ಹಿಂದೂ ಧರ್ಮಕ್ಕೆ ಮತಾಂತರ, ಅರುಣ್ ಮೊಂತೆರೊ ಈಗ ಅರುಣ್ ಪೂಜಾರಿ
ಮಂಗಳೂರು, ಜುಲೈ 24: ಕ್ರೈಸ್ತ ಕುಟುಂಬವೊಂದು ಇಂದು ಗುರುಪುರದ ವಜ್ರದೇಹಿ ಮಠದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿತು.
40 ವರುಷಗಳ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಪದವಿನಂಗಡಿಯಾ ಅರುಣ್ ಮೊಂತೆರೊ ಕುಟುಂಬಕ್ಕೆ ಕ್ರೈಸ್ತ ಧರ್ಮದಲ್ಲಿ ಸಂತೋಷವಿಲ್ಲದ ಕಾರಣ ಮತ್ತೆ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಕ್ರಿಸ್ತರಾಗಿ ಹಿಂದೂ ದೇವಾಲಯಗಳಿಗೆ ಹೋಗುತ್ತಿದ್ದರು ಮತ್ತು ಹಿಂದೂ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದರು. ಅಲ್ಲದೆ ಅರುಣ್ ಮೊಂತೆರೋ ಅವರು ಹಿಂದೂ ಜಾಗರಣ ವೇದಿಕೆ ಪದವಿನಂಗಡಿ ಇದರ ಜೊತೆ ಉತ್ತಮ ಸಂಬಂಧವನ್ನು ಕೂಡ ಹೊಂದಿದ್ದರು. ಅದರ ಪದಾಧಿಕಾರಿಗಳೊಂದಿಗೆ ತಾನು ಮತ್ತೆ ಹಿಂದೂ ಧರ್ಮಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹಿಂದೂ ಜಾಗರಣ ವೇದಿಕೆಯ ಸದಸ್ಯರು ಇದನ್ನು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯ ಬಳಿ ಹೇಳಿದ್ದು ಅವರ ಮಾರ್ಗದರ್ಶನದಂತೆ ಸೋಮವಾರ ಅರುಣ್ ಮೊಂತೇರೊ ಕುಟುಂಬದ ಐದು ಮಂದಿ ಮರಳಿ ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡರು.
ಹಿಂದೂ ಧರ್ಮಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅರುಣ್ ಅವರ ಕುಟುಂಬವನ್ನು ಮರಳಿ ಹಿಂದೂ ಧರ್ಮಕ್ಕೆ ಸ್ವಾಗತಿಸಲಾಯಿತು. ಅರುಣ್ ಮೊಂತೆರೋ ತನ್ನ ಹೆಸರನ್ನು ಅರುಣ್ ಪೂಜಾರಿ ಎಂದು, ಆತನ ಪತ್ನಿ ಸುನೀತಾ, ಸಂಗೀತಾ ಆಗಿ, ಆವರ ತಾಯಿ ಐಡಾ ತೋಮಸ್, ಗೌರಿ ಪೂಜಾರ್ತಿಯಾಗಿ, ಅರುಣ್ ಅವರ ಇಬ್ಬರು ಗಂಡು ಮಕ್ಕಳು ಅಜಯ್ ಹಾಗೂ ಅನೀಶ್ ಪೂಜಾರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.