ಆಳ್ವಾಸ್ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಮಂಗಳೂರು, ಅಕ್ಟೋಬರ್ 10: ಪ್ರಸ್ತುತ ಜಂಜಾಟದ ಜೀವನದಲ್ಲಿ ಆಪ್ತಸಲಹೆ ಪ್ರತಿಯೊಬ್ಬರಿಗೂ ಅಗತ್ಯವಿದೆ. ಆಪ್ತ ಸಲಹಾ ಕೇಂದ್ರಗಳು ಜನರ ಸಮಸ್ಯೆಗಳನ್ನು ಆಲಿಸಿ, ಪೂರಕವಾದ ಸಲಹೆಯನ್ನು ನೀಡುವ ಕೆಲಸ ಮಾಡಬೇಕು. ವಿಶ್ವವನ್ನೇ ಕಾಡುತ್ತಿರುವ ಸೆಲ್ಫಿ, ಬ್ಲೂ ವೇಲ್ ಗೇಮ್ ಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವಾ ಕರೆ ನೀಡಿದರು.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಕುರಿಯನ್, "ಪರರು ನಮ್ಮ ಬಗ್ಗೆ ಏನೆಂದುಕೊಳ್ಳತ್ತಾರೆ ಎನ್ನುವುದರ ಬಗ್ಗೆ ನಾವು ಚಿಂತಿಸಬಾರದು. ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬೇಕು. ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳಬೇಕು," ಎಂದು ತಿಳಿಸಿದರು.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಮಾನಸಿಕ ಸ್ವಾಸ್ಥ್ಯದ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಮೈಮ್, ನೃತ್ಯ-ನಾಟಕ, ಚರ್ಚಾ ಸ್ಪರ್ಧೆ, ಪೋಸ್ಟರ್ ಮೇಕಿಂಗ್, ಸಾಮೂಹಿಕ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಡಿಬೇಟ್ನಲ್ಲಿ ಪ್ರಥಮ ಸ್ಥಾನವನ್ನು ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ಅಶ್ವಿನಿ ಜೈನ್ ಮತ್ತು ಆಶಿಫ ಮಡಿಕೇರಿ, ದ್ವಿತೀಯ ರಾಹುಲ್ ಮತ್ತು ಪ್ರಕಾಶ್, ಪೋಸ್ಟರ್ ಮೇಕಿಂಗ್ನಲ್ಲಿ ದರ್ಶನ್ ಹಾಗೂ ಮನೋಜ್ ಪ್ರಥಮ, ನಮೀತಾ ಹಾಗೂ ಟೆಸ್ವಿನ್ ದ್ವಿತೀಯ, ಜಾಗೃತಿ ಗೀತೆಯಲ್ಲಿ ಸುದರ್ಶನ ಹಾಗೂ ತಂಡ ಪ್ರಥಮ, ಸ್ತುತಿ ಹಾಗೂ ತಂಡ ದ್ವಿತೀಯ, ಡ್ಯಾನ್ಸ್ ಡ್ರಾಮದಲ್ಲಿ ಗ್ರೀಷ್ಮಾ ಹಾಗೂ ತಂಡ ಪ್ರಥಮ, ರೋಶನಿ ಹಾಗೂ ತಂಡದೊಂದಿಗೆ ಅಶ್ರುತಾ ಹಾಗೂ ತಂಡ ದ್ವಿತೀಯಾ ಬಹುಮಾನವನ್ನು ಪಡೆಯಿತು. ರಾಕೇಶ್ ಹಾಗೂ ಟೀಂ ಮೈಮ್ನಲ್ಲಿ ಬಹುಮಾನವನ್ನು ಪಡೆಯಿತು.