ಹಣದಾಸೆಗೆ ಸ್ನೇಹಿತನನ್ನೇ ಹತ್ಯೆಗೈದಿದ್ದ ನಾಲ್ಕು ಆರೋಪಿಗಳು ಅಂದರ್!
ಮಂಗಳೂರು, ಜನವರಿ. 11 : ಉದ್ಯಮಿ ಉಮೇಶ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಮೂಲ್ಕಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಸಾದ್ ಆಚಾರ್ಯ, ರಾಜೇಶ್ ಶೆಟ್ಟಿ, ತಿಲಕ್ ಪೂಜಾರಿ, ಪ್ರಕಾಶ್ ಎಂಬುವವರನ್ನು ಬಂಧಿಸಿದ್ದಾರೆ. ವಿಚಿತ್ರ ಅಂದರೆ ಬಂಧಿತ ಆರೋಪಿಗಳು ಉಮೇಶ್ ಶೆಟ್ಟಿಯ ಸ್ನೇಹಿತರು. ಇವರು ಹಣದಾಸೆಗೆ ಈ ಕೊಲೆ ಮಾಡಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಘಟನೆ ಹಿನ್ನೆಲೆ: ಕಳೆದ ಡಿಸೆಂಬರ್ 28 ರಂದು ಏಕಾಏಕಿ ಕಾಣೆಯಾಗಿದ್ದ ಕಿನ್ನಿಗೋಳಿ ಬಳಿಯ ಕಿಲೆಂಜೂರು ಗ್ರಾಮದ ನಿವಾಸಿ ಉಮೇಶ್ ಶೆಟ್ಟಿಯ ಶವ ನಾಲ್ಕು ದಿನಗಳ ಅನಂತರ ನಿಡ್ಡೋಡಿ ಪರಿಸರದಲ್ಲಿ ಪತ್ತೆಯಾಗಿತ್ತು.[ಹೊಸ ವರ್ಷಾಚರಣೆ ತಕರಾರಿಗೆ ಜತೆಯಲ್ಲಿದ್ದವನದೇ ಕೊಲೆ]
ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಬಣ್ಣಿಸಲಾಗಿತ್ತು. ಮೂಲ್ಕಿ ಮತ್ತು ಮೂಡಬಿದಿರೆ ಪೊಲೀಸರು ಇದೊಂದು ವ್ಯವಸ್ಥಿತವಾದ ಕೊಲೆ ಎಂದೇ ತನಿಖೆಯನ್ನು ನಡೆಸಿ ಕೊನೆಗೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ಮಂದಿಯ ತಂಡವು ಸೇರಿಕೊಂಡು ಉಮೇಶ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಮೊದಲೇ ಹೇಳಿತ್ತು. ಹಣಕಾಸಿನ ವಿಷಯದಲ್ಲಿ ಈ ವ್ಯವಸ್ಥಿತ ಕೊಲೆ ನಡೆಸಿರುವುದು ಸಾಬೀತಾಗಿದೆ.
ಪಣಂಬೂರಿನಲ್ಲಿ ಟ್ರಾನ್ಸ್ ಪೋರ್ಟ್ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ ಉಮೇಶ್ ಶೆಟ್ಟಿ ಕೋರೆ ಉದ್ಯಮವನ್ನು ನಡೆಸುವುದಕ್ಕೆ ಪೂರ್ವ ತಯಾರಿ ನಡೆಸುತ್ತಿರುವಾಗಲೇ ಈತ ಕೊಲೆಯಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿತ್ತು.