ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಆ.18ರಂದು ಸಮುದ್ರ ಪೂಜೆ
ಮಂಗಳೂರು, ಆಗಸ್ಟ್ 14 : ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಏಳುಪಟ್ಣ ಮೊಗವೀರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸಮುದ್ರ ಪೂಜೆ ಆಗಸ್ಟ್ 18ರಂದು ನಡೆಯಲಿದೆ. ಕದ್ರಿ ಶ್ರೀ ಕ್ಷೇತ್ರ ಸುವರ್ಣ ಕದಳೀ ಮಠದ ಮಠಾಧೀಶರಾದ ಶ್ರೀ ರಾಜಾ ಯೋಗಿ ನಿರ್ಮಲನಾಥಜೀ ಮಹಾರಾಜ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೀನುಗಾರರು ಸಮುದ್ರವನ್ನು ನಂಬಿ ಬದುಕುವವರು. ಮತ್ಸ್ಯ ಸಂಪಾದನೆಯೇ ಇವರ ಜೀವಾಳ. ಸಮುದ್ರ ಪೂಜೆ ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಸಮುದ್ರ ಪೂಜೆ ದಿನದಂದು ಕಡಲ ಕಿನಾರೆಯಲ್ಲಿ ಭಜನೆ, ಸಂಕೀರ್ತನೆ ಮಾಡಿ ಗಂಗಾ ಮಾತೆಯ ಮಡಿಲಿಗೆ ಹಾಲು, ಸೀಯಾಳ, ಫಲ ಪುಷ್ಪಗಳನ್ನು ಅರ್ಪಿಸಿ ಸಮುದ್ರ ಪೂಜೆ ನೆರವೇರಿಸುತ್ತಾರೆ.[ಕರಾವಳಿಯ ಬೀಚ್ಗಳ ಅಭಿವೃದ್ಧಿಗೆ 92 ಕೋಟಿ ಯೋಜನೆ]
ಅಧಿಕ ಮತ್ಸ್ಯ ಸಂಪತ್ತನ್ನು ಕರುಣಿಸು ಎಂದು ಪ್ರಾರ್ಥಿಸುವುದರ ಜತೆಗೆ ಅಳಿವೆ ಬಾಗಿಲು ಮೂಲಕ ಮೀನುಗಾರಿಕೆ ದೋಣಿಗಳು ಹೋಗಿ ಬರುವಾಗ ಯಾವುದೇ ರೀತಿಯ ಅವಘಡ ಸಂಭವಿಸದಿರಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಹಿಂದಿನಿಂದಲೂ ಈ ಸಂಪ್ರದಾಯ ನಡೆದಯಕೊಂಡು ಬಂದಿದೆ.[ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು]
ಈ ಸಮುದ್ರ ಪೂಜೆಗೆ ಅತಿಥಿಗಳಾಗಿ ಯಾಂತ್ರೀಕೃತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಿ. ಕಾಶೀನಾಥ ಕರ್ಕೇರಾ, ಮತ್ಸ್ಯ ಉದ್ಯಮಿಗಳಾದ ಭರತ್ ಭೂಷಣ್ ಬೋಳೂರು, ಮೋಹನ್ ಪಿ. ಕರ್ಕೇರಾ ಬೆಂಗರೆ ಪಾಲ್ಗೊಳ್ಳಲಿದ್ದಾರೆ.
ಆ. 18 ರಂದು ಬೆಳಗ್ಗೆ 11 ಗಂಟೆಗೆ ಸಮುದ್ರ ಪೂಜೆಯ ಶೋಭಾಯಾತ್ರೆಯು ಬೊಕ್ಕಪಟ್ಣ ಜಂಕ್ಷನ್ ನಿಂದ ಹೊರಟು ಬೊಕ್ಕಪಟ್ಣ ಶ್ರೀ ಬ್ರಹ್ಮ ಬಬ್ಬರ್ಯ ಬಂಟ ದೈವಸ್ಥಾನ, ಬೋಳೂರು ಅಶ್ವಥ ಕಟ್ಟೆ ನಾಗ ಬ್ರಹ್ಮ ಸ್ಥಾನ , ಬೋಳೂರು ಗ್ರಾಮ ಚಾವಡಿಯಿಂದಾಗಿ ಗುರುಪುರ ಹೊಳೆ ದಾಟಿ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸೇರುತ್ತದೆ.