ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕರಾವಳಿಯಲ್ಲಿ ಧಾರಾಕಾರ ಮಳೆ
ಮಂಗಳೂರು, ಮಾರ್ಚ್ 14: ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಮಳೆಯ ಸಿಂಚನವಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಪರಿಣಾಮ ಕರಾವಳಿಯ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಂಗಾಳ ಕೊಲ್ಲಿಯ ತಮಿಳುನಾಡು ಮತ್ತು ಶ್ರೀಲಂಕಾ ಮಧ್ಯೆ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರಾವಳಿ ಸೇರಿದಂತೆ ರಾಜ್ಯದ ಅನೇಕ ಕಡೆ ಮಳೆಯಾಗುತ್ತಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಮೂಡಬಿದ್ರೆ, ಮಂಗಳೂರು ನಗರದ ಅನೇಕ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.
ಕಾವೇರಿ ನದಿಯಲ್ಲಿ ಕ್ಷೀಣಿಸುತ್ತಿದೆ ನೀರಿನ ಮಟ್ಟ
ಅನೇಕ ಕಡೆಗಳಲ್ಲಿ ಗುಡುಗು - ಮಿಂಚಿನಿಂದ ಕೂಡಿದ ಮಳೆಯಾಗುತ್ತಿದ್ದು, ಮಂಗಳೂರು ನಗರದಲ್ಲೂ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.
ಮೀನುಗಾರಿಕೆ ಬಂದ್
ಕನ್ಯಾಕುಮಾರಿಯಿಂದ ಕಲ್ಲಿಕೋಟೆಯವರೆಗಿನ ಕರಾವಳಿ ತೀರದ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿ ಸಮುದ್ರ ಅಲೆಗಳ ಎತ್ತರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಪ್ರಕಟಣೆ ಹೊರಡಿಸಿದೆ. ಸದ್ಯ ಈ ಸಮುದ್ರ ಒತ್ತಡ ದಕ್ಷಿಣ ಶ್ರೀಲಂಕಾದಿಂದ ವಾಯವ್ಯ ದಿಕ್ಕಿನತ್ತ ಚಲಿಸುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಕೇರಳ ಕರಾವಳಿ ತೀರದಲ್ಲಿ 2.5 ರಿಂದ 3.2 ಮೀಟರ್ವರೆಗೆ ಸಮುದ್ರ ಅಲೆಗಳು ಏರಿಳಿತ ಕಾಣಿಸುವ ಸಾಧ್ಯತೆ ಇದೆ.
ಅರಬ್ಬಿ ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರದಲ್ಲಿ ಯಾವುದೇ ರೀತಿಯ ಬೋಟುಗಳು ಮೀನುಗಾರಿಕೆಗೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈಗಾಗಲೇ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಬಿಸಿಲೇರುತ್ತಿದೆ, ಮಳೆ ಸಾಧ್ಯತೆಯೂ ಇದೆ!
ಅದೇ ರೀತಿ ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಬೋಟುಗಳು ಸಮುದ್ರದಲ್ಲಿ ಬಲೆಗಳನ್ನು ಹಾಕದಂತೆ ಹಾಗೂ ಬಲೆಗಳನ್ನು ಅಥವಾ ಅಧಿಕ ಭಾರದ ವಸ್ತುಗಳನ್ನು ಬೋಟಿನ ಡೆಕ್ ಮೇಲೆ ಇಡದಂತೆ ಸೂಚಿಸಲಾಗಿದೆ.
ಅಲ್ಲದೆ ಮುಂದಿನ ಸೂಚನೆಯವರೆಗೆ ಯಾವುದೇ ಬೋಟುಗಳು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ದಕ್ಷಿಣಕನ್ನಡ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.