ಧರ್ಮಸ್ಥಳದಲ್ಲಿ ಭದ್ರತಾ ಸಿಬ್ಬಂದಿ- ಭಕ್ತರ ಮಧ್ಯೆ ಮಾರಾಮಾರಿ
ಮಂಗಳೂರು, ಜೂನ್ 30 : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವಾಲಯ ಭದ್ರತಾ ಸಿಬ್ಬಂದಿ ಹಾಗೂ ಭಕ್ತರಿಗೆ ಶನಿವಾರ ಮಾರಾಮಾರಿ ನಡೆದಿದೆ. ವಾರಾಂತ್ಯ ದಿನವಾದ ಶನಿವಾರ ಶ್ರೀ ಕ್ಷೇತ್ರದಲ್ಲಿ ನೂಕುನುಗ್ಗಲು ಉಂಟಾಗಿ, ಭಕ್ತರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಹೊಡೆದಾಟವಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶ್ರೀ ಕ್ಷೇತ್ರದಲ್ಲಿ ಭಕ್ತರ ದಟ್ಟಣೆ ಹೆಚ್ಚಿರುವಾಗ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ಹೋಗಬೇಕಾಗಿರುವುದು ನಿಯಮ. ದೇವಸ್ಥಾನದ ಬಲ ಬದಿಯಿಂದ ಆರಂಭಿಸಿ ಒಂದು ಸುತ್ತು ಈ ಸಾಲು ಇರುತ್ತದೆ. ಇದೇ ಸರತಿ ಸಾಲಿನ ಮಧ್ಯೆ ಮಾತಿಗೆ ಮಾತು ಬೆಳೆದು, ಭದ್ರತಾ ಸಿಬ್ಬಂದಿ ಮತ್ತು ಭಕ್ತರು ಹೊಡೆದಾಡಿದ್ದಾರೆ.
ಮಹಿಳೆಯರು, ಯುವಕರು ಸೇರಿ ಹೊಡೆದಾಡಿದ್ದಲ್ಲದೆ, ದೇವಸ್ಥಾನ ಎಂಬುದನ್ನೂ ಲೆಕ್ಕಿಸದೆ ಬೈದಾಡಿಕೊಂಡಿದ್ದಾರೆ. ಕೊನೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮತ್ತು ಧರ್ಮಸ್ಥಳ ಠಾಣೆ ಪೊಲೀಸರು ಆಗಮಿಸಿ, ಗಲಾಟೆ ನಡೆಸಿದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಯಾತ್ರಾರ್ಥಿಗಳು ಗಮನಿಸಬೇಕಾದ ಧರ್ಮಸ್ಥಳ ದೇಗುಲದ ಮಹತ್ವದ ಪ್ರಕಟಣೆ
ಈ ಸನ್ನಿವೇಶವನ್ನು ಅಲ್ಲೇ ಇದ್ದ ಇತರ ಭಕ್ತರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ. ಭದ್ರತಾ ಸಿಬ್ಬಂದಿ ದರ್ಪದಿಂದಾಗಿ ಈ ಘಟನೆ ಸಂಭವಿಸಿದೆ ಅನ್ನುವ ರೀತಿ ಈ ದೃಶ್ಯಾವಳಿಯನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ವ್ಯವಸ್ಥೆಯ ಲೋಪ, ಯುವಕರ ವರ್ತನೆಗೆ ಟೀಕೆ ವ್ಯಕ್ತವಾಗಿದೆ.