ಕುವೈಟ್ ನಲ್ಲಿರುವ ಕರಾವಳಿ ಇಂಜಿನಿಯರ್ ಗಳಿಗೆ ಉದ್ಯೋಗ ನಷ್ಟದ ಭೀತಿ
ಮಂಗಳೂರು, ಏಪ್ರಿಲ್ 11: ಕುವೈಟ್ ಸರಕಾರ ಇತ್ತೀಚೆಗೆ ಹೊಸದಾಗಿ ಜಾರಿಗೆ ತಂದಿರುವ ಕಾನೂನು ತಿದ್ದುಪಡಿ ಭಾರತೀಯರೂ ಸೇರಿದಂತೆ ವಿವಿಧ ರಾಷ್ಟ್ರಗಳ ಸುಮಾರು 50 ಸಾವಿರ ಇಂಜಿನಿಯರ್ಗಳಿಗೆ ಸಂಕಷ್ಟ ತರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಕೊಲ್ಲಿರಾಷ್ಟ್ರ ಕುವೈಟ್ ನಲ್ಲಿ ಉದ್ಯೋಗದಲ್ಲಿರುವ ಕರಾವಳಿಯ ನೂರಾರು ಇಂಜಿನಿಯರುಗಳು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅದರಲ್ಲೂ ಕರಾವಳಿ ಪ್ರದೇಶವಾದ ಮಂಗಳೂರು, ಉಡುಪಿ ಸೇರಿದಂತೆ ಕೇರಳದ ಕಾಸರಗೋಡಿನ ಅನೇಕ ಇಂಜಿನಿಯರುಗಳು ಕೆಲಸ ಕಳೆದುಕೊಂಡು ಕುಟುಂಬ ಸಮೇತ ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ.
ಕುವೈಟ್ ಸರಕಾರದ ನೂತನ ಕಾನೂನಿನಂತೆ ಇನ್ನು ಮುಂದೆ ಕುವೈಟ್ನಲ್ಲಿ ಇಂಜಿನಿಯರ್ಗಳಾಗಿ ದುಡಿಯುವ ವಿದೇಶಿಗರು ಆ ದೇಶದ ಕಾನೂನಿನಲ್ಲಿ ಸೂಚಿಸಲಾದ ಸಂಸ್ಥೆಗಳಲ್ಲೇ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ವಿಪರ್ಯಾಸವೆಂದರೆ ಭಾರತೀಯ ಮೂಲದ ಹೆಚ್ಚಿನ ಇಂಜಿನಿಯರ್ಗಳು ಕಲಿತ ಇಂಜಿನಿಯರಿಂಗ್ ಕಾಲೇಜುಗಳು ಎನ್ಬಿಎಯಲ್ಲಿ ನೋಂದಣಿಯಾಗಿರುವುದಿಲ್ಲ. ಇದರಿಂದ ಕುವೈಟ್ನಲ್ಲಿ ದುಡಿಯುತ್ತಿರುವ ಸಾವಿರಾರು ಭಾರತೀಯರ ಭವಿಷ್ಯ ಡೋಲಾಯಮಾನವಾಗಿದೆ.
ಕುವೈಟ್ ಸರಕಾರದ ಈ ನೀತಿಯಿಂದಾಗಿ ಸರಿ ಸುಮಾರು 50 ಸಾವಿರ ಇಂಜಿನಿಯರ್ಗಳ ಮೇಲೆ ಪರಿಣಾಮ ಬೀರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಕುವೈಟ್ ಸೊಸೈಟಿ ಆಫ್ ಇಂಜಿನಿಯರ್ಸ್ (ಕೆಎಸ್ಒಇ) ಯಿಂದ ರೆಸಿಡೆನ್ಸಿ ಮತ್ತು ಕೆಲಸದ ಪರವಾನಿಗೆ ಪ್ರಮಾಣ ಪತ್ರ (ಎನ್ಒಸಿ) ಕಡ್ಡಾಯಗೊಳಿಸಿರುವುದು ಇದಕ್ಕೆ ಕಾರಣ ಎಂದು ಹೇಳಾಗಿದೆ . ಈ ಕಾರಣದಿಂದ ಸಾವಿರಾರು ಭಾರತೀಯ ಇಂಜಿನಿಯರುಗಳು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಹಿಂದಿರುಗುವ ಆತಂಕ ವ್ಯಕ್ತಪಡಿಸಿದ್ದಾರೆ .
ಮಂಗಳೂರು, ಉಡುಪಿ ಸೇರಿದಂತೆ ಕಾಸರಗೋಡಿನ ನೂರಾರು ಇಂಜಿನೀಯರ್ ಗಳು ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದು ಕುಟುಂಬದೊಂದಿಗೆ ಅಲ್ಲೇ ನೆಲೆಸಿದ್ದಾರೆ. ಇವರೀಗ ಕುಟುಂಬ ಸಮೇತರಾಗಿ ಕರಾವಳಿಗೆ ಮರಳುವ ಅನಿವಾರ್ಯತೆ ನಿರ್ಮಾಣವಾಗಿದೆ. ಇದು ಕರಾವಳಿಯ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕುವೈಟ್ ನ ಈ ನೂತನ ಕಾನೂನು ಭಾರತದಲ್ಲೂ ಅರ್ಥಿಕ ಮತ್ತು ಸಾಮಾಜಿಕ ಸಮಸ್ಯೆಯನ್ನು ಉಂಟು ಮಾಡಲಿದ್ದು ದೇಶಕ್ಕೆ ವಿದೇಶಿ ವಿನಿಮಯದಲ್ಲೂ ಲಕ್ಷಾಂತರ ಡಾಲರ್ ನಷ್ಟ ಸಂಭವಿಸಲಿದೆ ಎಂದು ಹೇಳಲಾಗಿದೆ. ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಭಾರತೀಯ ಇಂಜಿನಿಯರ್ ಗಳು ಹಾಗೂ ನಾನಾ ಸಂಘಟನೆಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿ ಕೂಡಲೇ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿದ್ದಾರೆ.