ಸಾರಿಗೆ ಬಸ್ಸುಗಳಲ್ಲಿ ಕಸದ ಬುಟ್ಟಿ, ಧರ್ಮಸ್ಥಳದಲ್ಲಿ ವಿನೂತನ ಪ್ರಯೋಗ
ಮಂಗಳೂರು, ಆಗಸ್ಟ್ 28: ಸ್ವಚ್ಛ ಭಾರತ ನಿರ್ಮಲ ಭಾರತ್ ಯೋಜನೆಯಡಿ ಹಲವಾರು ಜಾಗೃತಿ ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಲೇ ಇವೆ. ತಕ್ಕಮಟ್ಟಿಗೆ ಇದಕ್ಕೆ ಸ್ಪಂದನೆ ಕೂಡ ದೊರೆತಿದೆ. ಆದರೆ ಸರ್ಕಾರಿ ಸಾರಿಗೆ ಬಸ್ ಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಇನ್ನೂ ಮೂಡಿಲ್ಲ .
ಬಸ್ಸಿನಲ್ಲಿ ಪ್ರಯಾಣಿಕರು ಎಸೆಯುವ ಖಾದ್ಯ ಪದಾರ್ಥಗಳು, ತಿಂಡಿಗಳ ಪ್ಯಾಕೆಟ್ ಗಳು, ಪ್ಲಾಸ್ಟಿಕ್ ಕೈ ಚೀಲಗಳು ಹಾಗೂ ಖಾಲಿ ಬಾಟಲ್ ಗಳು ಬಸ್ಸಿನೊಳಗೆ ಹರಡಿಕೊಂಡು ಪ್ರಯಾಣವೇ ಅಸಹ್ಯ ಎನಿಸುವಷ್ಟು ಪರಿಸ್ಥಿತಿ ಹದಗೆಟ್ಟಿರುತ್ತದೆ.
ಸ್ವಚ್ಛ ಭಾರತ ಟ್ವೀಟ್, ಜಗ್ಗಿ ವಾಸುದೇವ್ ರನ್ನು ಜಾಲಾಡಿದ ಟ್ವಿಟ್ಟಿಗರು
ಸ್ವಚ್ಛತೆಯ ಬಗ್ಗೆ ಅರಿವಿದ್ದವರು ಕೂಡ ಈ ಪದಾರ್ಥಗಳನ್ನು ಎಸೆಯಲು ಬಸ್ಸಿನೊಳಗೆ ವ್ಯವಸ್ಥೆ ಇಲ್ಲದ ಕಾರಣ ಹೊರಗೆ ಎಸೆಯುತ್ತಾರೆ.
ಬಸ್ಸಿನಲ್ಲಿ ಸ್ವಚ್ಛತೆಗೆ ಪರಿಹಾರ
ಸ್ವಚ್ಛತೆಗೆ ಆದ್ಯತೆ ನೀಡಿ ಹಾಗೂ ಕಡಿಮೆ ಖರ್ಚಿನಲ್ಲಿ ಡಸ್ಟ್ ಬಿನ್ ಗಳನ್ನು ಸರ್ಕಾರಿ ಬಸ್ ಗಳಲ್ಲಿ ಅಳವಡಿಸಿದರೆ ಹೇಗೆ? ಎಂಬ ಪ್ರಶ್ನೆ ಉದ್ಭವಿಸಿತ್ತು.
ಇದೀಗ ಈ ಚಿಂತನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಕಾರಗೊಳಿಸಲಾಗಿದೆ.
ಉಪನ್ಯಾಸಕರ ತಂಡದ ಶ್ರಮ
ಸ್ವಚ್ಛ ಭಾರತ್ ಅಭಿಯಾನದಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆ ಅಳವಡಿಸುತ್ತಿದ್ದಾರೆ .
ಡಾ .ಡಿ .ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಇದೀಗ ಬಸ್ ಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುದನ್ನು ತಡೆಯಲು ಉಜಿರೆಯ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರ ತಂಡ ಪರಿಹಾರ ಹುಡುಕಿದೆ.
ಸರಳ ಕಸದ ಬುಟ್ಟಿ
ಕಡಿಮೆ ಖರ್ಚಿನಲ್ಲಿ ಹಾಗೂ ಅತ್ಯಂತ ಸುಲಭವಾಗಿ ಅಳವಡಿಸಬಲ್ಲ ಕಸದ ಬುಟ್ಟಿ ಯೊಂದನ್ನು ಈ ತಂಡ ತಯಾರಿಸಿದೆ . ಪ್ರಾಯೋಗಿಕವಾಗಿ ದೂರ ದೂರಿಗೆ ಹೋಗುವ ಕರ್ನಾಟಕ ಸಾರಿಗೆ ವೇಗದೂತ ಬಸ್ ನಲ್ಲಿ ಈ ಬುಟ್ಟಿಯನ್ನು ಅಳವಡಿಸಲಾಗಿದೆ .ಪ್ರಯಾಣಿಕರು ಬಸ್ಸಿಗೆ ಹತ್ತುವ ಮೆಟ್ಟಿಲ ಬದಿಯಲ್ಲಿಯೇ ಈ ಬುಟ್ಟಿ ಇಡಲಾಗಿದೆ.
ಡಾ. ಡಿ ವೀರೇಂದ್ರ ಹೆಗ್ಗಡೆ
ಕರ್ನಾಟಕ ರಸ್ತೆ ಸಾರಿಗೆಯ ವೇಗದೂತ ಬಸ್ ಗೆ ಕಸದ ಬುಟ್ಟಿಯನ್ನು ಪ್ರಾಯೋಗಿಕವಾಗಿ ಅಳವಡಿಸುವ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದಾರೆ. ಈ ಪ್ರಯೋಗ ಸಫಲವಾದರೆ ಮುಂಬರುವ ದಿನಗಳಲ್ಲಿ ಧರ್ಮಸ್ಥಳಕ್ಕೆ ಬರುವ ಎಲ್ಲ ಸಾರಿಗೆ ಬಸ್ ಗಳಿಗೂ ಈ ಕಸದ ಬುಟ್ಟಿಯನ್ನು ಅಳವಡಿಸುವ ಯೋಜನೆ ಕೂಡ ರೂಪಿಸಲಾಗಿದೆ .