ಚಪ್ಪಲಿಯಿಂದ ಹೊಡೆಯಬೇಕೆಂದಿದ್ದ ಸಚಿವ ಖಾದರ್ ಕ್ಷಮೆಯಾಚನೆ
ಮಂಗಳೂರು, ಮಾರ್ಚ್. 01 : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಿಪಿಎಂ ಪಕ್ಷದ ಸೌಹಾರ್ದ ರ್ಯಾಲಿಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಘೋಷಿಸಿದ್ದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕೆಂದು ಗುಡುಗಿದ್ದ ಆಹಾರ ಸಚಿವ ಯು.ಟಿ. ಖಾದರ್ ಇದೀಗ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಫೆಬ್ರವರಿ 15ರಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್ ಉದ್ದೇಶಿಸಿ ವಿವಾದಿತ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದರು.[ಸಂವಿಧಾನ ಗೌರವಿಸದವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು -ಖಾದರ್]
'ನನ್ನ ಬಾಯಿಂದ ಅಂತಹ ಮಾತು ಬರಬಾರದಿತ್ತು. ಆದರೆ, ಕೆಲವರು ಇದನ್ನೇ ರಾಜಕೀಯವಾಗಿ ಬಳಸುತ್ತಿದ್ದಾರೆ. ಯಾರಿಗೂ ನೋವುಂಟು ಮಾಡಲು ನಾನೂ ಅಂಥ ಹೇಳಿಕೆ ನೀಡಿಲ್ಲ' ಎಂದು ಆಹಾರ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದರು.
ಬಂದ್ ಕರೆ ಕೊಟ್ಟವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬುದಾಗಿ ಖಾದರ್ ಆಡಿದ್ದ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಇದಲ್ಲದೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಖಾದರ್ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಭಾನುವಾರ ಕೊಲ್ಯದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದ ಸಚಿವರ ವಿರುದ್ಧ ಘೋಷಣೆ ಕೂಗಿ, ಕರಿಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
'ನೆರೆಯ ರಾಜ್ಯದ ಮುಖ್ಯಮಂತ್ರಿ ಬಂದಾಗ ಸತ್ಕರಿಸುವ ಬದಲು ಸಂವಿಧಾನ ಮೀರಿ ಬಂದ್ ಮಾಡೋದು ಸರಿಯಲ್ಲ. ನಾನು ಆ ಮಾತು ಆಡಬಾರದಿತ್ತು.
ಇದಕ್ಕೆ ನನ್ನ ಎಲ್ಲಾ ಹಿತೈಷಿಗಳಿಂದ ವಿರೋಧ ವ್ಯಕ್ತವಾಗಿದೆ. ಇದಲ್ಲದೆ ನನ್ನ ಮಗಳೂ ಆ ರೀತಿ ಮಾತು ಆಡಬಾರದಿತ್ತು ಎಂದು ಹೇಳಿದ್ದಳು.
ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ವರ್ಷಗಳ ಅವಧಿಯಲ್ಲಿ ಯಶಸ್ವಿ ಆಡಳಿತ ನಡೆಸಿದ್ದಾರೆ. ಬಿಜೆಪಿ ನಾಯಕರು ತಮ್ಮೊಳಗಿನ ಗೊಂದಲಗಳನ್ನು ಬಗೆಹರಿಸಲು ಕಾಂಗ್ರೆಸ್ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ' ಎಂದು ಖಾದರ್ ಹೇಳಿದರು.