ಎತ್ತಿನಹೊಳೆ: ಚೆನ್ನೈ ಹಸಿರುಪೀಠಕ್ಕೆ ವರ್ಗಾವಣೆಗೆ ನಿರಾಕರಣೆ
ಮಂಗಳೂರು, ಆಗಸ್ಟ್ 10: ಎತ್ತಿನಹೊಳೆ ಯೋಜನೆ ವಿರುದ್ಧದ ವಿಚಾರಣೆ ಅರ್ಜಿಯನ್ನು ಮರಳಿ ಚೆನ್ನೈ ಹಸಿರುಪೀಠಕ್ಕೆ ವರ್ಗಾಯಿಸುವಂತೆ ಕರ್ನಾಟಕ ನೀರಾವರಿ ನಿಗಮ ಹಾಗೂ ಕರ್ನಾಟಕ ಸರಕಾರದ ಬೇಡಿಕೆಯನ್ನು ದಿಲ್ಲಿಯ ಪ್ರಧಾನ ಹಸಿರು ನ್ಯಾಯಪೀಠ ಮಂಗಳವಾರ ತಳ್ಳಿಹಾಕಿದೆ.
ಈ ವಿಚಾರದಲ್ಲಿ ಕೂಡಲೇ ಮಧ್ಯಂತರ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ.['ಎತ್ತಿನಹೊಳೆ ಯೋಜನೆ ವಿರೋಧಕ್ಕೆ ಅರ್ಥವಿಲ್ಲ']
ನ್ಯಾಯಪೀಠ ಅರ್ಜಿಯನ್ನು ಚೆನ್ನೈ ಪೀಠಕ್ಕೆ ವರ್ಗಾಯಿಸಲು ಸ್ಪಷ್ಟವಾಗಿ ನಿರಾಕರಿಸಿತ್ತು. ಅಲ್ಲದೆ ಎರಡು ಅರ್ಜಿಗಳನ್ನು ತಿರಸ್ಕರಿಸಿತು ಎಂದು ಈ ಬಗ್ಗೆ ಅರ್ಜಿದಾರ ಬೆಂಗಳೂರಿನ ಕೆ. ಎನ್. ಸೋಮಶೇಖರ್ ಮತ್ತು ಯತಿರಾಜು ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಪ್ರಿನ್ಸ್ ಐಸಾಕ್ ಹೇಳಿದ್ದಾರೆ. [ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ : ಸಿದ್ದರಾಮಯ್ಯ]
ಯೋಜನೆ ಹೆಸರಿನಲ್ಲಿ ಈಗಾಗಲೇ ಪಶ್ಚಿಮ ಘಟ್ಟ ಅರಣ್ಯಕ್ಕೆ ಭಾರೀ ಹಾನಿ ಸಂಬಂಧಿಸಿದ್ದು, ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.
ಕೆಎನ್ಎನ್ಎಲ್ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಆದರೂ ಅನಧಿಕೃತವಾಗಿ ಮರಗಳನ್ನು ಕಡಿಯಲಾಗುತ್ತಿದೆ ಎಂದು ಅರ್ಜಿದಾರರ ಪರವಾಗಿ ನ್ಯಾಯವಾದಿ ಪ್ರಿನ್ಸ್ ಐಸಾಕ್ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಈ ಬಗ್ಗೆ ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠವು, ಕೂಡಲೇ ಮಧ್ಯಂತರ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಈ ಬಗ್ಗೆ ಅಂತಿಮ ವಿಚಾರಣೆ ಸೆ. 21ಕ್ಕೆ ನಡೆಸುವುದಾಗಿ ಹಸಿರುಪೀಠ ಸ್ಪಷ್ಟಪಡಿಸಿತು.