ಮೀನುಗಳಿಗೆ ಯಾವುದೇ ರಾಸಾಯನಿಕ ಸಿಂಪಡಿಸಿಲ್ಲ: ಸ್ಪಷ್ಟನೆ
ಮಂಗಳೂರು, ಜೂನ್ 27: ಮೀನುಗಳಿಗೆ ರಾಸಾಯನಿಕವನ್ನು ಸಿಂಪಡಿಸಿಲ್ಲ, ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ, ಈ ಬಗ್ಗೆ ಮತ್ಸ್ಯ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗುವುದು ಬೇಡ ಎಂದು ಮಂಗಳೂರಿನ ಹಸಿಮೀನು ಮಧ್ಯವರ್ತಿಗಳ ಸಂಘಟನೆ ಗ್ರಾಹಕರಿಗೆ ಕರೆ ನೀಡಿದೆ.
ಮೀನಿಗೆ ರಾಸಾಯನಿಕ ಬಳಕೆ ಮಾಡಿ ಮಾರಾಟ ಮಾಡುತ್ತಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿರುವುದರಿಂದ ಮೀನು ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಕೇರಳದಲ್ಲಿ ವಿಷ ಲೇಪಿತ 9,600 ಕೆಜಿ ಮೀನು ವಶ
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೀನಿಗೆ ರಾಸಾಯನಿಕ ಸಿಂಪಡಣೆ ಮಾಡಿ ಮಾರಾಟ ಮಾಡುತ್ತಾರೆ ಎನ್ನುವ ಆಕ್ಷೇಪಣೆಯನ್ನು ಮಾಡುವ ಓರ್ವ ಗ್ರಾಹಕ ಮೀನು ಮಾರಾಟಗಾರರ ಬಳಿ ವಾಗ್ವಾದ ಮಾಡುವುದನ್ನು ಒಳಗೊಂಡ ವೀಡಿಯೊ ಒಂದನ್ನು ವಾಟ್ಸಪ್ ಗುಂಪಿನಲ್ಲಿ ಹರಿಯಬಿಡಲಾಗಿದೆ.
ಈ ಸಂಭಾಷಣೆಯಲ್ಲಿ ಗ್ರಾಹಕರು ಮೀನು ಮಾರಾಟಗಾರರನ್ನು ಆಕ್ಷೇಪಿಸುತ್ತಿದ್ದಾರೆ. ಮೀನು ಮಾರಾಟಗಾರರು ತಾನು ಆ ರೀತಿ ಯಾವೂದೇ ಕೆಮಿಕಲ್ ಬಳಸಿಲ್ಲ. ಹೊರಗಿನಿಂದ ಮೀನು ಬರುತ್ತದೆ. ನಾವು ಮಾರಾಟ ಮಾಡುತ್ತಿದ್ದೇವೆ ಎನ್ನುವ ಉತ್ತರವನ್ನು ನೀಡುತ್ತಾರೆ.
ಈ ವಿಡಿಯೋ ವೈರಲ್ ಆಗಿರುವುದರಿಂದ ಕಳೆದ ಎರಡು ದಿನಗಳಿಂದ ಮಂಗಳೂರಿನ ಸ್ಥಳೀಯ ಬಿಡಿ ಮೀನು ಮಾರಾಟಗಾರರ ಬಳಿ ನಿತ್ಯ ಮೀನು ಖರೀದಿಸುವ ಗ್ರಾಹಕರು ಮೀನಿಗೆ ಕೆಮಿಕಲ್ ಹಾಕಿದೆಯೇ ಎಂದು ಪ್ರಶ್ನಿಸುತ್ತಾರೆ.
ಇನ್ನು ಕೆಲವರು ಕೆಲವು ದಿನ ಮೀನು ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವುದು ಮೀನು ಮಾರಾಟದಲ್ಲಿ ಇಳಿಕೆ ಕಂಡಿದೆ.ಮಂಗಳೂರು ನಗರದ ಬಂದರಿನ ಧಕ್ಕೆಯು ಕರಾವಳಿಯಲ್ಲಿ ಪ್ರಮುಖ ಸಮುದ್ರೋತ್ಪನ್ನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಈ ಬಂದರಿನಿಂದ ವಿತರಿಸಲ್ಪಡುವ ಯಾವುದೇ ಮತ್ಸ್ಯೋತ್ಪನ್ನಗಳಲ್ಲಿ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ.
ಮತ್ಸ್ಯ ಶೇಖರಣೆಗೆ ಸಾಂಪ್ರಾದಾಯಿಕ ಪದ್ದತಿಯಾದ ಶೀತಲೀಕರಣ ವ್ಯವಸ್ಥೆಯನ್ನೇ ಉಪಯೋಗಿಸಲಾಗುತ್ತದೆಯೇ ಹೊರತು, ಯಾವುದೇ ಕಾರಣಕ್ಕೂ ಆರೋಗ್ಯ ಮಾರಕ ರಸಾಯನಿಕಗಳನ್ನು ಉಪಯೋಗಿಸಲಾಗುವುದಿಲ್ಲ.
ಆದುದರಿಂದ ಕರಾವಳಿಯಿಂದ ವಿತರಿಸಲಾಗುತ್ತಿರುವ ಮತ್ತು ಮಾರಾಟ ಮಾಡಲಾಗುತ್ತಿರುವ ಮತ್ಸ್ಯಗಳ ಗುಣಮಟ್ಟದ ಬಗ್ಗೆ ಗ್ರಾಹಕರು ಯಾವುದೇ ರೀತಿಯ ಗೊಂದಲಕ್ಕೊಳಗಾಗಬಾರದು ಮತ್ತು ಮತ್ಸ್ಯವು ಉತ್ತಮ ಪೌಷ್ಟಿಕ ಆಹಾರವಾಗಿ ಲಭ್ಯವಿರುವುದರಿಂದ ಯಥೇಚ್ಚವಾಗಿ ಗ್ರಾಹಕರು ಯಾವುದೇ ಭಯವಿಲ್ಲದೆ ಬಳಕೆ ಮಾಡಬಹುದು ಎಂದು ಮಂಗಳೂರು ಬಂದರಿನ ಮೀನು ಮಾರಾಟ ಮತ್ತು ಕಮಿಷನ್ ಎಂಜೆಟ್ರ ಸಂಘದ ಅಧ್ಯಕ್ಷರಾದ ಶ್ರೀ ಭರತ್ ಭೂಷಣ್ ಅವರು ತಿಳಿಸಿದ್ದಾರೆ.