ಮುಂದುವರೆದ ಮುಂಗಾರು: ನಾಡದೋಣಿ ಮೀನುಗಾರರು ಕಂಗಾಲು
ಮಂಗಳೂರು, ಜುಲೈ.03: ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರನ್ನು ಕಂಗಾಲಾಗಿಸಿದೆ. ವರ್ಷಂಪ್ರತಿ ಯಾಂತ್ರಿಕೃತ ಮೀನುಗಾರಿಕಾ ರಜೆ ಘೋಷಿಸಿದ ನಂತರ ಮೀನುಗಾರಿಕೆಗೆ ಕಡಲಿಗಿಳಿಯುವ ಈ ನಾಡದೋಣಿ ಮೀನುಗಾರರು ಈ ಬಾರಿಯ ಮುಂಗಾರು ಮಳೆ ಕಡಲಿಗೆ ಇಳಿಯದಂತೆ ಮಾಡಿದೆ.
ರಾಜ್ಯದ ಕರಾವಳಿ ತೀರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಡೆಸುವವರಿಗೆ ಜೂನ್ 1ರಿಂದ ಜುಲೈ 31ರವರೆಗೆ ಎರಡು ತಿಂಗಳ ನಿಷೇಧ ಹೇರಲಾಗುತ್ತದೆ. ಈ ಸಂದರ್ಭದಲ್ಲಿ ಮೀನುಗಳು ಸಂತಾನೋತ್ಪತ್ತಿ ನಡೆಸುವುದರಿಂದ ಸರ್ಕಾರ ಎರಡು ತಿಂಗಳ ಕಾಲ ಯಾವುದೇ ರೀತಿಯ ಯಾಂತ್ರೀಕೃತ ಮೀನುಗಾರಿಕೆ ನಡೆಸದಂತೆ ನಿಷೇಧ ಹೇರುತ್ತದೆ.
ಕರಾವಳಿಯಲ್ಲಿ ಹೊಸ ದಾಖಲೆ ಬರೆಯುತ್ತಿರುವ ಮುಂಗಾರು ಮಳೆ
ಈ ಯಾಂತ್ರಿಕೃತ ಮೀನುಗಾರಿಕೆ ನಿಷೇಧದ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಾಡದೋಣಿ ಮೀನುಗಾರರು ದೋಣಿಗಳ ಮೂಲಕ ತಾಜಾ ಮೀನುಗಳ ಬೇಟೆಗಾಗಿ ಕಡಲಿಗಿಳಿಯುತ್ತಾರೆ. ಕಡಲಿಗಿಳಿದ ಕೆಲವೇ ಗಂಟೆಗಳಲ್ಲಿ ಮೀನುಗಳನ್ನು ಮಾರುಕಟ್ಟೆಗಳಿಗೆ ತರುವುದರಿಂದ ಹೆಚ್ಚಿನ ಬೇಡಿಕೆಯಲ್ಲಿ ಮೀನು ಮಾರಾಟಗೊಳ್ಳುತ್ತದೆ.
ಇದೇ ನಾಡದೋಣಿ ಮೀನುಗಾರರ ಮಳೆಗಾಲದ ಬದುಕಿಗೆ ಆಧಾರವಾಗುತ್ತದೆ. ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗುತ್ತದೆ.
ಆದರೆ ಈ ಬಾರಿ ಮಾತ್ರ ನಾಡದೋಣಿ ಮೀನುಗಾರರ ಜೀವನ ದುಸ್ತರವಾಗಿದೆ, ಕರಾವಳಿಯಲ್ಲಿ ಮಾನ್ಸೂನ್ ಅಬ್ಬರ ಮುಂದುವರಿದಿದ್ದು, ಕಡಲಲ್ಲಿ ಎದ್ದ ತೂಫಾನ್ ಇನ್ನೂ ಥಂಡಾ ಆಗಿಲ್ಲ. ಮೀನುಗಾರಿಕೆಗೆ ತೆರಳುವುದೇ ನಾಡದೋಣಿ ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ. ಹೋದರೂ ಬರಿಗೈಯಲ್ಲಿ ವಾಪಾಸ್ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರ ಸಾಲದಂತೆ ಮೀನುಗಾರರ ಸಾಲವನ್ನೂ ಮನ್ನಾ ಮಾಡಿ: ಸಿಎಂಗೆ ಮನವಿ
ಈ ನಡುವೆ ಕರಾವಳಿಯಲ್ಲಿ ಕಳೆದ ಒಂದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಾಡದೋಣಿ ಮೀನುಗಾರರು ಮೀನಿಗೆ ಬಲೆ ಹಾಕುವ ಗೋಜಿಗೆ ಹೋಗುತ್ತಿಲ್ಲ. ಮುಖ್ಯವಾಗಿ ಮಾನ್ಸೂನ್ ಅಬ್ಬರ ಒಂದೇ ರೀತಿಯಲ್ಲಿ ಮುಂದುವರಿದಿದೆ.
ಅದರಲ್ಲೂ ಮುಖ್ಯವಾಗಿ ಕೆಲವೊಂದು ನಾಡದೋಣಿಗಳು ಮೀನಿನ ಹುಡುಕಾಟ ಮಾಡಿಕೊಂಡು ಬಂದರೂ ಕೂಡ ಅವರಿಗೆ ಸಾಕಷ್ಟು ಮೀನು ಸಿಕ್ಕಿಲ್ಲ. ತೂಫಾನ್ ಸರಿಯಾಗಿ ನಿಲ್ಲದ ಹೊರತು ನಾಡದೋಣಿ ಮೀನುಗಾರಿಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನಾಡದೋಣಿ ಮೀನುಗಾರರು.
ಜುಲೈ ಮೊದಲ ವಾರದಲ್ಲಿ ರಾಣಿ ಬಲೆಯವರು ಮೀನು ಹಿಡಿಯುವ ಕಾರ್ಯಕ್ಕೆ ಮುಂದಾಗಲಿದ್ದಾರೆ. ಜುಲೈಯಲ್ಲಿ ಸರಿಯಾಗಿ ನಾಡದೋಣಿ ಮೀನುಗಾರು ಮೀನುಗಾರಿಕೆ ನಡೆಸಲಿದ್ದರೆ ಆಗಸ್ಟ್ 1 ರಿಂದ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗುತ್ತದೆ.
ಈ ಹಿನ್ನಲೆಯಲ್ಲಿ ಜುಲೈ ತಿಂಗಳಲ್ಲಿ ನಾಡದೋಣಿ ಮೀನುಗಾರರು ಕಡಲಿಗೆ ಇಳಿಯದೇ ಹೋದರೆ ಬಹಳಷ್ಟು ನಷ್ಟ ಅನುಭವಿಸಲಿದ್ದಾರೆ.
ಈ ನಡುವೆ ಕರಾವಳಿಯಲ್ಲಿ ಕೆಮಿಕಲ್ ಮಿಶ್ರಿತ ಮೀನಿನ ವದಂತಿ ಹಿನ್ನಲೆಯಲ್ಲಿ ಗ್ರಾಹಕರು ಕೂಡ ಮೀನು ಖರೀದಿಗೆ ಹಿಂದೇಟು ಹಾಕುತ್ತಿರುವುದು ಮೀನುಗಾರರು ಮತ್ತಷ್ಟು ನಷ್ಟ ಅನುಭವಿಸಲು ಕಾರಣವಾಗಿದೆ.