ಜೂನ್ 13, 14 ಚಾರ್ಮಾಡಿ ಘಾಟ್ ರಸ್ತೆ ಬಂದ್, ಪರ್ಯಾಯ ಮಾರ್ಗ ಸೂಚನೆ
ಮಂಗಳೂರು, ಜೂನ್ 13: ಚಾರ್ಮಾಡಿ ಘಾಟ್ ಭೂ ಕುಸಿತ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಬುಧವಾರ ಮತ್ತು ಗುರುವಾರ ವಾಹನ ಸಂಚಾರ ಬಂದ್ ಮಾಡಲಾಗಿದೆ. ಜೂನ್ 11 ರಂದು ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ 2ನೇ ಮತ್ತು 3ನೇ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾಗಿತ್ತು.
ಇದರ ಪರಿಣಾಮ ನೂರಾರು ವಾಹನಗಳು ಘಾಟ್ ನಲ್ಲಿ ಸಿಲುಕಿಕೊಂಡಿದ್ದವು. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಹಾಗೂ ಕಲ್ಲನ್ನು ತೆರವುಗೊಳಿಸುವ ಕಾಮಗಾರಿ ಆರಂಭವಾಗಿದ್ದು, ಬುಧವಾರವೂ ಮುಂದುವರಿದಿದೆ. ಜೂನ್ 13 ಮತ್ತು 14 ರಂದು ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಚಾರ್ಮಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತ
ರಸ್ತೆ ಮೇಲೆ ಬಿದ್ದಿರುವ ಮಣ್ಣು ಹಾಗೂ ಬಂಡೆಗಳ ತೆರವು ಕಾರ್ಯಾಚರಣೆ ಬುಧವಾರ ಮುಂಜಾನೆಯಿಂದಲೇ ಆರಂಭವಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನೇತೃತ್ವದಲ್ಲಿ 5 ಜೆಸಿಬಿಗಳು ಹಾಗೂ 10ಕ್ಕೂ ಹೆಚ್ಚು ಲಾರಿಗಳು ತೆರವು ಕಾರ್ಯಾಚರಣೆಯಲ್ಲಿ ತೊಡಗಿವೆ.
2 ದಿನ ಚಾರ್ಮಾಡಿ ಮಾರ್ಗ ಬಂದ್ ಮಾಡಿರುವ ಕಾರಣ ಮಂಗಳೂರಿನಿಂದ ಬೆಂಗಳೂರು ಸಂಪರ್ಕಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಮಂಗಳೂರಿನಿಂದ ನಾರಾವಿ - ಕಳಸ - ಮೂಡಿಗೆರೆ- ಬೇಲೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲು ಮಾರ್ಗ ಸೂಚಿಸಲಾಗಿದೆ. ಅಲ್ಲದೇ, ಮಂಗಳೂರು ಮೂಲಕ ಬಿ.ಸಿ.ರೋಡ್ - ಸುಳ್ಯ - ಮಡಿಕೇರಿ - ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲು ಮಾರ್ಗ ಸೂಚಿಸಲಾಗಿದೆ.
ಇನ್ನು ಮಂಗಳೂರಿನಿಂದ ಧರ್ಮಸ್ಥಳ ಮಾರ್ಗವಾಗಿ ಬಜಗೋಳಿ- ಮೂಡಿಗೆರೆ-ಬೇಲೂರು- ಹಾಸನ ಮಾರ್ಗವಾಗಿ ಬೆಂಗಳೂರು. ಹಾಗೆಯೇ ಮಂಗಳೂರು ಕಾರ್ಕಳ ಮಾಳ ಘಾಟ್ ಕುದುರೆ ಮುಖ, -ಕಳಸ- ಕೊಟ್ಟಿಗೆಹಾರ - ಹಾಸನ ಮಾರ್ಗವಾಗಿ ಬೆಂಗಳೂರು ತಲುಪಲು ಸೂಚಿಸಲಾಗಿದೆ.