ದಕ್ಷಿಣ ಕನ್ನಡ : ಗೃಹ ರಕ್ಷಕದಳದ ಸಿಬ್ಬಂದಿಗಳು ಈಗ ಬೀಚ್ ಗಾರ್ಡ್
ಮಂಗಳೂರು, ಜೂನ್.13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯುವ ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಲು ಜಿಲ್ಲಾಡಳಿತ ಈಗ ಗೃಹ ರಕ್ಷಕ ಸಿಬ್ಬಂದಿಗಳ ಮೊರೆ ಹೋಗಿದೆ.
ಕರಾವಳಿಯ ಬೀಚ್ ಗಳಲ್ಲಿರುವ ಸ್ಥಳೀಯ ಜೀವ ರಕ್ಷಕ ಸಿಬ್ಬಂದಿಗಳ ಎಚ್ಚರಿಕೆಯನ್ನು ಪ್ರವಾಸಿಗರು ನಿರ್ಲಕ್ಷಿಸುವ ಹಿನ್ನಲೆಯಲ್ಲಿ ಸಮವಸ್ತ್ರದೊಂದಿಗೆ ಗೃಹ ರಕ್ಷಕ ಸಿಬ್ಬಂದಿಗಳನ್ನು ಜಿಲ್ಲಾಡಳಿತ ನಿಯೋಜನೆ ಮಾಡಿದೆ.
ಕರಾವಳಿ ತಟ ರಕ್ಷಣೆಗೆ ಆನೆ ಬಲ ತುಂಬಿದ ಐಸಿಜಿಎಸ್ ವಿಕ್ರಮ್
ಕರಾವಳಿಯ ಸಮುದ್ರಗಳು ಮಳೆಗಾಲದಲ್ಲಿ ಸಮುದ್ರ ರಭಸದಿಂದ ಕೂಡಿರುತ್ತದೆ. ಭಾರಿ ಮಳೆ ಸುರಿಯುವ ಹಿನ್ನಲೆಯಲ್ಲಿ ಸಮುದ್ರದ ಅಲೆಗಳು ರಭಸದಿಂದ ಕೂಡಿರುವುದರಿಂದ ಪ್ರವಾಸಕ್ಕೆ ಬರುವ ಪ್ರವಾಸಿಗರು ಸಮುದ್ರಕ್ಕೆ ಇಳಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಕಾರ್ಯ ಆರಂಭ
ದಕ್ಷಿಣಕನ್ನಡ ಜಿಲ್ಲಾಡಳಿತ ಮಳೆಗಾಲದ ಸಂದರ್ಭದಲ್ಲಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಜಿಲ್ಲೆಯ ಎಂಟು ಸಮುದ್ರ ಕಿನಾರೆಗಳಲ್ಲಿ 24 ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಬೀಚ್ ಗಾರ್ಡ್ ಗಳಾಗಿ ನಿಯೋಜನೆ ಮಾಡಿದೆ. ಮೂವರು ಉಳ್ಳಾಲ ಸಮುದ್ರ ತೀರದಲ್ಲಿ ಭಾನುವಾರದಿಂದ ಕಾರ್ಯವನ್ನು ಆರಂಭ ಮಾಡಿದ್ದಾರೆ.
ಕರಾವಳಿಯ ಕಡಲ ತೀರಗಳಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳನ್ನು ಗುರುತಿಸಿ, ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡುವ ಕೆಲಸವನ್ನು ಗಾರ್ಡ್ ಗಳು ಮಾಡುತ್ತಿದ್ದಾರೆ. ಜಿಲ್ಲೆಯ ಸಮುದ್ರದಲ್ಲಿ ಮಳೆಗಾಲದಲ್ಲಿ ಅಬ್ಬರ ಜಾಸ್ತಿಯಿರುತ್ತದೆ.
ಸಮುದ್ರ ಕಿನಾರೆಗೆ ನೇಮಕ
ಜೀವ ರಕ್ಷಕದಳ ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರ ಜೂನ್ ತಿಂಗಳಿನಲ್ಲಿ ಜಿಲ್ಲಾಡಳಿತ ನೀಡಿದ ಆದೇಶದಂತೆ ಗೃಹರಕ್ಷಕ ಸಿಬ್ಬಂದಿ ಸಮುದ್ರ ಕಿನಾರೆಗೆ ನೇಮಕ ಮಾಡಲಾಗಿತ್ತು.
ಇದೀಗ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಆದೇಶದಂತೆ ಇಂದಿನಿಂದ ಸಮುದ್ರ ಕಿನಾರೆಗಳಲ್ಲಿ ಸೇವೆಯನ್ನು ಆರಂಭಿಸಿದ್ದಾರೆ. ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು, ಸುರತ್ಕಲ್, ಮುಕ್ಕ ಭಾಗಗಳಲ್ಲಿ ಗೃಹರಕ್ಷಕ ಸಿಬ್ಬಂದಿ ಸೇವೆ ಸಿದ್ಧವಾಗಿದ್ದಾರೆ.
8 ಮೆಗಾಫೋನ್ ಗಳು
ಪ್ರವಾಸಿಗರಿಗೆ ಸಮುದ್ರದ ಅಪಾಯದ ಅರಿವು ಇರುವುದಿಲ್ಲ, ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿಯುವುದರಿಂದ ಪ್ರವಾಸಿಗರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚು. ಈ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಹಾಗೂ ಜನರ ರಕ್ಷಣೆಯ ಉದ್ದೇಶದಿಂದ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಈ ಬಾರಿ ಪ್ರವಾಸಿಗರಿಗೆ ಸೂಚನೆ ನೀಡುವ ಸಲುವಾಗಿ 8 ಮೆಗಾಫೋನ್ ಗಳನ್ನು ನೀಡಲಾಗಿದೆ. ಎರಡು ದಿನಗಳಲ್ಲಿ ಅದನ್ನು ಹಿಡಿದುಕೊಂಡು ಪ್ರವಾಸಿಗರಿಗೆ ಮೆಘಾ ಫೋನ್ ಗಳ ಮೂಲಕ ಎಚ್ಚರಿಕೆಯನ್ನು ನೀಡಲಾಗುವುದು.
ಲಾಠಿ ಜೊತೆಗೆ ಸಮವಸ್ತ್ರ
ಜೀವ ರಕ್ಷಕದವರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ, ಅವರು ಸಮವಸ್ತ್ರದಲ್ಲಿ ಇರದೇ ಇರುವುದರಿಂದ ಅವರನ್ನು ಧಿಕ್ಕರಿಸಿ ಹೋಗುವ ಪ್ರವಾಸಿಗರೇ ಹೆಚ್ಚು. ಅದಕ್ಕಾಗಿ ಲಾಠಿ ಮತ್ತು ಸಮವಸ್ತ್ರ ಧರಿಸಿಕೊಂಡ ಗೃಹರಕ್ಷಕ ಸಿಬ್ಬಂದಿ ಎಚ್ಚರಿಕೆ ನೀಡಿದಲ್ಲಿ ಪ್ರವಾಸಿಗರೂ ಸೂಚನೆ ಪಾಲಿಸುತ್ತಾರೆ.
ಬೀಚ್ ಗಳ 50 ಮೀಟರ್ ದೂರದಲ್ಲಿ ಅಪಾಯಕಾರಿ ವಲಯ ಎಂಬ ನಾಮ ಫಲಕವನ್ನು ಅಳವಡಿಸಲಾಗಿದೆ. ಅದನ್ನು ದಾಟಿದಲ್ಲಿ ಅಪಾಯ ಆಗುವ ಸಾಧ್ಯತೆಗಳಿರುವ ಮುನ್ನೆಚ್ಚರಿಕೆಯ ಕ್ರಮವಾಗಿ ಗೃಹರಕ್ಷಕ ಸಿಬ್ಬಂದಿಗಳಿರುತ್ತಾರೆ.