ಧರ್ಮಸ್ಥಳ ಶ್ರೀ ಬಾಹುಬಲಿಗೆ 2019 ಫೆಬ್ರವರಿಯಲ್ಲಿ 4 ನೇ ಮಹಾಮಜ್ಜನ
ಮಂಗಳೂರು, ಸೆಪ್ಟೆಂಬರ್ 11: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಗೆ ಫೆಬ್ರವರಿಯಲ್ಲಿ ನಾಲ್ಕನೇ ಬಾರಿಗೆ ಮಹಾಮಜ್ಜನ ನಡೆಸಲು ತೀರ್ಮಾನಿಸಲಾಗಿದ್ದು, ಲೋಕ ಕಲ್ಯಾಣಾರ್ಥ 2019 ರ ಫೆಬ್ರವರಿಯಲ್ಲಿ ಮಹಾಮಜ್ಜನ ನಡೆಯಲಿದೆ.
ಈ ಕುರಿತು ಪೂರ್ವ ಸಿದ್ಧತೆಯ ಸಮಾಲೋಚನಾ ಸಭೆ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಸಮಿತಿ ರಚಿಸಲಾಗುತ್ತದೆ.
ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ.ಕುಮಾರಸ್ವಾಮಿ
ಶ್ರವಣಬೆಳಗೊಳದಲ್ಲಿ ಚಾತುರ್ಮಾಸ ವ್ರತಾಚರಣೆಯಲ್ಲಿರುವ ವರ್ಧಮಾನ ಸಾಗರ್ ಜೀ ಮುನಿ ಮಹಾರಾಜರು ಹಾಗೂ ಸಾಗರ ಮುನಿಮಹಾರಾಜರ ಉಪಸ್ಥಿತಿಯಲ್ಲಿ ಮುಂದಿನ ಫೆಬ್ರವರಿಯಲ್ಲಿ ಸರಳವಾಗಿ ಮಹಾಮಸ್ತಕಾಭಿಷೇಕ ನಡೆಯಲಿದೆ.
ರಾಜ್ಯಮಟ್ಟದಲ್ಲಿ ಸರಳವಾಗಿ ಮಹಾಮಸ್ತಕಾಭಿಷೇಕ ನಡೆಸಲು ಉದ್ದೇಶಿಸಲಾಗಿದ್ದು, ಉತ್ತರ ಭಾರತದವರನ್ನೂ ಈ ಮಹಾಮಸ್ತಕಾಭಿಷೇಕಕ್ಕೆ ಆಮಂತ್ರಿಸಲಾಗುವುದು ಎಂದು ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಎಲ್ಲಾ ಜೈನ ಮಠಗಳ ಭಟ್ಟಾರಕರು ಸಹ ಮಹಾಮಜ್ಜನಕ್ಕೆ ಆಹ್ವಾನಿಸಿರುವುದಾಗಿ ಅವರು ತಿಳಿಸಿದ್ದಾರೆ.
ರಾಜಕಾರಣಿಗಳಿಗೆ ಬಂದ್ ಆಗಲಿದೆಯೇ ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸಾಲಯ?
ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಮೇಲೆ ನಿಂತಿರುವ ಶಾಂತ ಚಿತ್ತ ಭಗವಾನ್ ಬಾಹುಬಲಿಯ ಮೂರ್ತಿಯನ್ನು ಕೀರ್ತಿಶೇಷ ಡಿ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿ ಆಶಯದಂತೆ ಕಾರ್ಕಳದಲ್ಲಿ ಬಾಹುಬಲಿ ಮೂರ್ತಿಯ ಕೆತ್ತನೆ ಆರಂಭಿಸಲಾಗಿತ್ತು .
ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಅವರ ಕೈಯಲ್ಲಿ ಮೂಡಿ ಬಂದಿದ್ದ ಈ ಬಾಹುಬಲಿ ಮೂರ್ತಿಯನ್ನು 1982 ರಲ್ಲಿ ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರಿಂದ ಪ್ರತಿಷ್ಠಾಪಿಸಲಾಯಿತು.
39 ಅಡಿ ಎತ್ತರದ ಬಾಹುಬಲಿಗೆ 1994, 2007 ರಲ್ಲಿ ಮಹಾಮಸ್ತಕಾಭಿಷೇಕ ಕೈಗೊಳ್ಳಲಾಗಿತ್ತು . ಇದೀಗ 2019 ರಲ್ಲಿ 4 ನೇ ಬಾರಿಗೆ ಮಹಾ ಮಸ್ತಕಾಭಿಷೇಕ ನೆರವೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ವರ್ಷ ಬಾಹುಬಲಿಗೆ ಪಾದಾಭಿಷೇಕ ನಡೆಯುತ್ತದೆ. ಆದರೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಸಲಾಗುತ್ತದೆ.