ಮಕ್ಕಳ ಸಾಮರ್ಥ್ಯ ಅರಿತರೆ ಪಾಲಕರೇ ದಿಕ್ಸೂಚಿ: ಅರ್ಥಶಾಸ್ತ್ರಜ್ಞರ ಸಲಹೆ
ಮಂಗಳೂರು, ಸೆಪ್ಟೆಂಬರ್ 10: ಮಕ್ಕಳ ಸಾಮರ್ಥ್ಯ ಏನೆಂದು ಪಾಲಕರು ಅರಿತರೆ ಅವರೇ ದಿಕ್ಸೂಚಿಗಳಾಗುತ್ತಾರೆ ಎಂದು ಅರ್ಥಶಾಸ್ತ್ರಜ್ಞ ಡಾ. ಜಯವಂತ ನಾಯಕ್ ತಿಳಿಸಿದ್ದಾರೆ.
ಮಂಗಳೂರಿನ ಸಂಧ್ಯಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಕರ ಉದ್ದೇಶ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಒದಗಿಸುವುದು ಹಾಗೂ ಹೆತ್ತವರು ಮಕ್ಕಳಿಗೆ ನೈತಿಕ ಮಾರ್ಗದರ್ಶನ ನೀಡುವುದರ ಮುಖಾಂತರ ಒಗ್ಗೂಡಿಕೊಂಡು ಕಾರ್ಯ ನಿರ್ವಹಿಸಿದರೆ ವಿದ್ಯಾರ್ಥಿಗಳ ಏಳಿಗೆ ಸಾಧ್ಯ ಎಂದು ತಿಳಿಸಿದರು.
ಕಾಲ ಬದಲಾದಂತೆ ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವ ವಿಧಾನವೂ ಬದಲಾಗಬೇಕು. ಮಕ್ಕಳನ್ನು ಶಿಕ್ಷಿಸಿ ಸರಿದಾರಿಗೆ ತರುವುದು ಇಂದಿನ ಕಾಲಘಟ್ಟದಲ್ಲಿ ಕಷ್ಟಸಾಧ್ಯವಾದ ಮಾತು. ಆದುದರಿಂದ ಹೆತ್ತವರು ಮಕ್ಕಳ ಜೊತೆ ವರ್ತಿಸುವ ವಿಧಾನವೂ ಬದಲಾಗಬೇಕು ಎಂದು ತಿಳಿಸಿದರು.
ಮಕ್ಕಳನ್ನು ಕಾಲೇಜಿಗೆ ಸೇರಿಸಿದ ತಕ್ಷಣ ಪೋಷಕರ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಹೆತ್ತವರು ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದಲ್ಲಿ ಅವರು ಅಡ್ಡದಾರಿ ಹಿಡಿಯುವ ಸಾಧ್ಯತೆ ಇರುತ್ತದೆ ಅಥವಾ ಬೇರೆ ಯಾರಾದರೂ ಅವರನ್ನು ಸಮಾಜ ಘಾತುಕ ಚಟುವಟಿಕೆಗಳಿಗೆ ಅವರನ್ನು ದುರ್ಬಳಕೆ ಮಾಡುವ ಸಾಧ್ಯತೆಗಳು ಇರುತ್ತದೆ.
ಹಾಗಾಗಿ ಹೆತ್ತವರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ಇದ್ದು, ಅವರೊಂದಿಗೆ ಪ್ರೀತಿಯೊಂದಿಗೆ ಮಾತನಾಡುವ ಮುಖಾಂತರ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಕುರಿತಾಗಿ ಒತ್ತಡ ಹೇರಬಾರದು, ಪ್ರತಿಯೊಬ್ಬ ವಿದ್ಯಾರ್ಥಿ ತನ್ನದೇ ಆದ ಸಾಮಥ್ರ್ಯ ಹೊಂದಿರುತ್ತಾನೆ. ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯವನ್ನು ಅರಿತುಕೊಂಡು ಅವರು ಮುಂದೇನಾಗಬೇಕು ಎಂದು ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೆತ್ತವರಿಗೆ ಕಿವಿಮಾತು ಹೇಳಿದರು.