ಮಂಗಳೂರಿನ ಡಾ. ಹರೀಶ್ ಜೋಷಿಯವರ ಸ್ವಚ್ಛತೆಯ ಮೌನ ಕ್ರಾಂತಿ
ಮಂಗಳೂರು, ಅಕ್ಟೋಬರ್ 11: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಎರಡು ವರ್ಷಗಳು ಕಳೆದಿವೆ. ಮೋದಿ ಅವರ ಕರೆಗೆ ಓಗೊಟ್ಟು ಕೆಲವರು ಪೊರಕೆ ಹಿಡಿದು ಪೋಟೋಗೆ ಪೋಸ್ ಕೊಟ್ರೆ, ಇನ್ನೂ ಕೆಲವರು ಸದ್ದಿಲ್ಲದೆ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ.
ಹೀಗೆ ಸ್ವಚ್ಛತೆಯ ಮೌನ ಕ್ರಾಂತಿ ಮಾಡುತ್ತಿರುವ ವ್ಯಕ್ತಿಯೊಬ್ಬರು ಮಂಗಳೂರಿನಲ್ಲಿದ್ದಾರೆ. ಅವರೇ ನಿವೃತ್ತ ಪ್ರಾಧ್ಯಾಪಕರಾದ ಡಾ. ಹರೀಶ್ ಜೋಷಿ.
ಹರೀಶ್ ಜೋಷಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತಾ ಮಂತ್ರಕ್ಕೆ ಸದ್ದಿಲ್ಲದೆ ಧ್ವನಿಗೂಡಿಸಿದ್ದಾರೆ. ಮಂಗಳೂರು ಮಹಾನಗರದಲ್ಲಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದ್ದು, ಇದರ ನಡುವೆ ಕಸದಿಂದ ರಸ ತೆಗೆಯುವ ಸೂತ್ರ ತೋರಿಸಿ ಕೊಟ್ಟಿದ್ದಾರೆ ಹರೀಶ್ ಜೋಷಿ.
ಕಸದಿಂದ ತಯಾರುಗುತ್ತೆ ಗೊಬ್ಬರ
ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾಗಿರುವ ಹರೀಶ್ ಜೋಷಿ ಕಸದಿಂದ ಎರಹುಳ ಗೊಬ್ಬರ ತಯಾರಿಸುವ ವಿಧಾನವನ್ನು ವಿದ್ಯಾಸಂಸ್ಥೆಗಳು ಸೇರಿದಂತೆ, ಅಧಿಕ ತ್ಯಾಜ್ಯ ಹೊರ ಹಾಕುವ ಸಂಸ್ಥೆಗಳಿಗೆ ಪರಿಚಯಿಸಿದ್ದಾರೆ.
ಈ ಮೂಲಕ ತ್ಯಾಜ್ಯದ ಸಮಸ್ಯೆಗಳಿಗೆ ತಾತ್ವಿಕ ಪರಿಹಾರ ನೀಡಿದ್ದಾರೆ. ಈವರೆಗೆ ಸುಮಾರು 2 ವಿಶ್ವವಿದ್ಯಾಲಯ ಸೇರಿದಂತೆ 20 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಮತ್ತು 80 ಕ್ಕೂ ಹೆಚ್ಚು ಮನೆಗಳಲ್ಲಿ ಹರೀಶ್ ಜೋಷಿ ಮಾರ್ಗದರ್ಶನದಲ್ಲಿ ಕಸದಿಂದ ಎರೆಹುಳ ಗೊಬ್ಬರ ತಯಾರಾಗುತ್ತಿದೆ.
ತ್ಯಾಜಮುಕ್ತ ಕ್ಯಾಂಪಸ್ ರಚನೆ
ಮಂಗಳೂರು ವಿಶ್ವವಿದ್ಯಾನಿಲಯ, ಎ.ಜೆ ವಿದ್ಯಾಸಂಸ್ಥೆ ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳು ತಮ್ಮ ಹಾಸ್ಟೆಲ್ ಮತ್ತು ಕಛೇರಿಗಳ ತಾಜ್ಯವನ್ನು ಬಳಸಿ ಎರೆಹುಳ ಗೊಬ್ಬರ ತಯಾರಿಸುತ್ತಿವೆ. ಈ ಮೂಲಕ ತಮ್ಮ ಕ್ಯಾಂಪಸ್ ಗಳನ್ನು ತಾಜ್ಯಮುಕ್ತ ಕ್ಯಾಂಪಸ್ ಗಳನ್ನಾಗಿ ಪರಿವರ್ತಿಸಿವೆ.
ಡಾ.ಜೋಷಿಯವರ ಮಾರ್ಗದರ್ಶನದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಮಾಡುತ್ತಿರುವ ವಿದ್ಯಾ ಸಂಸ್ಥೆಗಳು ವಿ ಮ್ಯಾನೇಜ್ ಅವರ್ ವೇಸ್ಟ್ ಅವರ್ಸೆಲ್ವ್ಸ್' ಘೋಷಣಾ ಫಲಕ ಅಳವಡಿಸಿದೆ. ತಮ್ಮ ವಿದ್ಯಾ ಸಂಸ್ಥೆಗಳಲ್ಲಿ ಉತ್ಪಾದಿಸಿದ ಎರೆಗೊಬ್ಬರ ಮಾರಿ ಈ ವಿದ್ಯಾ ಸಂಸ್ಥೆಗಳು ಆದಾಯವನ್ನೂ ಗಳಿಸುತ್ತಿವೆ.
ತ್ಯಾಜಕ್ಕೆ ಮುಕ್ತಿ
ಮಂಗಳೂರಿನ ಯೇನೆಪೋಯ ವಿವಿ 6 ಯೂನಿಟ್ ನಲ್ಲಿ ಹತ್ತು ಬಾರಿಯಂತೆ 14ಟನ್ 925 ಕೆಜಿ ಗೊಬ್ಬರವನ್ನು ಪ್ರತಿ ಕೆಜಿಗೆ 15ರೂ ನಂತೆ ಮಾರಾಟ ಮಾಡಿ, 2.50 ಲಕ್ಷ ರೂ.ಗಳಿಸಿದೆ. 13 ಸಾವಿರ ರೂ. ಮೌಲ್ಯದ ಹುಳುವನ್ನೂ ಸಂಸ್ಥೆ ಮಾರಾಟ ಮಾಡಿದೆ. ಕಾರ್ಕಳ ನಗರಸಭೆ ಎರೆಗೊಬ್ಬರ ಘಟಕದಲ್ಲಿ ಸುಮಾರು 20 ಟನ್ನಷ್ಟು ಗೊಬ್ಬರ ಮಾರಾಟವಾಗಿ ಸುಮಾರು 3.75 ಲಕ್ಷ ರೂ. ಆದಾಯ ಬಂದಿದೆ. ಇದರಿಂದ 60 ಟನ್ನಷ್ಟು ತ್ಯಾಜ್ಯಕ್ಕೆ ಮುಕ್ತಿ ಸಿಕ್ಕಿದಂತಾಗಿದೆ.
ಸಮಸ್ಯೆಗೆ ಮುಕ್ತಿ
ಒಟ್ಟಿನಲ್ಲಿ ತ್ಯಾಜ್ಯ ವಿಲೇವಾರಿ ನಗರ ಪ್ರದೇಶಗಳ ದೊಡ್ಡ ಸಮಸ್ಯೆಯಾಗಿರುವಾಗ ಮಂಗಳೂರಿನ ಡಾ ಹರೀಶ್ ಜೋಷಿ ತ್ಯಾಜ್ಯ ವಿಲೇವಾರಿಗೆ ಸರಳ ಸೂತ್ರ ತೋರಿಸಿಕೊಟ್ಟಿದ್ದಾರೆ. ಸದ್ದಿಲ್ಲದೆ ಸ್ವಚ್ಛತಾ ಕ್ರಾಂತಿ ಮಾಡುತ್ತಿರುವ ಹರೀಶ್ ಜೋಷಿಯವರ ಸಾಧನೆಗೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.