ಮಂಜುನಾಥ, ಕೈಗೆ ಪ್ರಸಾದವೂ ಸಿಗುತ್ತಿಲ್ಲವಲ್ಲಪ್ಪ?
ಧರ್ಮಸ್ಥಳ, ನವೆಂಬರ್ 09 : ಎಂಥ ಕಾಲ ಬಂತಪ್ಪಾ? ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ ದುಡ್ಡು ಕೊಟ್ಟರೂ ದೇವಸ್ಥಾನದ ಕೌಂಟರಿನವ ಪ್ರಸಾದ ಕೊಡುತ್ತಿಲ್ಲ!
ಇದು ವಿಶ್ವಪ್ರಸಿದ್ಧ ದೇಗುಲ ಧರ್ಮಸ್ಥಳದ ಮಂಜುನಾಥ ದೇವಾಲಯದಲ್ಲಿ ಭಕ್ತಾದಿಗಳು ಅನುಭವಿಸುತ್ತಿರುವ ಪರಿಸ್ಥಿತಿ. ನೂರು ರುಪಾಯಿ ಚಿಲ್ಲರೆ ಕೊಡದಿದ್ದಕ್ಕೆ ಭಕ್ತಾದಿಗಳಿಗೆ ಪ್ರಸಾದ ನೀಡುವುದನ್ನು ನಿರಾಕರಿಸಲಾಗುತ್ತಿದೆ.
ಇದೆಲ್ಲ ನರೇಂದ್ರ ಮೋದಿ ಅವರು ಕಪ್ಪು ಹಣದ ಮಾಲಿಕರ ಮೇಲೆ, ಭ್ರಷ್ಟಾಚಾರಿಗಳ ಮೇಲೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ನ ಈಕ್ಷಣದ ಪ್ರಭಾವ. ಕೈಯಲ್ಲಿ ಐನೂರು ಮತ್ತು ಸಾವಿರ ರುಪಾಯಿ ಹಿಡಿದುಕೊಂಡು ಪ್ರಸಾದ ಕೇಳಲು ಬಂದ ಭಕ್ತರನ್ನು ಪ್ರಸಾದ ನೀಡಲಾಗುತ್ತಿಲ್ಲ.
ನವೆಂಬರ್ 8, ಮಂಗಳವಾರ ರಾತ್ರಿಯಿಂದ 500 ರು. ಮತ್ತು 1000 ರು. ನೋಟುಗಳ ಚಲಾವಣೆಯನ್ನು ನರೇಂದ್ರ ಮೋದಿ ಸರಕಾರ ನಿಷೇಧಿಸಿದ್ದರಿಂದ ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದೆ. ಈ ಕ್ರಮದಿಂದ ಜನರು ಖುಷಿಯಾಗಿದ್ದರೂ ಚಿಲ್ಲರೆ ಸಿಗದೆ ಪರಿತಪಿಸುವಂತಾಗಿದೆ.
ಪ್ರಸಾದ ಮಾತ್ರವಲ್ಲ, ಹೋಟೆಲುಗಳಲ್ಲಿ ತಿಂಡಿ ಪಡೆಯಲಾಗುತ್ತಿಲ್ಲ, ಹೋಟೆಲುಗಳಲ್ಲಿ ರೂಮು ಸಿಗುತ್ತಿಲ್ಲ. ಅಂಗಡಿ ಇಟ್ಟುಕೊಂಡವರಿಗೆ ಬ್ಯಾಂಕಿಗೆ ಹೋಗಲಾಗುತ್ತಿಲ್ಲ. ಇಲ್ಲಿ ಏನು ಆಗುತ್ತಿದೆ ಅಂತಾನೇ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಗೊಂದಲವೋ ಗೊಂದಲ.
ಭಕ್ತಾದಿಗಳದ್ದು ಒಂದು ರೀತಿಯ ತೊಂದರೆಯಾದರೆ, ಅಂಗಡಿ ಇಟ್ಟುಕೊಂಡವರದು ಇನ್ನೊಂದು ರೀತಿಯದು. ಸಾಮಾನು ಸರಂಜಾಮು ತಂದುಕೊಟ್ಟವರಿಗೆ ನೀಡಲು ಚಿಲ್ಲರೆ ಹಣ ಇಲ್ಲದ ಕಾರಣ ಹೆಚ್ಚಿನ ಸಾಮಗ್ರಿಗಳನ್ನು ತರಿಸಲಾಗುತ್ತಿಲ್ಲ ಎಂದು ಅಂಗಡಿ ಬೀದಿಯ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.
ಎಟಿಎಂನಿಂದ ಹೆಚ್ಚು ಹಣ ತೆಗೆದುಕೊಳ್ಳಲು ನಿನ್ನೆ ಸಾಧ್ಯವಾಗಲಿಲ್ಲ, ಇಂದು ಎಲ್ಲ ಎಟಿಎಂಗಳು, ಬ್ಯಾಂಕುಗಳು ಬಂದ್ ಆಗಿದ್ದರಿಂದ ಕೈಯಲ್ಲಿ ಸಾಕಷ್ಟು ಹಣವಿಲ್ಲ. ಏಳೆಂಟು ಸಾವಿರ ವಹಿವಾಟು ನಡೆಯಬೇಕಿರುವಾಗ, ವಿನಿಮಯದ ತೊಂದರೆಯಿಂದಾಗಿ ವ್ಯಾಪಾರ ಬಿದ್ದುಹೋಗಿದೆ ಎಂದು ಮತ್ತೊಬ್ಬರು ಸಂಕಷ್ಟ ಹಂಚಿಕೊಂಡರು.