ನೋಟ್ ಬ್ಯಾನ್: ಮಂಗಳೂರಿನ ವರ್ಧಮಾನ್ ಹೋಟೆಲ್ನಲ್ಲಿ ಉಚಿತ ಊಟ
ಐನೂರು-ಸಾವಿರ ನೋಟುಗಳು ನಿಷೇಧದಿಂದಾಗಿ ಹಣವಿಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಮಂಗಳೂರಿನ ವರ್ಧಮಾನ ಹೊಟೇಲ್ ಸಾರ್ವಜನಿಕರಿಗೆ ಡಿ.30ರ ವರೆಗೆ ಉಚಿತ ಓಟ ಮತ್ತು ಉಪಹಾರ ನೀಡುವ ಮೂಲಕ ನೋಟು ನಿಷೇಧಕ್ಕೆ ಬೆಂಬಲಿಸಿದ್ದಾರೆ.
ಮಂಗಳೂರು, ಡಿಸೆಂಬರ್. 02 : 500-1000 ರೂ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಡುತ್ತಿರುವುದನ್ನು ನೀವು ನೋಡುತಿದ್ದಿರಿ. ಇದಲ್ಲದೆ ಎರಡು ಸಾವಿರ ಮುಖಬೆಲೆಯ ನೋಟು ಜಾರಿಗೆ ತಂದಿರುವುದರಿಂದ ಜನರಿಗೆ ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಮೋದಿ ಅವರ ಈ ನೋಟ್ ಬ್ಯಾನ್ ಬೆಂಬಲಿಸಿ ಹಸಿದ ಹೊಟ್ಟೆಗಳಿಗೆ ಮಂಗಳೂರಿನ ವರ್ಧಮಾನ್ ಹೋಟೆಲ್ ಡಿಸೆಂಬರ್ 30 ರ ವರೆಗೆ ಉಚಿತ ಉಪಹಾರ ಹಾಗೂ ಊಟ ಹಾಕುತ್ತಿದೆ. ಈ ಮೂಲಕ ನೋಟು ನಿಷೇಧಕ್ಕೆ ಬೆಂಬಲ ಸೂಚಿಸಿದೆ.
ಮಂಗಳೂರಿನ ಯೆಯ್ಯಾಡಿ ಬಳಿ ಇರುವ ವರ್ಧಮಾನ್ ಎಂಬ ಹೋಟೆಲ್ ಜನರ ಕಷ್ಟ ಅರಿತು ಚಿಲ್ಲರೆಯ ಅಭಾವದಿಂದಾಗಿ ಡಿಸೆಂಬರ್. 30ರ ತನಕ ಯಾವುದೇ ನಗದು ಸ್ವೀಕರಿಸುವುದಿಲ್ಲ ಎಂದು ನೋಟಿಸ್ ಹಾಕುವ ಮೂಲಕ ಜನರಿಗೆ ಉಚಿತವಾಗಿ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿದೆ.
ಹೌದು ಈ ಕಾಲದಲ್ಲಿ ಯಾರು ಪಾಪ ಪುಣ್ಯ ನೋಡುತ್ತಾರೆ? ಎಲ್ಲರೂ ತಮ್ಮದೇ ಆದ ಜಗತ್ತಿನಲ್ಲಿ ಸ್ವಾರ್ತಿಗಳಾಗಿ ಹಣದ ವಿಷಯದಲ್ಲಂತೂ ಯಾರನ್ನೂ ನಂಬದ ನಿದರ್ಶನ ದಿನನಿತ್ಯ ಮಾಧ್ಯಮಗಳಲ್ಲಿ ಕಾಣಸಿಗುತ್ತದೆ.
ಆದರೆ, ಈ ಹೋಟೆಲ್ ಸ್ವಚ್ಛ ಮನಸ್ಸಿನಿಂದ ಜನರ ಕಷ್ಟ ಅರಿತು ಅವರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದು ನಿಜಕ್ಕೂ ಪ್ರಶಂಸನೀಯ. ಹಣ ಪಡೆಯದೆ ಉಚಿತವಾಗಿ ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಇದರ ಜತೆಗೆ ಹೊಂದಾಣಿಕೆಯಿಂದ ಜೀವನ ಸಾಗಿಸುವ ಮತ್ತು ಆರೋಗ್ಯವಂತ ದೇಶ ಕಟ್ಟುವ ಬಗ್ಗೆ ಉತ್ತಮ ಸಂದೇಶವನ್ನು ಜನರಿಗೆ ಸಾರಲಾಗುತ್ತಿದೆ.
ಈ ರೀತಿಯಲ್ಲಿ ಪ್ರಧಾನಿ ಮೋದಿಯವರ ದಿಟ್ಟ ನಿಲುವಿಗೆ ಅಳಿಲು ಸೇವೆ ಮಾಡಿದಂತಾಗುತ್ತದೆ ಎಂಬುದು ಈ ಹೋಟೆಲ್ ಮಾಲೀಕರ ಮಾತು.
''ನಾವು ನೋಟು ಮತ್ತು ಚಿಲ್ಲರೆಯ ಅಭಾವದ ನೆಪವೊಡ್ಡಿ ಡಿ. 30ರ ತನಕ ಯಾವುದೇ ಊಟ- ಉಪಹಾರ ನಿರಾಕರಿಸುವುದಿಲ್ಲ, ಹಣವಿದ್ದರೆ ಕೊಡಿ, ಇಲ್ಲದಿದ್ದರೆ ಡಿಸೆಂಬರ್ ನಂತರ ಕೊಟ್ಟದ್ದನ್ನು ಸ್ವೀಕರಿಸುತ್ತೇವೆ '' ಎನ್ನುವ ನೋಟಿಸ್ ಹೋಟೆಲ್ ಮುಂಭಾಗದಲ್ಲಿ ಹಾಕಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಉಚಿತವಾಗಿ ಊಟ ಉಪಹಾರ ಕೂಡಾ ಕೊಡುತ್ತಿದ್ದಾರೆ. ಈ ರೀತಿಯಾಗಿ ನೋಟು ರದ್ದತಿಗೆ ಬೆಂಬಲವನ್ನು ಸೂಚಿಸಿದ್ದಾರೆ.
ಪ್ರೇರಣೆ ಹೇಗೆ: ವರ್ಧಮಾನ್ ಹೋಟೆಲ್ ಮಾಲೀಕರಾದ ರಣ್ ಧೀರ್ ಮತ್ತು ಅವರ ಪುತ್ರ ಶಶಾಂಕ್ ಈ ಅನ್ನದಾನ ಮಾಡಿದ ದಾನಿಗಳು . ಜನರು ನೋಟಿಗಾಗಿ ಪರಾಡುವ ಸ್ಥಿತಿ ಕಂಡು ಮನಕರಗಿ ಉಚಿತವಾಗಿ ಊಟೋಪಚಾರ ಮಾಡುತ್ತಿದ್ದಾರೆ.
ಇನ್ನು ಒನ್ ಇಂಡಿಯಾ ಜೊತೆ ಮಾತನಾಡಿದ ಹೋಟೆಲ್ ಮಾಲೀಕ ಶಶಾಂಕ್, ''ಕೇಂದ್ರ ಸರ್ಕಾರ ದಿಢೀರ್ ರಾತ್ರೋ ರಾತ್ರಿ ನೋಟು ನಿಷೇಧ ಮಾಡಿದ ಹಿನ್ನೆಲೆ ಜನರ ನೋಟಿಗಾಗಿ ಪರದಾಟ ಕಂಡು ಈ ತೀರ್ಮಾನಕ್ಕೆ ಬಂದಿದ್ದೆವು.
ಹೌದು ಜನರು ಮೊದಲ ದಿನ ನಮ್ಮ ಹೋಟೆಲಿನ ಮೇಲ್ಭಾಗದಲ್ಲಿರುವ ಬ್ಯಾಂಕ್ನಲ್ಲಿ ಸಾಲುಗಟ್ಟಿ ಹಣ ವಿನಿಮಯಕ್ಕಾಗಿ ನಿಂತಿರುವುದನ್ನು ಕಂಡು ಬೇಸರವಾಯಿತು. ಕೆಲವರಂತೂ ಹಣ ಇಲ್ಲ ಊಟ ಕೊಡುತ್ತೀರಾ ಎಂದು ಬಂದು ಮನವಿ ಮಾಡುತ್ತಿದ್ದರು.
ಇದನ್ನೆಲ್ಲ ಗಮನಿಸಿದ ನಾನು ಜನರ ಕಷ್ಟಕ್ಕೆ ಒಂದಿಷ್ಟು ಸಹಾಯ ಮಾಡುವುದು ಲೇಸು ಎಂದು ದೃಢ ನಿರ್ಧಾರ ಮಾಡಿ ಬಂದ ಜನರಿಗೆ ಉಚಿತವಾಗಿ ಊಟದ ವ್ಯವಸ್ಥೆ ಮಾಡಿದೆ. ಹೀಗೆ ಕೆಲ ದಿನಗಳ ಬಳಿಕ ಸರ್ಕಾರ 2000 ಮುಖಬೆಲೆಯ ನೋಟುಗಳನ್ನು ಪರಿಚಯಿಸಿತು. ಈ ಸಂದರ್ಭ ಹೋಟೆಲಿಗೆ ಬಂದ ಜನರಿಗೆ ಚಿಲ್ಲರೆ ಒದಗಿಸುವುದೇ ಒಂದು ಸವಾಲಾಗಿ ಬಿಟ್ಟಿತ್ತು.
ಆದರೆ ಹಸಿದು ಬಂದ ಜನರನ್ನು ವಾಪಸ್ಸು ಕಳುಹಿಸಲು ಮನಸ್ಸಾಗಲಿಲ್ಲ. ಈ ಸಂದರ್ಭ ಉಚಿತ ಊಟದ ವ್ಯವಸ್ಥೆಯನ್ನು ಮುಂದುವರಿಸಿದ್ದೇವೆ. ಕೆಲವರು ಹಣ ಕೊಟ್ಟು ಊಟ ಮಾಡಿ ಹೋಗಿದ್ದಾರೆ ಇನ್ನೂ ಕೆಲವರು ಹಣದ ಅಭಾವದಿಂದ ಮುಂದಿನ ದಿನಗಳಲ್ಲಿ ಪಾವತಿಸುವುದಾಗಿ ತಿಳಿಸಿದ್ದಾರೆ. ಏನೇ ಆಗಲಿ ಜನರ ಸಂಕಷ್ಟಕ್ಕೆ ಒಂದಿಷ್ಟು ಸಹಾಯ ಮಾಡಿದರೆ ಏನೂ ನಷ್ಟವಿಲ್ಲ.
ಎಲ್ಲರೂ ನಂಬಿಕಸ್ಥ ಜನರು. ಈ ರೀತಿಯಾಗಿ ಪ್ರಧಾನಿ ಮೋದಿಯವರಿಗೆ ಪರೋಕ್ಷವಾಗಿ ಬೆಂಬಲ ಸೂಚಿದ್ದೇವೆ. ಒಬ್ಬರಿಗೊಬ್ಬರು ಸಹಾಯ ಮಾಡಿ ಸಹಬಾಳ್ವೆಯ ಜೀವನ ನಡೆಸಬೇಕು, ಉತ್ತಮ ಸಮಾಜ ಕಟ್ಟುವಲ್ಲಿ ಮುನ್ನುಡಿಯಾಗಬೇಕು '' ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.
ನಮ್ಮ ಮಂಗಳೂರಿನಲ್ಲಿ ಇಂತಹ ಸಹೃದಯ ಹೊಂದಿರುವ ಈ ವರ್ಧಮಾನ್ ಹೋಟೆಲ್ನ ಮಾಲೀಕರು ನಿಜಕ್ಕೂ ಪ್ರಶಂಸೆಗೆ ಅರ್ಹರು. ಸ್ವ ಪ್ರರಣೆಯಿಂದ ಜನರ ಕಷ್ಟಕ್ಕೆ ಓಗೊಟ್ಟ ಈ ಹೋಟೆಲ್ನ ಮಾಲೀಕರು ಹಸಿದು ಬಂದ ಜನರಿಗೆ ಉಚಿತವಾಗಿ ಅನ್ನದಾನ ಮಾಡಿದ್ದಾರೆ. ಪರ ಸೇವೆಯೇ ದೇವರ ಸೇವೆ ಎಂಬ ಗಾದೆ ಮಾತಿಗೆ ಇವರೇ ಜೀವಂತ ನಿದರ್ಶನ.