ಬಿಜೆಪಿ ಖಾತೆಯಲ್ಲಿ 5.65 ಲಕ್ಷ ಕೋಟಿ ಜಮೆ : ಪಿ.ಸಿ.ಚಾಕೋ
ಮಂಗಳೂರು, ಡಿಸೆಂಬರ್ 10 :ಇಂದು ಮಂಗಳೂರಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಸಿ.ಚಾಕೋ, ಪ್ರಧಾನಿ ಮೋದಿಯವರ ನೋಟು ಅಮಾನ್ಯ ನಿರ್ಧಾರ ದೇಶದ ಮೊದಲ ಅತ್ಯಂತ ಬೃಹತ್ ಹಗರಣವಾಗಿದೆ ಎಂದು ಆರೋಪಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಟು ಅಮಾನ್ಯ ನಿರ್ಧಾರ ದೇಶದ ಆರ್ಥಿಕ ಸುಧಾರಣೆಯ ನಿರ್ಧಾರವಲ್ಲ. ಈ ನಿರ್ಧಾರವನ್ನು ನಾಲ್ಕು ತಿಂಗಳ ಹಿಂದೆಯೇ ಪ್ರಧಾನಿ ತಳೆದಿದ್ದರು. ಅಮಾನ್ಯ ನಿರ್ಧಾರ ಘೋಷಿಸುವ ಮೊದಲ ಒಂದು ತಿಂಗಳಲ್ಲಿ ಬಿಜೆಪಿ ಖಾತೆಯಲ್ಲಿ 5.65 ಲಕ್ಷ ಕೋಟಿ ಜಮೆಯಾಗಿದೆ. ಈ ಹಣದಲ್ಲಿ ಪಕ್ಷಕ್ಕೆ ಭಾರೀ ಪ್ರಮಾಣದ ಭೂ ಖರೀದಿ ಮಾಡಲಾಗಿದೆ. ಇದರಲ್ಲಿ ಹೆಚ್ಚಿನವು ಪಕ್ಷಾಧ್ಯಕ್ಷ ಅಮಿತ್ ಶಾ ಹೆಸರಿನಲ್ಲಿ ಖರೀದಿ ಮಾಡಲಾಗಿದೆ. ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದವರು ಆಗ್ರಹಿಸಿದರು.[ನಾನು ಸಾಯಲಿ ಬದುಕಲಿ ಮೋದಿಯನ್ನು ಕಿತ್ತೊಗೆಯಿರಿ: ಮಮತಾ]
ದೇಶದಲ್ಲಿ 0.25% ನಕಲಿ ನೋಟು ಚಲಾವಣೆಯಲ್ಲಿದೆ ಎಂಬುದು ಕೇಂದ್ರ ಬಿಜೆಪಿ ಸರ್ಕಾರದ ಅಧಿಕೃತ ಅಧ್ಯಯನ ವರದಿ, ಆದರೆ ಇದಕ್ಕಾಗಿ 86 ಶೇ. ಕರೆನ್ಸಿ ಅಮಾನ್ಯಗೊಳಿಸಿದ್ದು ಸರಿಯಲ್ಲ. ಹೊಸ ನೋಟುಗಳ ಮುದ್ರಣಕ್ಕೆ ರು 14 ಸಾವಿರ ಕೋಟಿ ವ್ಯಯಿಸಲಾಗಿದೆ. ಆದ್ದರಿಂದ ನೋಟು ಅಮಾನ್ಯ ಬಡಜನರ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಎಂದವರು ಟೀಕಿಸಿದರು.[ನೋಟು ಬ್ಯಾನ್: ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಕನ್ನಡ ಲೇಖಕ]
ಉಗ್ರರು ಕಪ್ಪುಹಣ ಬಳಸುತ್ತಿದ್ದಾರೆ ಎಂದು ಮೋದಿ ಭ್ರಮೆ ಹುಟ್ಟಿಸಿದ್ದಾರೆ. ಆದರೆ ಉಗ್ರರು ವಿದೇಶಿ ಕರೆನ್ಸಿ ಬಳಸಿ ಶಸ್ತ್ರಾಸ್ತ್ರ, ಮೊಬೈಲ್ ಫೋನ್ ಸೇರಿದಂತೆ ಪರಿಕರಗಳನ್ನು ಖರೀದಿಸುತ್ತಿದ್ದಾರೆ. ನೋಟು ಅಮಾನ್ಯದಿಂದ ಉಗ್ರಗಾಮಿ ಚಟುವಟಿಕೆ ನಿಯಂತ್ರಣ ಎಂಬ ಪ್ರಧಾನಿ ವಾದ ಶುದ್ಧ ಸುಳ್ಳು ಎಂದವರು ಅವರು ಆರೋಪಿಸಿದರು.