ಬರಗಾಲದಲ್ಲಿ ವಿದ್ಯುತ್ ದರ ಏರಿಕೆ ಎಷ್ಟು ಸರಿ?: ಶೆಟ್ಟರ್
ಮಂಗಳೂರು, ಏಪ್ರಿಲ್ 13 : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರವನ್ನು ಪ್ರತಿ ಯೂನಿಟಿಗೆ 48 ಪೈಸೆ ಏರಿಕೆ ಮಾಡಿರುವುದನ್ನು ರಾಜ್ಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತೀವ್ರವಾಗಿ ಖಂಡಿಸಿದ್ದಾರೆ.
ಉಜಿರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, 'ಈಗಾಗಲೇ ಮೂರು ಬಾರಿ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಅಲ್ಲದೆ ರಾಜ್ಯದ ಜನತೆ ಬರದಿಂದ ತತ್ತರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೆ ಏರಿಕೆ ಮಾಡುವ ಅಗತ್ಯವಾದರೂ ಏನಿತ್ತು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರವು ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಹಾಗೂ ವಿದ್ಯುತ್ ಸಾಗಾಟ ವಿತರಣೆ ಸಂದರ್ಭದಲ್ಲಿ ಉಂಟಾಗುತ್ತಿರುವ ಸೋರಿಕೆಯನ್ನು ಮೊದಲು ತಡೆಗಟ್ಟಬೇಕು. ಹಾಗೆ ಮಾಡಿದರೆ, ವಿದ್ಯುತ್ ದರವನ್ನು ಏರಿಕೆ ಮಾಡುವ ಪ್ರಮೇಯವೇ ಉಂಟಾಗುತ್ತಿರಲಿಲ್ಲ ಎಂದರು.
ಸರಕಾರ ಸೋಲಾರ್ ವಿದ್ಯುಚ್ಛಕ್ತಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು. ಈ ಕುರಿತ ಜಾಗೃತಿ ಹೆಚ್ಚಿಸಬೇಕು. ವಿದ್ಯುತ್ ದರ ಏರಿಕೆಗೆ ಸಹಕಾರ ನೀಡುವ ಮೂಲಕ ಸಿದ್ಧರಾಮಯ್ಯನವರು ರಾಜ್ಯದ ಬಡವರ್ಗದವರ ಮತ್ತು ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.