ಲಕ್ಷದೀಪೋತ್ಸವದಲ್ಲಿ ಸೆಳೆದ ಗಿಳಿಶಾಸ್ತ್ರದವರ ಭವಿಷ್ಯವಾಣಿ
ಉಜಿರೆ,ನವೆಂಬರ್ 19: ಧರ್ಮಸ್ಥಳದ ಲಕ್ಷದೀಪೋತ್ಸವದಲ್ಲಿ ಗಿಳಿಶಾಸ್ತ್ರಜ್ಞರು ದಾರಿಯ ಬದಿ ಸಾಲುಗಟ್ಟಿ ಕುಳಿತಿದ್ದರು. ತಮ್ಮ ಭವಿಷ್ಯ ತಿಳಿಯುವ ಕುತೂಹಲದಿಂದ ಜನರೂ ಇವರ ಬಳಿ ಬರುತ್ತಿದ್ದರು. ಭವಿಷ್ಯ ಕೇಳಲು ಅಣಿಯಾದವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಳ್ಳಿಗರೂ ಇದ್ದರು.
ಧರ್ಮಸ್ಥಳದ ಲಕ್ಷದೀಪೋತ್ಸವ ಆರಂಭದಿಂದ ಕೊನೆಯ ದಿನದವರೆಗೂ ಈ ಗಿಳಿಶಾಸ್ತ್ರ ಹೇಳುವವರು ಭವಿಷ್ಯ ನುಡಿಯುವ ಕಾರ್ಯದಲ್ಲಿ ತೊಡಗಿದ್ದರು. ಕಳೆದ ಎಂಟು ವರ್ಷಗಳಿಂದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಆಗಮಿಸುವ ಇವರು ಭವಿಷ್ಯ ಹೇಳುವ ಕಾಯಕದ ಮೂಲಕ ಸೆಳೆಯುತ್ತಿದ್ದಾರೆ.
ಸುಮಾರು ಎಂಟರಿಂದ ಹತ್ತು ವರ್ಷಗಳಿಂದ ದೀಪೋತ್ಸವ ಜಾತ್ರೆಗೆ ಬರುತ್ತಿದ್ದೇವೆ. ಒಬ್ಬೊಬ್ಬರಿಗೂ ನಾಲ್ಕರಿಂದ ಐದು ಸಾವಿರದವರೆಗೆ ಸಂಪಾದನೆಯಾಗುತ್ತದೆ. ಈ ಸಾನಿಧ್ಯದಲ್ಲಿ ಬಂದು ಕಾಯಕ ಮಾಡುವುದೇ ಒಂದು ಸಂತೋಷ. ಇಲ್ಲಿ ತೀರ್ಥ ಪ್ರಸಾದದ ಜೊತೆಗೆ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಹೇಳಿದವರು ಭವಿಷ್ಯಕಾರ ರಾಘವಣ್ಣ.
ಜಾತ್ರೆ ಸಂತೆಗಳಲ್ಲಿ ಗಿಳಿಶಾಸ್ತ್ರ
ಜಾತ್ರೆ ಸಂತೆಗಳಲ್ಲಿ ಸಾವಿರಾರು ಮಂದಿ ತಿರುಗಾಡುತ್ತಿರುತ್ತಾರೆ. ಆದರೆ ಎಲ್ಲರಿಗೂ ಭವಿಷ್ಯ ನುಡಿಯಬೇಕೆನ್ನಿಸುವುದಿಲ್ಲ. ಜನರ ಮುಖದ ಎಡಭಾಗವನ್ನು ಗಮನಿಸಿ ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತೇವೆ. ಅನಂತರ ಅಂಥವರನ್ನೇ ಹೆಚ್ಚು ಒತ್ತುಕೊಟ್ಟು ಕರೆಯುತ್ತೇವೆ. ಅವರ ಮುಖಲಕ್ಷಣಕ್ಕನುಗುಣವಾಗಿ ಒಂದೆರೆಡು ಮಾತುಗಳನ್ನಾಡುತ್ತೇವೆ.
ಮಾತಿನಲ್ಲಿ ನಂಬಿಕೆ ಬಂದರೆ ಕುಳಿತುಕೊಳ್ಳುತ್ತಾರೆ
ಒಂದು ವೇಳೆ ಜಾತಕ ಕೇಳಲು ಕುಳಿತವರಿಗೆ ನಮ್ಮ ಮಾತಿನಲ್ಲಿ ನಂಬಿಕೆ ಬಂದರೆ ಕುಳಿತುಕೊಳ್ಳುತ್ತಾರೆ. ಇಲ್ಲವೆ ಎದ್ದು ಹೊರಡುತ್ತಾರೆ. ಇನ್ನು ಕೆಲವರು ತಮ್ಮ ಭವಿಷ್ಯದ ಕುತೂಹಲವನ್ನರಿಯಲು ಸ್ವತಃ ಆಸಕ್ತಿ ತೋರಿ ಬಂದು ಕುಳಿತುಕೊಳ್ಳುತ್ತಾರೆ. ಆಗ ನಾವು ಅವರಿಗೆದುರಾಗುವ ಶುಭ ಅಶುಭಗಳು, ಕಷ್ಟ ಕಾರ್ಪಣ್ಯಗಳನ್ನು ತಿಳಿಸುತ್ತೇವೆ ಒಂದು ವೇಳೆ ಪರಿಹಾರ ಹೊಳೆದರೆ ತಿಳಿಸಿಕೊಡುತ್ತೇವೆ ಎಂದು ಅವರು ತಿಳಿಸಿದರು.
ನಮ್ಮ ಭವಿಷ್ಯವನ್ನು ಕೇಳಿ ತಿಳಿಯವಂತಿಲ್ಲ
ನಮ್ಮ ಪದ್ಧತಿಯ ಪ್ರಕಾರ ನಾವು ನಮ್ಮ ಭವಿಷ್ಯವನ್ನು ಕೇಳಿ ತಿಳಿಯವಂತಿಲ್ಲ. ನಾವು ನಮ್ಮ ಭವಿಷ್ಯವನ್ನರಿತು ಸಾಹುಕಾರರಾಗುವ ಆಸೆಬಿಟ್ಟು ಬೇರೊಬ್ಬರ ಒಳಿತಿಗಾಗಿ ಪರಿಹಾರಗಳನ್ನೊದಗಿಸುವಂತಾಗಬೇಕೆಂಬುದು ನಮ್ಮ ಗುರುಗಳ ಆಜ್ಞೆಯಾಗಿರುತ್ತದೆ. ಅದನ್ನು ಮೀರಿ ನಾವೆಂದಿಗೂ ನಮ್ಮ ಭವಿಷ್ಯವನ್ನರಿಯುವ ವ್ಯರ್ಥಪ್ರಯತ್ನ ಎಂದಿಗೂ ಮಾಡುವುದಿಲ್ಲ. ಅದರಿಂದ ನಮಗೆ ಅಪಾಯ ಅಶುಭಗಳೇ ಹೆಚ್ಚು ಎಂದು ಹೇಳಿದರು.
ಸುಡುಗಾಡು ಸಿದ್ಧರೆಂಬ ಅಲೆಮಾರಿಗಳು
ಸುಡುಗಾಡು ಸಿದ್ಧರೆಂಬ ಅಲೆಮಾರಿ ಜನಾಂಗಕ್ಕೆ ಸೇರಿದ ಈ ಗಿಳಿಶಾಸ್ತ್ರಕಾರರು ತಲತಲಾಂತರದಿಂದ ಈ ಕಾಯಕದೊಂದಿಗಿದ್ದಾರೆ. ವರ್ಷದ ಕೆಲವು ತಿಂಗಳಲ್ಲಿ ಮಾತ್ರ ಜಾತ್ರೆ ಸಂತೆಗಳು ನಡೆಯುತ್ತವೆಯಾದ್ದರಿಂದ ಇನ್ನುಳಿದ ದಿನಗಳಲ್ಲಿ ಕೂಲಿ ಅಥವಾ ಸಣ್ಣ ಪುಟ್ಟ ವ್ಯಾಪಾರಗಳನ್ನವಲಂಬಿಸುತ್ತೇವೆ. ಆದರೆ ಈ ದ್ವಂದ್ವದ ಅಲೆಮಾರಿ ಬದುಕಿನಿಂದ ಬೇಸತ್ತ ಇವರು ಇದೀಗ ತಮ್ಮ ಮಕ್ಕಳಿಗೆ ಶಿಕ್ಷಣ ಕಲ್ಪಿಸಿಕೊಡುವುದರ ಕಡೆಗೆ ಆದ್ಯತೆ ನೀಡುತ್ತಿದ್ದಾರೆ.
ಹೇಗೆಂದರೆ ಹಾಗೆ ನುಡಿಯಲಾಗದು
ಭವಿಷ್ಯವನ್ನು ಹೇಗೆಂದರೆ ಹಾಗೆ ನುಡಿಯಲಾಗದು. ಇದಕ್ಕಾಗಿ ಗುರುಗಳಿಂದ ವಿಶೇಷ ಭೋದನೆ ನೀಡಲಾಗುತ್ತದೆ. ಗಿಳಿಗಳನ್ನು ಪಳಗಿಸುವ ಪರಿಯನ್ನು ಕಲಿಸಿಕೊಡಲಾಗುತ್ತದೆ. ದೊಡ್ಡ ದೊಡ್ಡ ಮರಗಳಲ್ಲಿ ಕಟ್ಟಿದ ಗೂಡುಗಳಿಂದ ಗಿಳಿಯ ಮರಿಗಳನ್ನು ತಂದು ನಂತರ ಪಾನ್ಗಳನ್ನು ಆಯ್ದುಕೊಳ್ಳುವ ಕ್ರಮ ಕಲಿಸಲಾಗುತ್ತದೆ. ಕರೆದಾಗ ಬಂದು ನಾವು ಹೇಳಿದ ಹೆಸರಿನ ಅಕ್ಷರದ ಪಾನ್ ತೆಗೆದುಕೊಟ್ಟು ಮತ್ತೆ ಪಂಜರದೊಳಗೆ ಗಿಳಿ ಹಿಂತಿರುತ್ತದೆ. ನಂತರ ಆ ಪಾನ್ನಲ್ಲಿರುವ ಹೆಸರಿನ ರಾಶಿ ಫಲವನ್ನಾಧರಿಸಿ ನಾವು ಭವಿಷ್ಯ ನುಡಿಯಲಾಗುತ್ತದೆ.