ವೈರಲ್ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ: ಜನಾರ್ದನ ಪೂಜಾರಿ ಸ್ಪಷ್ಟನೆ
ಮಂಗಳೂರು, ಏಪ್ರಿಲ್ 23: ಭ್ರಷ್ಟಾಚಾರ ರಹಿತ ರಾಜಕಾರಣಿಯೆಂದೇ ಪ್ರಸಿದ್ಧಿ ಪಡೆದಿರುವ ಕಾಂಗ್ರೆಸಿನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿಯವರ ಧ್ವನಿ ಅನುಕರಣೆಯ ಆಡಿಯೋವೊಂದು ವೈರಲ್ ಆಗಿದೆ.
ಕಾಂಗ್ರೆಸ್ ನಾಯಕರು ಪೂಜಾರಿಯವರ ಆಶೀರ್ವಾದ ಪಡೆಯಲು ಅವರ ನಿವಾಸಕ್ಕೆ ತೆರಳಿದ ಸಂದರ್ಭದಲ್ಲಿ ಬಹುತೇಕರಿಗೆ ಜನಾರ್ದನ ಪೂಜಾರಿಯವರು ಬೈದು ಜಾಡಿಸಿ ಅವಮಾನಿಸಿದ್ದಾರೆಂಬ ಆಡಿಯೋವನ್ನು ಕಿಡಿಗೇಡಿಗಳು ನಿರ್ಮಿಸಿ ಹರಿಯಬಿಟ್ಟಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಈ ಬಗ್ಗೆ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ವೈಷಮ್ಯ ಮರೆತು ಪೂಜಾರಿ ಆಶೀರ್ವಾದ ಪಡೆದ ರಮಾನಾಥ ರೈ
"ಈ ಆಡಿಯೋ ನಿರ್ಮಾಣ ದುಷ್ಕರ್ಮಿಗಳ ಕೃತ್ಯವಾಗಿದೆ. ಇದರಲ್ಲಿರುವುದು ನನ್ನ ಸ್ವರವಲ್ಲ," ಎಂದು ಸ್ಪಷ್ಟನೆ ನೀಡಿರುವ ಪೂಜಾರಿ, "ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಪ್ರದರ್ಶನದಿಂದ ಒಡೆದ ಮನೆಯಾಗಿರುವ ಬೇರೆ ಪಕ್ಷಗಳಿಗೆ ಹಾನಿಯಾಗಬಹುದೆಂಬ ಭೀತಿಯಲ್ಲಿ ಈ ಆಡಿಯೋವನ್ನು ಹರಿಯಬಿಟ್ಟು ಪಕ್ಷದಲ್ಲಿ ಒಡಕು ಸೃಷ್ಠಿಸುವ ಕೆಲಸ ನಡೆಸಲಾಗಿದೆ. ಇದು ದೇವರು ಮೆಚ್ಚುವ ಕೆಲಸವಲ್ಲ. ಇದಕ್ಕೆ ಮತದಾರನೇ ಉತ್ತರವನ್ನು ನೀಡಲಿದ್ದಾನೆ," ಎಂದು ಪೂಜಾರಿಯವರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪೂಜಾರಿಯವರನ್ನು ಮೂಲೆ ಗುಂಪು ಮಾಡಲಾಗಿತ್ತು. ಜಿಲ್ಲೆಯ ನಾಯಕರು ಪೂಜಾರಿಯವರ ವಿರೋಧವನ್ನು ಕಟ್ಟಿಕೊಂಡಿದ್ದರೂ, ಇದೀಗ ಸೋಲುವ ಭೀತಿಯಲ್ಲಿ ಪೂಜಾರಿಯವರ ಆಶೀರ್ವಾದವನ್ನು ಪಡೆಯಲು ಅವರ ನಿವಾಸಕ್ಕೆ ನಾಯಕರು ಹೋಗಿದ್ದಾರೆ. ಇದೊಂದು ನಾಟಕ ಎಂಬುದಾಗಿ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಆದರೆ ವಿಶಾಲ ಮನಸ್ಸಿನ ಪೂಜಾರಿ ನಡೆದು ಹೋದ ಘಟನೆಗಳನ್ನು ಮರೆತು ಈ ಬಗ್ಗೆ ಯಾವುದೇ ವಿಚಾರವನ್ನೆತ್ತದೆ ಮನೆ ಬಾಗಿಲಿಗೆ ಬಂದ ಪಕ್ಷದ ನಾಯಕರಲ್ಲಿ, 'ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಹಾಗೂ ಜಿಲ್ಲೆಯ ಎಲ್ಲಾ ಅಭ್ಯರ್ಥಿಗಳು ವಿಜಯಿಗಳಾಗುತ್ತಾರೆ. ಜನಸೇವೆ ನಿಮ್ಮ ಗೆಲುವಿಗೆ ಮೋಸ ಮಾಡದು. ಅಧಿಕಾರ ಇದ್ದರೂ ಇಲ್ಲದಿದ್ದರೂ ನಿಮ್ಮ ಜನಸೇವೆ ನಡೆಯಲಿ ಎಂದು ಹಾರೈಸಿದ್ದರು.
ಹೀಗಿದ್ದೂ, ಪೂಜಾರಿಯವರ ಸ್ವರ ಅನುಕರಣೆ ಮತ್ತು ಶೈಲಿಯಲ್ಲಿಯೇ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಮೊದಲಾದವರು ಮನೆಗೆ ಬಂದಾಗ ಪೂಜಾರಿಯವರು ಹಿಗ್ಗಾ ಮುಗ್ಗಾ ಬೈದು ತರಾಟೆಗೆ ತೆಗೆದುಕೊಂಡಿದ್ದರೆಂಬ ಆಡಿಯೋ ಒಂದನ್ನು ತಯಾರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿರುವುದು ಪೂಜಾರಿಯವರಿಗೆ ಆಘಾತ ನೀಡಿತ್ತು. ಈ ಸಂಬಂಧ ಅವರೀಗ ಸ್ಪಷ್ಟನೆ ನೀಡಿದ್ದಾರೆ.