ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಸುತ್ತಾಡಿ ಭಯ ಹುಟ್ಟಿಸಿದ ಒಂಟಿ ಸಲಗ
ಮಂಗಳೂರು, ನವೆಂಬರ್. 06: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಕಾಡಂಚಿನಲ್ಲಿ ಒಂಟಿ ಸಲಗ ಸುತ್ತಾಡುತ್ತಿದ್ದು, ಪರಿಸರದ ಜನರಲ್ಲಿ ಆತಂಕ ಹುಟ್ಟಿಸಿದೆ. ಕೆಲದಿನಗಳ ಹಿಂದೆ ಹಗಲಲ್ಲಿ ಕಾಣಿಸಿಕೊಂಡಿದ್ದ ಈ ಕಾಡಾನೆ ಭಾನುವಾರ ನ.04 ರಾತ್ರಿ ಕಾಣಿಸಿಕೊಂಡು ಸ್ಥಳೀಯರನ್ನು ಭಯಭೀತರನ್ನಾಗಿಸಿತ್ತು.
ಚಾರ್ಮಾಡಿ ಡ್ಯಾಂ ಬಳಿ ಈ ಕಾಡಾನೆ ಪ್ರತ್ಯಕ್ಷವಾಗಿದ್ದು, ಎರಡು ದಿನಗಳ ಹಿಂದೆ ಇದೇ ಒಂಟಿ ಸಲಗ ಹಗಲಲ್ಲಿ ಕಾಣಿಸಿಕೊಂಡು ನಂತರ ಕಾಡು ಸೇರಿತ್ತು. ಆದರೆ ಈಗ ಮತ್ತೆ ಈ ಕಾಡನೆಯ ಕಾಟ ಆರಂಭವಾಗಿದೆ.
ಬಿಸಿಲೆ ಘಾಟಿಯ ಕಾಡಾನೆ ದಾಳಿಯಲ್ಲಿ ವಾಹನದಲ್ಲಿದ್ದವರು ಅಪಾಯದಿಂದ ಪಾರು, ಬಚಾವ್ ಮಾಡಿದ್ದು ಯಾರು?!
ನವೆಂಬರ್ 02 ರಂದು ಹಾಡಹಗಲೇ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಭೀತಿ ಹುಟ್ಟಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಎಂಬಲ್ಲಿ ನಡೆದಿತ್ತು. ಕಾಡಿನಿಂದ ಹೊರಬಂದ ಒಂಟಿ ಸಲಗ ಇಲ್ಲಿಯ ತೋಟಕ್ಕೆ ನುಗ್ಗಿತ್ತು. ಆದರೆ ಕಾಡಾನೆ ಬಂದಿರುವುದು ಜನರ ಗಮನಕ್ಕೆ ಬಂದಿರಲಿಲ್ಲ.
ತೋಟದ ಅಕ್ಕಪಕ್ಕದ ಮನೆಯ ನಾಯಿಗಳ ಬೊಗಳುವಿಕೆಯನ್ನು ಕೇಳಿ ಸ್ಥಳೀಯರು ತೋಟಕ್ಕೆ ಬಂದು ನೋಡಿದಾಗ ಒಂಟಿಸಲಗ ತೋಟದಲ್ಲಿ ಸುತ್ತಾಡುತ್ತಿರುವುದು ಕಂಡುಬಂದಿತ್ತು.
ಆಲತ್ತೂರಿನಲ್ಲಿ ಕಾಡಾನೆ ದಾಳಿ: ಓರ್ವ ಮಹಿಳೆ ಬಲಿ, ಮೂವರು ಪಾರು
ಈ ಹಿನ್ನೆಲೆಯಲ್ಲಿ ಇಂದಬೆಟ್ಟು ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕಾಡಾನೆ ಮಾತ್ರ ತೋಟ ಹಾಗೂ ಜನರಿಗೆ ಯಾವುದೇ ರೀತಿ ಹಾನಿ ಉಂಟು ಮಾಡದೆ ವಾಪಸ್ಸು ಕಾಡಿಗೆ ತೆರಳಿತ್ತು.
ಇತ್ತೀಚೆಗೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದವು . ಆನೆಗಳ ಹಿಂಡು ಸ್ಥಳೀಯರ ತೋಟಕ್ಕೆ ದಾಳಿ ನಡೆಸಿ ಅಪಾರ ಬೆಳೆ ಹಾನಿ ಮಾಡಿತ್ತು. 5 ಆನೆಗಳ ಹಿಂಡು ಸುಮಾರು 50ಕ್ಕೂ ಹೆಚ್ಚು ಅಡಕೆ ಮರಗಳನ್ನು ನೆಲಕ್ಕುರುಳಿಸಿದ್ದವು. ಅಲ್ಲದೇ ಸುಮಾರು 100 ಬಾಳೆ ಗಿಡ ಹಾಗೂ ಕೆಲವು ತೆಂಗಿನ ಗಿಡಗಳನ್ನು ನಾಶಪಡಿಸಿದ್ದವು.