗ ಶನಿವಾರ ಮೃತಪಟ್ಟಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆ ಪೊಲೀಸರು ಪುನೀತ್, ನಿಖಿಲ್ , ಪ್ರಕಾಶ್ ಹಾಗೂ ಶರತ್ ನನ್ನು ಬಂಧಿಸಿದ್ದಾರೆ.
ಗಾಂಜಾ ವ್ಯವಹಾರದ ಬಗ್ಗೆ ನಿಸರ್ಗ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಹಾಗೂ ತಮಗೆ ಗೌರವ ನೀಡುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಸ್ನೇಹಿತರು ಹಲ್ಲೆ ನಡೆಸಿದ್ದರು.