ಮಂಗಳೂರಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ CBSEಗೆ ಚಾಲನೆ
ಮಂಗಳೂರು, ಸೆಪ್ಟೆಂಬರ್ 25 : ನಗರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ 'ಸಿಬಿಎಸ್ ಇ' ಪಠ್ಯ ಕ್ರಮಕ್ಕೆ ಇಂದು (ಸೆ.25) ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮಗಳನ್ನು ಸೂಚಿಸಿದ ಸಿಬಿಎಸ್ ಇ
ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ 'ಸಿಬಿಎಸ್ ಇ' ಗೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, "ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯು ಮಂಗಳೂರಿಗೆ ಮಾತ್ರ ಸೀಮಿತವಲ್ಲ. ಇದು ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಸಮಾಜಕ್ಕೆ, ದೇಶಕ್ಕೆ ಅತ್ಯುನ್ನತರನ್ನು ಅರ್ಪಿಸಿದ ಕೀರ್ತಿಯೂ ಈ ಸಂಸ್ಥೆಗಿದೆ ಮತ್ತು ಹೃದಯವಂತಿಕೆ ಮತ್ತು ಬುದ್ಧಿವಂತಿಕೆಯ ಶಿಕ್ಷಣ ಸಿಗುವ ಕಾರಣ ಹೆತ್ತವರು ತಮ್ಮ ಮಕ್ಕಳನ್ನು ಈ ಸಂಸ್ಥೆಯಲ್ಲಿ ಓದಿಸಲು ಹಾತೊರೆಯುತ್ತಿದ್ದಾರೆ" ಎಂದು ಶ್ಲಾಘಿಸಿದರು.
ಮಕ್ಕಳು ಕೇವಲ ಹೆತ್ತವರ ಆಸ್ತಿಯಲ್ಲ. ಸಮಾಜದ ಸಂಪತ್ತೂ ಕೂಡ ಹೌದು. ಈ ಮಕ್ಕಳನ್ನು ಸುಶಿಕ್ಷಿತನ್ನಾಗಿ ಮಾಡುವ ಹೊಣೆ ಎಲ್ಲರದ್ದಾಗಿದೆ. ಎಲ್ಲಾ ದೇಶಗಳೂ ಎಲ್ಲಾ ಸ್ತರದಲ್ಲೂ ಜಗತ್ತಿನಲ್ಲೇ ಪ್ರಥಮ ಸ್ಥಾನ ಗಳಿಸಲು ಹಾತೊರೆಯುತ್ತಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಬಲಿಷ್ಠರಾದರೆ ದೇಶ ಬಲಿಷ್ಠವಾಗದು. ಇವರೊಂದಿಗೆ ವಿದ್ಯಾರ್ಥಿಗಳು ಕೂಡ ಬಲಿಷ್ಠರಾದರೆ ದೇಶ ಬಲಿಷ್ಠವಾದೀತು. ಇಂತಹ ಸುಶಿಕ್ಷಿತ ವಿದ್ಯಾರ್ಥಿಗಳನ್ನು ಮಿಲಾಗ್ರಿಸ್ ಸಂಸ್ಥೆ ಸಮಾಜಕ್ಕೆ ಅರ್ಪಿಸಲಿ ಎಂದು ಅವರು ಹಾರೈಸಿದರು.
ಸಂಸ್ಥೆಯ ಆಡಳಿತಾಧಿಕಾರಿ ವಂ.ಮೈಕಲ್ ಸಾಂತುಮಾಯರ್ ಮಾತನಾಡಿ, ಮಿಲಾಗ್ರಿಸ್ ಶಾಲೆಯು ಮಂಗಳೂರಿನ ಕೆಥೊಲಿಕ್ ಶಿಕ್ಷಣ ಮಂಡಳಿಯ ಒಂದು ಘಟಕವಾಗಿದ್ದು, ಮಿಲಾಗ್ರಿಸ್ ಚರ್ಚ್ನ ಸ್ಥಳೀಯ ಆಡಳಿತಕ್ಕೊಳಪಟ್ಟಿದೆ.
ಶಾಲೆಯು ಅತ್ಯಾಧುನಿಕ ಹಾಗೂ ಅಧ್ಯಯನಕ್ಕೆ ಪೂರಕವಾದ ಸೌಕರ್ಯಗಳನ್ನು ಹೊಂದಿದೆ. ಸುಸಜ್ಜಿತ ತರಗತಿಗಳು, ಗ್ರಂಥಾಲಯ, ಗಣಿತ, ವಿಜ್ಞಾನ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್, ಪ್ರತಿ ತರಗತಿಯಲ್ಲೂ ಆಧುನಿಕ ಶಿಕ್ಷಣ ತಂತ್ರಜ್ಞಾನಗಳನ್ನೊಳಗೊಂಡ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಶಾಸಕ ಜೆ.ಆರ್.ಲೋಬೊ, ಸಿಬಿಇ ಕಾರ್ಯದರ್ಶಿ ವಂ.ಜೆರಾಲ್ಡ್ ಡಿಸೋಜ, ಕಾರ್ಪೊರೇಟರ್ ಎ.ಸಿ. ವಿನಯ್ ರಾಜ್, ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ನ ನಿರ್ದೇಶಕ ಪ್ರೊ.ಮಾಥ್ಯು ಸಿ.ನಿನಾನ್ ಭಾಗವಹಿಸಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ವಂ.ಮೈಕಲ್ ಸಾಂತುಮಾಯರ್, ಸಿಬಿಎಸ್ ಇ ಮಾರ್ಗದರ್ಶಕಿ ಪ್ರತಿಭಾ ನೇಮಿರಾಜ್, ಪ್ರಾಂಶುಪಾಲೆ ಎಲ್ವಿರಾ ಲಸ್ರಾದೊ ಉಪಸ್ಥಿತರಿದ್ದರು.