ಮಂಗಳೂರಿನಲ್ಲಿ ಮರಣ ಮೃದಂಗ ಬಾರಿಸಿದ ಆರಂಭಿಕ ಮಹಾಮಳೆ
ಮಂಗಳೂರು, ಮೇ 30 : ಮಹಾಮಳೆಗೆ ನಲುಗಿ ಹೋಗಿದ್ದ ಕಡಲತಡಿಯ ನಗರ ಮಂಗಳೂರು ಇಂದು ಸಹಜ ಸ್ಥಿತಿಗೆ ಮರಳುತ್ತಿದೆ. ತಡ ರಾತ್ರಿಯಿಂದ ಮಳೆ ಕ್ಷೀಣಿಸಿದ್ದು, ತಗ್ಗು ಪ್ರದೇಶದಲ್ಲಿ ತುಂಬಿದ್ದ ಮಳೆ ನೀರು ಇಳಿಯತೊಡಗಿದೆ.
ಮಳೆ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತಿದ್ದು, ಮಂಗಳೂರಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮುಂದಿನ 48 ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ಸಂಭವವಿದ್ದು, ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಮಳೆ ಮುಂದುವರಿಯುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಎನ್ ಡಿಆರ್ ಎಫ್ ಪಡೆಯನ್ನು ಕರೆಸಿಕೊಂಡಿದೆ.
ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ
ತತ್ತರಿಸಿದ ಕಡಲನಗರಿ
ಮಹಾಮಳೆಯಿಂದಾಗಿ ನಿನ್ನೆ ಕಡಲನಗರಿ ಮಂಗಳೂರು ತತ್ತರಿಸಿತ್ತು. ತಗ್ಗುಪ್ರದೇಶಗಳಲ್ಲಿ ಜನಜೀವನ ಸ್ತಬ್ಧವಾಗಿತ್ತು. ಭೀಕರ ಮಳೆಯಿಂದಾಗಿ ಮಂಗಳೂರಿನಲ್ಲಿ ವಯೋವೃದ್ಧೆ ಸೇರಿದಂತೆ ಮಹಿಳೆಯೊಬ್ಬರನ್ನು ಮಹಾಮಳೆ ಬಲಿ ಪಡೆದಿದೆ. ನಿನ್ನೆ ನೂರಾರು ಮನೆ, ವಾಣಿಜ್ಯ ಸಂಕೀರ್ಣಗಳಿಗೆ ಮಳೆನೀರು ನುಗ್ಗಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಂಗಳೂರಿನಲ್ಲಿ ಆರಂಭಿಕ ಮಳೆ ಮರಣ ಮೃದಂಗ ಬಾರಿಸಿದೆ. ಮೆಕ್ನು ಚಂಡಮಾರುತ ಬಲ ಕಳೆದುಕೊಂಡಿದ್ದರೂ ಇನ್ನೊಂದೆಡೆ ಮುಂಗಾರು ಮುನ್ಸೂಚನಾ ಮಳೆ ಪರಿಣಾಮ ಕರಾವಳಿಯಾದ್ಯಂತ ಮಳೆ ಅಬ್ಬರಿಸಿದೆ. ಕೇರಳ ಪ್ರವೇಶಿಸಿರುವ ಮುಂಗಾರು ಮಾರುತಗಳ ಪರಿಣಾಮವಾಗಿ ಮಂಗಳೂರು ಸೇರಿದಂತೆ ಇತರ ಭಾಗದಲ್ಲಿ ವ್ಯಾಪಕ ಮಳೆಯಾಗಿದೆ.
ಇಬ್ಬರ ಸಾವು
ದಿನಪೂರ್ತಿ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಮಂಗಳೂರಿನ ಅತ್ತಾವರ, ಅಳಕೆ, ಕುದ್ರೋಳಿ, ಕೊಟ್ಟಾರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಸಂಕಷ್ಟ ಎದುರಿಸಿದರು. ಅಳಕೆ ಪ್ರದೇಶದಲ್ಲಿ ನೀರಿನಿಂದ ಆವೃತಗೊಂಡಿದ್ದ ಗುಜರಾತಿ ಸ್ಕೂಲ್ ಮಕ್ಕಳನ್ನು ಬೋಟ್ ಮೂಲಕ ಸ್ಥಳಾಂತರ ಮಾಡಲಾಯಿತು.
ಇನ್ನು ಮಂಗಳೂರಿನ ಕೆಪಿಟಿ ಬಳಿಯ ಉದಯನಗರದಲ್ಲಿ ಗುಡ್ಡ ಕುಸಿದ ಪರಿಣಾಮ 61 ವರ್ಷದ ಮೋಹಿನಿ ಎಂಬವರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ವಿಳಂಬ ಆಗಿದ್ದರಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ.
ಇನ್ನು ಕೊಡಿಯಾಲ್ ಬೈಲಿನಲ್ಲಿಯೂ ತಗ್ಗು ಪ್ರದೇಶ ಜಲಾವೃತಗೊಂಡಿದ್ದ ಪರಿಣಾಮ ಅಲ್ಲಿ ಒಬ್ಬಂಟಿ ವಾಸವಿದ್ದ ಮುಕ್ತಾಬಾಯಿ ಎಂಬ 80 ವರ್ಷದ ವೃದ್ಧೆ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ.
ಉಡುಪಿ- ಮಂಗಳೂರಿನ ಮಹಾಮಳೆ : ಸಾರ್ವಜನಿಕರಿಗೆ ಸಹಾಯವಾಣಿಗಳು
ಟ್ವೀಟ್ ಮಾಡಿದರು ಮೋದಿ
ಇನ್ನು ಚಂಡಮಾರುತ ಹೊಡೆತದಿಂದ ನಲುಗಿದ ಕರ್ನಾಟಕ ಕರಾವಳಿ ಪ್ರದೇಶದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಇಂಡೋನೇಷ್ಯಾ ಪ್ರವಾಸದಲ್ಲಿರುವ ಮೋದಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದ್ದಾಗಿ ಹೇಳಿಕೊಂಡಿದ್ದರು.
ಇನ್ನು ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕರೆ ಮಾಡಿ, ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಗತ್ಯ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ನೆರವು ಪಡೆಯುವಂತೆ ಸೂಚಿಸಿದ್ದಾರೆ.
ಸಜ್ಜಾದ ಜಿಲ್ಲಾಡಳಿತ
ಜಿಲ್ಲಾಡಳಿತ ನೆರೆ ಭೀತಿಯನ್ನು ಎದುರಿಸಲು ಸಜ್ಜಾಗಿದ್ದು, ಹತ್ತು ವಿಶೇಷ ರಕ್ಷಣಾ ತಂಡಗಳನ್ನು ರಚಿಸಿದೆ. ಅಲ್ಲದೆ, ಬೆಂಗಳೂರಿನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಒಂದು ತುಕಡಿ ಕರೆಸಿಕೊಂಡಿದೆ. ತುರ್ತು ಅಗತ್ಯಕ್ಕೆ ಕಂಟ್ರೋಲ್ ರೂಂ ಸಂಪರ್ಕಿಸುವಂತೆ ಜನತೆಗೆ ಜಿಲ್ಲಾಡಳಿತ ಮನವಿ ಮಾಡಿದೆ.
ಈಗಾಗಲೇ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಜನರು ಅನಗತ್ಯವಾಗಿ ಹೊರಗೆ ಸಂಚರಿಸದಂತೆ ಮತ್ತು ನೀರು ನಿಂತ ಜಾಗಕ್ಕೆ ತೆರಳದಂತೆ ಮನವಿ ಮಾಡಿಕೊಂಡಿದೆ. ಇನ್ನು ಹವಾಮಾನ ಇಲಾಖೆ ಪ್ರಕಾರ, ಜೂನ್ 2 ರ ವರೆಗೆ ಕರಾವಳಿಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.