ಮಾಜಿ ಪಿಎಸ್ಐ ಮದನ್ ಜೊತೆಗಿದ್ದ ಯುವಕ ನಿಗೂಢವಾಗಿ ಕಣ್ಮರೆ!
ಮಂಗಳೂರು ನವೆಂಬರ್ 14:ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಜೊತೆಗಿದ್ದ ಯುವಕನೊಬ್ಬ ನಿಗೂಢವಾಗಿ ಕಣ್ಮರೆಯಾದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಯುವಕ ಕಣ್ಮರೆ ಯಾಗುವುದರ ಹಿಂದೆ ಮಾಜಿ ಪಿಎಸ್ಐ ಕೈವಾಡವಿರುವುದಾಗಿ ಯುವಕನ ಪೋಷಕರು ಆರೋಪಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾರೀ ಸುದ್ದಿಯಾಗಿದ್ದ ಪಿಎಸ್ಐ ಮದನ್ ವಿವಾದದ ಕೇಂದ್ರ ಬಿಂದು. ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಿ ಖಾಕಿ ಕಳಚಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮದನ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಲಾಬಿ ನಡೆಸಿದ್ದರು.
ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣಿಯಾಗಲು ಹೊರಟ ಮಂಗಳೂರಿನ ಮದನ್
ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಮದನ್ ಪಕ್ಷೇತರರಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಚುನಾವಣಾ ಸಮಯದಲ್ಲಿ ಮದನ್ ಜೊತೆ ಮತಯಾಚನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವನು ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್. ಇದೀಗ ಈತ ನಾಪತ್ತೆಯಾಗಿದ್ದಾನೆ.
ಚುನಾವಣೆ ಬಳಿಕವೂ ಮದನ್ ಅವರೊಂದಿಗಿದ್ದ ವಿನಾಯಕ್ ಈಗ ನಿಗೂಢವಾಗಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಮದನ್ ಜೊತೆಗಿದ್ದ ವಿನಾಯಕ
ಮಂಗಳೂರಿನ ರಿಕ್ಷಾ ಚಾಲಕ ಶಕ್ತಿನಗರ ನಿವಾಸಿ ಶಿವಕುಮಾರ್ ಎಂಬುವವರ ಏಕೈಕ ಪುತ್ರನಾಗಿರುವ ವಿನಾಯಕ್, ಕಳೆದ ಏಳು ತಿಂಗಳಿನಿಂದ ಮದನ್ ಜೊತೆಗಿದ್ದು ಅವರ ಎಲ್ಲಾ ಚಟುವಟಿಕೆಗಳಲ್ಲೂ ಜೊತೆಗಿದ್ದ ಎಂದು ಹೇಳಲಾಗಿದೆ.
ಉದ್ಯೋಗ ಕೊಡಿಸುವ ಭರವಸೆ
ಮನೆಗೂ ಹೋಗದೆ ಮದನ್ ಜೊತೆಗಿದ್ದ ವಿನಾಯಕ್, ಮನೆಯಿಂದ ದೂರವಾಗಿದ್ದನ್ನು ಕಂಡು ಪೋಷಕರು ಮಾಜಿ ಪಿಎಸ್ಐ ಜೊತೆ ತನ್ನ ಮಗನನ್ನು ವಾಪಾಸು ಕಳಿಸುವಂತೆ ಒತ್ತಾಯಿಸಿದ್ದರು. ಆದರೆ ಮದನ್, "ನಿಮ್ಮ ಮಗನಿಗೆ ಉತ್ತಮ ಉದ್ಯೋಗ ಕೊಡಿಸುತ್ತೇನೆ" ಎಂದು ಭರವಸೆ ನೀಡಿ ಕಳುಹಿಸಿದ್ದರು ಎಂದು ಹೇಳಲಾಗಿದೆ. ಇದನ್ನು ನಂಬಿದ ಪೋಷಕರು ವಿನಾಯಕ್ ನನ್ನು ಮದನ್ ಜೊತೆಗೆ ಬಿಟ್ಟಿದ್ದರು.
ಖಾಕಿ ಕಳಚಿಟ್ಟು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಮದನ್
ವಿನಾಯಕ್ ಈವರೆಗೆ ಪತ್ತೆಯಾಗಿಲ್ಲ
ಬಿಜೈಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ಮದನ್ ಜೊತೆಗೆ ವಿನಾಯಕ್ ವಾಸವಾಗಿದ್ದ. ಆದರೆ ಈಗ ವಿನಾಯಕ್ ಏಕಾಏಕಿ ಕಣ್ಮರೆಯಾಗಿದ್ದಾನೆ. ಇದರಿಂದ ವಿನಾಯಕ್ ನ ಪೋಷಕರು ಅತಂಕಿತರಾಗಿದ್ದಾರೆ. ಕಳೆದ ಅಕ್ಟೋಬರ್ ತಿಂಗಳು 8 ರಂದು ಬಿಜೈ ಅಪಾರ್ಟ್ ಮೆಂಟ್ ನಿಂದ ಹೊರಹೋಗಿದ್ದ ವಿನಾಯಕ್ ಈ ವರೆಗೆ ಪತ್ತೆಯಾಗಿಲ್ಲ.
ಒಂದು ವಾರದ ಬಳಿಕ ಗೊತ್ತಾದ ವಿಷಯ
ವಿನಾಯಕ್ ತನ್ನ ಮೊಬೈಲ್ ಫೋನ್ ಬಿಟ್ಟುಹೋಗಿದ್ದು, ವಿನಾಯಕ್ ನಾಪತ್ತೆಯಾದ ವಿಷಯ ಆತನ ಮನೆಯವರಿಗೆ ಒಂದು ವಾರದ ಬಳಿಕ ಗೊತ್ತಾಗಿದೆ. ಈ ಕುರಿತು ಅಕ್ಟೋಬರ್ 16 ರಂದು ಉರ್ವ ಠಾಣೆಯಲ್ಲಿ ವಿನಾಯಕ್ ಪೋಷಕರು ದೂರು ದಾಖಲಿಸಿದ್ದಾರೆ.
ಆದ್ರೆ ಇದುವರೆಗೂ ವಿನಾಯಕ್ ಸುಳಿವಾಗಲೀ, ಪೊಲೀಸ್ ತನಿಖೆಯಲ್ಲಿ ಪ್ರಗತಿಯಾಗಲಿ ಕಂಡಿಲ್ಲ. ಬದಲಾಗಿ ಮಾಜಿ ಪಿಎಸ್ಐ ಮದನ್ ತಮ್ಮನ್ನು ಬೆದರಿಸುತ್ತಿದ್ದಾನೆ ಅಂತ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಆಯಕ್ತರ ಮೊರೆ ಹೋಗಿದ್ದಾರೆ.